ಯಾದಗಿರಿಯಲ್ಲಿ 16 ಸಾವಿರಕ್ಕೂ ಹೆಚ್ಚು ಗರ್ಭಧಾರಣೆಗಳ ಮುಂದಿನ ಮಾಹಿತಿಯೇ ಇಲ್ಲ! ತಜ್ಞರ ಸಮಿತಿ ವರದಿಯಲ್ಲಿ ಆಘಾತಕಾರಿ ಅಂಶ ಬಯಲು – Kannada News | Yadgir Pregnancy Tracking Gaps Raise Concern: Expert Panel Flags Missing Follow up in Over 16,000 Cases

ಯಾದಗಿರಿ ಜಿಲ್ಲಾಸ್ಪತ್ರೆ (ಸಾಂದರ್ಭಿಕ ಚಿತ್ರ)Image Credit source: tv9

ಯಾದಗಿರಿ, ಜುಲೈ 14: ಯಾದಗಿರಿ (Yadgir) ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 53,595 ಮಹಿಳೆಯರು ಗರ್ಭಧಾರಣೆ ದಾಖಲಿಸಿಕೊಂಡಿದ್ದಾರೆ. ಇವರಲ್ಲಿ 35,424 ಮಹಿಳೆಯರಿಗೆ ಹೆರಿಗೆ ಆಗಿದ್ದು, 2,055 ಪ್ರಕರಣಗಳಲ್ಲಿ ಗರ್ಭಪಾತ ದಾಖಲಾಗಿದೆ. ಆದರೆ ಉಳಿದ 16,116 ಗರ್ಭಧಾರಣೆ ಪ್ರಕರಣಗಳ ಅಂತಿಮ ಫಲಿತಾಂಶ ಅಥವಾ ಮುಂದಿನ ಮಾಹಿತಿ ದಾಖಲೆಗಳಲ್ಲಿ ಲಭ್ಯವಾಗಿಲ್ಲ ಎಂಬ ಆಘಾತಕಾರಿ ವಿಚಾರ ಬಯಲಾಗಿದೆ. ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಗರ್ಭಧಾರಣೆ ಮೇಲ್ವಿಚಾರಣೆ ಕುರಿತಂತೆ ಕೇಳಿಬಂದಿದ್ದ ಆರೋಪಗಳ ಹಿನ್ನೆಲೆಯಲ್ಲಿ ಅಂದಿನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯಮಟ್ಟದ ಬಹುಶಿಸ್ತೀಯ ತಜ್ಞರ ಸಮಿತಿಯನ್ನು ರಚಿಸಿದ್ದರು. ಸಮಿತಿ ಕಳೆದ ಏಪ್ರಿಲ್ 6ರಿಂದ 10ರವರೆಗೆ ಐದು ದಿನಗಳ ಕಾಲ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿ, 74 ಪುಟಗಳ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಅನೇಕ ಆಘಾತಕಾರಿ ಅಂಶಗಳು ಬಯಲಾಗಿವೆ.

ವರದಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 53,595 ಮಹಿಳೆಯರು ಗರ್ಭಧಾರಣೆ ದಾಖಲಿಸಿಕೊಂಡಿದ್ದಾರೆ. ಇವರಲ್ಲಿ 35,424 ಮಹಿಳೆಯರಿಗೆ ಹೆರಿಗೆ ಆಗಿದ್ದು, 2,055 ಪ್ರಕರಣಗಳಲ್ಲಿ ಗರ್ಭಪಾತ ದಾಖಲಾಗಿದೆ. ಆದರೆ ಉಳಿದ 16,116 ಗರ್ಭಧಾರಣೆ ಪ್ರಕರಣಗಳ ಅಂತಿಮ ಫಲಿತಾಂಶ ಅಥವಾ ಮುಂದಿನ ಮಾಹಿತಿ ದಾಖಲೆಗಳಲ್ಲಿ ಲಭ್ಯವಾಗಿಲ್ಲ. ಈ ಅಂಶವೇ ಆರೋಗ್ಯ ಇಲಾಖೆಯ ಮೇಲ್ವಿಚಾರಣಾ ವ್ಯವಸ್ಥೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಸಾಧ್ಯತೆ

ವರದಿಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಸಾಧ್ಯತೆ, ಬಾಲಗರ್ಭಿಣಿಯರಲ್ಲಿ ಗರ್ಭಪಾತ, ಶಿಶು ಮರಣ ಪ್ರಮಾಣ ಹೆಚ್ಚಿರುವುದು ಹಾಗೂ ಗರ್ಭಧಾರಣೆಗಳ ಸಮರ್ಪಕ ಅನುಸರಣೆ (Follow-up) ಕೊರತೆಯ ಬಗ್ಗೆಯೂ ಉಲ್ಲೇಖಿಸಲಾಗಿದೆ. ಗರ್ಭಧಾರಣೆಯ 12 ವಾರಗಳ ಬಳಿಕ ಕೆಲವು ಕಡೆ ಅಕ್ರಮವಾಗಿ ಭ್ರೂಣದ ಲಿಂಗ ಪತ್ತೆ ಪರೀಕ್ಷೆ ನಡೆಸಲಾಗುತ್ತಿರುವ ಸಾಧ್ಯತೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ. ಅಲ್ಲದೆ, ಗರ್ಭಧಾರಣೆ ವೇಳೆ ನೀಡುವ ನೋಂದಣಿ ದಾಖಲೆಗಳನ್ನು ನಾಶಪಡಿಸಲಾಗುತ್ತಿದೆ ಹಾಗೂ ಗರ್ಭಪಾತ ಮಾತ್ರೆಗಳ ದುರ್ಬಳಕೆ ನಡೆಯುತ್ತಿರುವ ಆರೋಪಗಳನ್ನೂ ವರದಿ ಉಲ್ಲೇಖಿಸಿದೆ.

ಬಾಲ್ಯ ವಿವಾಹ ಹೆಚ್ಚಳ

ಇನ್ನೊಂದು ಆತಂಕಕಾರಿ ಅಂಶವೆಂದರೆ, ಜಿಲ್ಲೆಯಲ್ಲಿ 18 ವರ್ಷ ತುಂಬುವ ಮೊದಲೇ ಶೇ 33.2ರಷ್ಟು ಮಹಿಳೆಯರ ವಿವಾಹ ನಡೆಯುತ್ತಿರುವುದು. ಇದರಿಂದ ಬಾಲ್ಯ ಗರ್ಭಧಾರಣೆಗಳ ಪ್ರಮಾಣ ಹೆಚ್ಚುತ್ತಿರುವ ಸಾಧ್ಯತೆಯನ್ನೂ ವರದಿ ಪ್ರಸ್ತಾಪಿಸಿದೆ. ಅವಿವಾಹಿತೆಯರ ಗರ್ಭಪಾತ ಪ್ರಕರಣಗಳಲ್ಲಿ ಕುಟುಂಬದವರು ಮಾಹಿತಿ ನೀಡದಿರುವುದು ತನಿಖೆಗೆ ಅಡ್ಡಿಯಾಗುತ್ತಿದೆ ಎಂದು ವರದಿ ಹೇಳಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಹೇಳುವುದೇನು?

ಆದರೆ, ಈ ಆರೋಪಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಬಿರಾದಾರ್ ತಳ್ಳಿಹಾಕಿದ್ದಾರೆ. ವೈದ್ಯಕೀಯ ಕಾರಣಗಳಿಂದಲೇ ಗರ್ಭಪಾತಗಳು ನಡೆದಿವೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಗರ್ಭಪಾತದ ಪ್ರಮಾಣ ಶೇ 4.6 ಇದ್ದರೆ, ಯಾದಗಿರಿ ಜಿಲ್ಲೆಯಲ್ಲಿ ಅದು ಕೇವಲ ಶೇ 2.7 ಮಾತ್ರ ಇದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಂಡ್ಯ ಹೆಣ್ಣು ಭ್ರೂಣ ಪತ್ತೆ, ಹತ್ಯೆ: ಕಾರಿನಲ್ಲಿ ಸ್ಕ್ಯಾನಿಂಗ್ ಮಾಡುತ್ತಿದ್ದ ಆರು ಮಂದಿ ಬಂಧನ

ಈ ನಡುವೆ ತಜ್ಞರ ಸಮಿತಿಯ ವರದಿ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಸ್ಪಷ್ಟೀಕರಣದ ನಡುವೆ ವ್ಯತ್ಯಾಸ ಕಂಡುಬಂದಿದ್ದು, ಈ ವಿಚಾರದಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *