ಮೊಮ್ಮಗನ ಮದುವೆ ನೋಡುವ ಆಸೆಯಲ್ಲಿದ್ದ ಅಜ್ಜಿಗೆ ಶಾಕ್​​​: ಇಡೀ ಊರಿಗೆ ಬಾಡೂಟ ಹಾಕಿಸಿ ಮದುಮಗ ನಾಪತ್ತೆ! – Kannada News | Bettadooru Missing: Muddurangappa Vanishes Post Feast Before Wedding

ರಾಯಚೂರು, ಫೆ.21: ಇನ್ನೊಂದು ತಿಂಗಳಲ್ಲಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವಕನೊಬ್ಬ, ಇಡೀ ಊರಿಗೆ ಬಾಡೂಟ ಹಾಕಿಸಿದ ಮಾರನೇ ದಿನವೇ ನಾಪತ್ತೆಯಾಗಿರುವ ವಿಚಿತ್ರ ಹಾಗೂ ಆತಂಕಕಾರಿ ಘಟನೆ ಮಾನ್ವಿ ತಾಲೂಕಿನ ಬೆಟ್ಟದೂರು ಗ್ರಾಮದಲ್ಲಿ (Raichur missing groom) ನಡೆದಿದೆ. ಬೆಟ್ಟದೂರು ಗ್ರಾಮದ ನಿವಾಸಿ 25 ವರ್ಷದ ಮುದ್ದುರಂಗಪ್ಪ ನಾಪತ್ತೆಯಾದ ಯುವಕ. ಬಿಎ ಪದವೀಧರನಾಗಿದ್ದ ಈತ ಹೊಲದ ಕೆಲಸ ಮಾಡಿಕೊಂಡಿದ್ದ. ಕಳೆದ ಒಂದು ವರ್ಷದ ಹಿಂದೆ ಸಂಬಂಧಿಕರ ಯುವತಿಯೊಂದಿಗೆ ಈತನ ಮದುವೆ ನಿಶ್ಚಯವಾಗಿತ್ತು. ಇನ್ನೇನು ಒಂದು ತಿಂಗಳಲ್ಲಿ ಮದುವೆ ನಡೆಯಬೇಕಿತ್ತು.

ಮುದ್ದುರಂಗಪ್ಪನ ಕುಟುಂಬದಲ್ಲಿ ಮದುವೆಗೂ ಮುನ್ನ ಮರಿ ಹೊಡೆದು ಇಡೀ ಊರಿಗೆ ಬಾಡೂಟ ಹಾಕಿಸುವ ಸಂಪ್ರದಾಯವಿದೆ. ಅದರಂತೆ ಕಳೆದ ಜನವರಿಯಲ್ಲಿ ಮುದ್ದುರಂಗಪ್ಪ ಸಂಭ್ರಮದಿಂದ ಇಡೀ ಊರಿಗೆ ಬಾಡೂಟ ಹಾಕಿಸಿದ್ದ. ಆದರೆ, ಈ ಸಂಭ್ರಮದ ಮರುದಿನವೇ ಆತ ಯಾರಿಗೂ ತಿಳಿಸದೆ ಏಕಾಏಕಿ ನಾಪತ್ತೆಯಾಗಿದ್ದಾನೆ.

ಮುದ್ದುರಂಗಪ್ಪ ಮತ್ತು ಆತನ ತಮ್ಮ-ತಂಗಿ ಚಿಕ್ಕವರಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದರು. ಅಂದಿನಿಂದ ಅಜ್ಜಿ ನಾಗಮ್ಮ ಅವರೇ ಕಷ್ಟಪಟ್ಟು ಮೊಮ್ಮಕ್ಕಳನ್ನು ಸಾಕಿ ಸಲಹಿದ್ದರು. ಮೊಮ್ಮಗ ಮದುವೆಯಾಗಿ ಸುಖವಾಗಿರುತ್ತಾನೆ ಎಂದು ಕನಸು ಕಂಡಿದ್ದ ಅಜ್ಜಿಗೆ ಈಗ ಮೊಮ್ಮಗ ನಾಪತ್ತೆಯಾಗಿರುವುದು ಅರಗಿಸಿಕೊಳ್ಳಲಾಗುತ್ತಿಲ್ಲ. ನನ್ನ ಮೊಮ್ಮಗ ಮರಳಿ ಬರಲಿ ಎಂದು ನಾಗಮ್ಮ ದೇವರಲ್ಲಿ ಪ್ರಾರ್ಥಿಸುತ್ತಾ ಉಪವಾಸ ಕುಳಿತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಮಹಿಳೆಯರೇ ಎಚ್ಚರ: ಮತ್ತೆ ನಗರದಲ್ಲಿ ಸರಗಳ್ಳರು ಹಾವಳಿ!

ಘಟನೆಗೆ ಸಂಬಂಧಿಸಿದಂತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕುಟುಂಬಸ್ಥರು ಮತ್ತು ಊರಿನವರು ಮಂತ್ರಾಲಯ, ಆಂಧ್ರಪ್ರದೇಶ, ತೆಲಂಗಾಣ, ಯಾದಗಿರಿ, ಬಳ್ಳಾರಿ ಹಾಗೂ ಕಲಬುರ್ಗಿ ಸೇರಿದಂತೆ ಹಲವೆಡೆ ಹುಡುಕಾಟ ನಡೆಸುತ್ತಿದ್ದಾರೆ. ಫೋಟೋದಲ್ಲಿರುವ ಯುವಕ (ಮುದ್ದುರಂಗಪ್ಪ) ಎಲ್ಲಾದರೂ ಕಂಡುಬಂದಲ್ಲಿ ಕೂಡಲೇ ಮಾನ್ವಿ ಪೊಲೀಸ್ ಠಾಣೆಗೆ ಅಥವಾ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲು ಎಂದು ಸೋಶಿಯಲ್​ ಮೀಡಿಯಾದಲ್ಲೂ ಮನವಿ ಮಾಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *