‘ಯಾ ಅಲ್ಲಾ, ರಸಗುಲ್ಲಾ’ ಎಂದಿದ್ದಕ್ಕೆ ಕೇಸು, 16 ವರ್ಷದ ಬಳಿಕ ಆಗಿದ್ದೇನು? – Kannada News | Bombay High Court quashed FIR against Bharti Singh, Shekhar Suman registered in 2010

ಭಾರತದಲ್ಲಿ ಜನ ಧರ್ಮದ ಕುರಿತಾಗಿ ಅಗತ್ಯಕ್ಕಿಂತಲೂ ಹೆಚ್ಚು ಸೂಕ್ಷ್ಮ ಆಗಿಬಿಟ್ಟಿದ್ದಾರೆ. ಸಿನಿಮಾ (Cinema) ಮಂದಿ, ಕಮಿಡಿಯನ್​​ಗಳು, ಜಾಹೀರಾತು ಮಾಡುವವರು ಅಪ್ಪಿ-ತಪ್ಪಿಯೂ ಧರ್ಮದ ವಿಚಾರ ಎತ್ತುವಂತಿಲ್ಲ. ಪರಿಸ್ಥಿತಿ ಬಲು ಸೂಕ್ಷ್ಮವಾಗಿದೆ. ಅದರಲ್ಲೂ ಕಮಿಡಿಯನ್​​ಗಳಿಗಂತೂ ಕಾಲ ಬಹಳ ಕೆಟ್ಟದಿದೆ. ಒಬ್ಬರ ಹಿಂದೊಬ್ಬ ಕಮಿಡಿಯನ್​​ಗಳ ಮೇಲೆ ಕೇಸುಗಳು ದಾಖಲಾಗುತ್ತಿವೆ. ಕೆಲವರಂತೂ ಜೈಲಿಗೆ ಸಹ ಹೋಗಿ ಬಂದಿದ್ದಾಗಿದೆ. ಧರ್ಮ, ದೇವರ ಬಗ್ಗೆ ಹಾಸ್ಯ ಇರಲಿ, ಹಾಸ್ಯದ ಒಳಗೆ ಅಪ್ಪಿ-ತಪ್ಪಿಯೂ ಧರ್ಮಕ್ಕೆ ಸಂಬಂಧಿಸಿದ ಪದದ ಉಲ್ಲೇಖವೂ ಆಗುವಂತಿಲ್ಲ. ತಮಾಷೆಗೆಂದು ಹೇಳಿದ ಮಾತೊಂದರಿಂದ ಭಾರತದ ಇಬ್ಬರು ಹಿರಿಯ ಮತ್ತು ಜನಪ್ರಿಯ ಕಮಿಡಿಯನ್​​ಗಳ ವಿರುದ್ಧ ಸುಮಾರು 16 ವರ್ಷದ ಹಿಂದೆ ಎಫ್​​ಐಆರ್ ದಾಖಲಾಗಿತ್ತು. ಅದರ ಕುರಿತು ಮುಖ್ಯವಾದ ಅಪ್​​ಡೇಟ್ ಒಂದು ಹೊರಬಿದ್ದಿದೆ.

ಶೇಖರ್ ಸುಮನ್ ಭಾರತೀಯ ಟಿವಿ ಮತ್ತು ಸಿನಿಮಾ ರಂಗದ ಬಲು ಹಿರಿಯ ಹಾಸ್ಯ ಕಲಾವಿದ. ಭಾರತಿ ಸಿಂಗ್ ಸಹ ಒಂದು ದಶಕಕ್ಕೂ ಹೆಚ್ಚು ಸಮಯದಲ್ಲಿ ಕಮಿಡಿಯನ್ ಆಗಿ ಗುರುತಿಸಿಕೊಂಡಿದ್ದಾರೆ. 2010 ರಲ್ಲಿ ಸೋನಿ ಚಾನೆಲ್​​ನಲ್ಲಿ ಪ್ರಸಾರ ಆಗುತ್ತಿದ್ದ ‘ಕಾಮಿಡಿ ಸರ್ಕಸ್​​ ಕಾ ಜಾದೂ’ ರಿಯಾಲಿಟಿ ಶೋನಲ್ಲಿ ಭಾರತಿ ಸಿಂಗ್ ಸ್ಪರ್ಧಿ ಆಗಿದ್ದರು. ಆಗ ಕಾಮಿಡಿ ಆಕ್ಟ್ ಒಂದರಲ್ಲಿ ನಟಿ ಭಾರತಿ ಸಿಂಗ್, ‘ಯಾ ಅಲ್ಲಾ, ರಸಗುಲ್ಲ, ದಹಿ ಬಲ್ಲಾ’ ಎಂದಿದ್ದರು. ಇದನ್ನು ಶೇಖರ್ ಸುಮನ್ ಮತ್ತೊಮ್ಮೆ ಹೇಳಿ ಜೋರಾಗಿ ನಕ್ಕಿದ್ದರು. ಇಷ್ಟಕ್ಕೇ ಅವರ ವಿರುದ್ಧ ದೂರು ನೀಡಲಾಗಿ, ಎಫ್​ಐಆರ್ ಸಹ ದಾಖಲಾಗಿತ್ತು.

ಭಾರತಿ ಸಿಂಗ್ ಅವರ ಈ ಜೋಕಿನ ವಿರುದ್ಧ 2010 ರಲ್ಲಿ ರಜಾ ಅಕಾಡೆಮಿ ಅಧ್ಯಕ್ಷರಾಗಿದ್ದ ಮೊಹಮ್ಮದ್ ಇಮ್ರಾನ್ ದದಾನಿ ರಸಾಬಿ ಎಂಬುವವರು ಇಸ್ಲಾಂ ಧರ್ಮಕ್ಕೆ ಅಪಮಾನ ಎಸಗಲಾಗಿದೆ ಎಂದು ದೂರು ದಾಖಲಿಸಿದ್ದರು. ದೂರಿನ ಅನ್ವಯ ಭಾರತಿ ಸಿಂಗ್ ಮತ್ತು ಶೇಖರ್ ಸುಮನ್ ಇಬ್ಬರ ವಿರುದ್ಧವೂ ಎಫ್​​ಐಆರ್ ದಾಖಲಾಗಿತ್ತು. ಬಳಿಕ 2012 ರಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್​​ಐಆರ್ ರದ್ದು ಮಾಡಬೇಕೆಂದು ಶೇಖರ್ ಸುಮನ್ ಮತ್ತು ಭಾರತಿ ಸಿಂಗ್ ಇಬ್ಬರೂ ಸಹ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ಸಮಂತಾ ಪತಿಯೊಟ್ಟಿಗೆ ಸಿನಿಮಾ ಮಾಡಲಿದ್ದಾರೆ ಸಲ್ಮಾನ್ ಖಾನ್

ಇದೀಗ ಶೇಖರ್ ಸುಮನ್ ಮತ್ತು ಭಾರತಿ ಸಿಂಗ್ ವಿರುದ್ಧ ಎಫ್ಐಆರ್ ಅನ್ನು ರದ್ದು ಗೊಳಿಸಿ ಬಾಂಬೆ ಹೈಕೋರ್ಟ್ ಆದೇಶಿಸಿದೆ. ಅಲ್ಲಾ, ರಸಗುಲ್ಲ, ದಹಿಬಲ್ಲಾ (ಮೊಸರಿನ ಖಾದ್ಯ) ಕೇವಲ ಪ್ರಾಸಕ್ಕಾಗಿ ಹೇಳಿರುವುದೇ ಹೊರತು ಧರ್ಮದ ಅವಹೇಳನಕ್ಕಾಗಿ ಅಲ್ಲ. ಅಲ್ಲದೆ ಈ ವಾಕ್ಯವನ್ನು ಹಾಸ್ಯದ ದೃಷ್ಟಿಯಿಂದ ಹೇಳಿರುವ ಮಾತುಗಳಾಗಿವೆಯೇ ಹೊರತು ಬೇರೆ ಅಲ್ಲ. ರಸಗುಲ್ಲ ಮತ್ತು ದಹಿಬಲ್ಲ, ಭಾರತದಾದ್ಯಂತ ಜನಪ್ರಿಯ ಆಗಿರುವ ತಿನಿಸುಗಳು, ಅದಕ್ಕೂ ಧರ್ಮಕ್ಕೂ ಸಂಬಂಧವಿಲ್ಲ. ಹಾಸ್ಯಕ್ಕಾಗಿ ಹೇಳಿದ ಸರಳವಾದ ಮಾತಿನಲ್ಲಿ ಆತಂಕಕಾರಿ ಎಂಬುದು ಏನೂ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

ಈ ಒಂದು ಸಣ್ಣ ಜೋಕಿಗಾಗಿ ಭಾರತಿ ಸಿಂಗ್ ಮತ್ತು ಶೇಖರ್ ಸುಮನ್​​ ಮೇಲೆ ಗಂಭೀರವಾದ ಆಗಿನ ಸಿಆರ್​​ಪಿಸಿ 196 ಹೇರಲಾಗಿತ್ತು. ಇದೀಗ ನ್ಯಾಯಾಲಯವು ಇಬ್ಬರ ಮೇಲೆ ದಾಖಲಾಗಿದ್ದ ಎಫ್​ಐಆರ್ ಅನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *