T20 World Cup 2026: ಟಿ20 ವಿಶ್ವಕಪ್ನ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ದಾಖಲಿಸಿ ಟೀಮ್ ಇಂಡಿಯಾ ಸೆಮಿಫೈನಲ್ಗೇರಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 195 ರನ್ಗಳು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ ಅಜೇಯ 97 ರನ್ ಸಿಡಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ 19.2 ಓವರ್ಗಳಲ್ಲಿ 199 ರನ್ ಬಾರಿಸಿ 5 ವಿಕೆಟ್ಗಳ ಜಯ ಸಾಧಿಸಿದೆ.
ಈ ಗೆಲುವಿನ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಅವರನ್ನು ಹಾಡಿ ಹೊಗಳಲಾಗುತ್ತಿದೆ. ಇದಾಗ್ಯೂ ಅಂತಿಮ ಹಂತದಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಬೌಂಡರಿಗಳನ್ನು ಬಾರಿಸಿ ಗೆಲುವಿಗೆ ತನ್ನದೇಯಾದ ಕೊಡುಗೆ ನೀಡಿದ ಶಿವಂ ದುಬೆ ಅವರನ್ನು ಯಾರು ಸಹ ಪ್ರಶಂಸಿಸುತ್ತಿಲ್ಲ ಎಂದು ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಬುಮ್ರಾ, ಶಿವಂ ದುಬೆ ಬಾರಿಸಿದ ಆ ಎರಡು ಬೌಂಡರಿಗಳು ಕ್ರಿಕೆಟ್ನ ಅಂಕಿ-ಅಂಶಗಳ ಪುಸ್ತಕದಲ್ಲಿ ಅಥವಾ ದಾಖಲೆಗಳಲ್ಲಿ ಅಷ್ಟಾಗಿ ಎದ್ದು ಕಾಣದಿರಬಹುದು. ಆದರೆ ನಿಜವಾದ ಕ್ರಿಕೆಟ್ ಜ್ಞಾನ ಇರುವವರಿಗೆ ಗೊತ್ತು, ಆ ಎರಡು ಬೌಂಡರಿಗಳು ಅಂತಿಮ ಓವರ್ಗೂ ಮುನ್ನ ನಮ್ಮ ಮೇಲಿದ್ದ ಒತ್ತಡವನ್ನು ಸಂಪೂರ್ಣವಾಗಿ ಕಡಿಮೆ ಮಾಡಿದವು.
19ನೇ ಓವರ್ನಲ್ಲಿ ಶಿವಂ ದುಬೆ ಬಾರಿಸಿದ 2 ಫೋರ್ ಫೋರ್ಗಳಿಂದಾಗಿ ಕೊನೆಯ ಓವರ್ನಲ್ಲಿ ಗೆಲುವಿನ ರನ್ ರೇಟ್ ಕಡಿಮೆಯಾಯಿತು. ಇದರಿಂದ ಅಂತಿಮ ಓವರ್ನಲ್ಲಿ ಭಾರತದ ಬ್ಯಾಟರ್ಗಳಿಗೆ ನಿರಾಳವಾಗಿ ಆಡಲು ಸಹಾಯ ಮಾಡಿತು. ಇದಾಗ್ಯೂ ಯಾರು ಸಹ ಶಿವಂ ದುಬೆ ಅವರ ಈ ಕೊಡುಗೆಯನ್ನು ಸ್ಮರಿಸುತ್ತಿಲ್ಲ ಎಂದು ಜಸ್ಪ್ರೀತ್ ಬುಮ್ರಾ ಬೇಸರ ಹೊರಹಾಕಿದ್ದಾರೆ.
ಇದೀಗ ಜಸ್ಪ್ರೀತ್ ಬುಮ್ರಾ ಅವರ ಹೇಳಿಕೆಯು ಭಾರೀ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಒತ್ತಡದ ಸನ್ನಿವೇಶದಲ್ಲಿ ಆಗಷ್ಟೇ ಕ್ರೀಸ್ಗೆ ಆಗಮಿಸಿ 2 ಫೋರ್ಗಳನ್ನು ಬಾರಿಸಿದ ದುಬೆ ಅವರ ಕೊಡುಗೆಯನ್ನು ಬುಮ್ರಾ ಎತ್ತಿ ತೋರಿಸಿದ್ದಾರೆ. ಈ ಮೂಲಕ ಸಣ್ಣದಾದರೂ ಪರಿಣಾಮಕಾರಿ ಆಟವನ್ನು ಗುರುತಿಸಿ, ಅಂಕಿ-ಅಂಶಗಳಿಗಿಂತ ತಂಡದ ಗೆಲುವಿಗೆ ಬೇಕಾದ ‘ಸಮಯೋಚಿತ ಆಟ’ ಮುಖ್ಯ ಎಂಬುದನ್ನು ಬುಮ್ರಾ ಸಾರಿ ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಪ್ರತಿಯೊಬ್ಬ ಆಟಗಾರನಿಗೂ 50 ಲಕ್ಷ ರೂ. ದಂಡ..!
ಈ ಮೂಲಕ ಜಸ್ಪ್ರೀತ್ ಬುಮ್ರಾ ಕ್ರಿಕೆಟ್ ಕೇವಲ ರನ್ ಮತ್ತು ವಿಕೆಟ್ಗಳ ಆಟವಲ್ಲ, ಅದು ಸಮಯೋಚಿತವಾಗಿ ಒತ್ತಡವನ್ನು ನಿಭಾಯಿಸುವ ಕಲೆ ಎಂಬುದನ್ನು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.
