
ಧಾರವಾಡ, ಮಾರ್ಚ್ 19: ಇಂದು ರಾಜ್ಯದೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ. ನಾಡಿನ ಜನ ಬೇವು-ಬೆಲ್ಲ ಸವಿದು ಖುಷಿಪಟ್ಟರೆ, ಇತ್ತ ಧಾರವಾಡದಲ್ಲಿ ಯುಗಾದಿ ದಿನವೇ ರಕ್ತಪಾತವಾಗಿದೆ. ಆಸ್ತಿ ವಿಚಾರಕ್ಕೆ ಅಣ್ಣನಿಂದ ತಂಗಿಯ ಬರ್ಬರ ಕೊಲೆ (kill) ನಡೆದಿರುವಂತಹ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿಯಲ್ಲಿ ನಡೆದಿದೆ. ಶಿವಕ್ಕ(45) ಮೃತ ತಂಗಿ. ಹನುಮಂತ ಯಲಿವಾಳ ಹತ್ಯೆಗೈದ ಅಣ್ಣ. ಸದ್ಯ ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಹನುಮಂತ ಯಲಿವಾಳ ಮತ್ತು ಶಿವಕ್ಕ ಅಣ್ಣ-ತಂಗಿ. ತಂದೆಯ ಆಸ್ತಿಯಲ್ಲಿ ನನಗೂ ಪಾಲಿದೆ, ಆಸ್ತಿ ಬೇಕು ಎಂದು ಶಿವಕ್ಕ ಪಟ್ಟು ಹಿಡಿದಿದ್ದರು. ಇದೇ ವಿಚಾರವಾಗಿ ಅಣ್ಣ ತಂಗಿ ಮಧ್ಯೆ ಗಲಾಟೆ ಕೂಡ ನಡೆದಿದೆ. ಆದರೆ ಇಂದು ಯುಗಾದಿ ಹಬ್ಬದಂದು ಭೂಮಿ ಪೂಜೆಗೆ ಹೋದಾಗ ಮರ್ಡರ್ ಮಾಡಲಾಗಿದೆ.
ಬೀದರ್ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ದಂಪತಿ ಸಾವು
ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದ ಬಸ್ ನಿಲ್ದಾಣದ ಸಮೀಪದ ಮುಚಳಂಬ ಕ್ರಾಸ್ ಬಳಿ ನಿನ್ನೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ನಡೆದ ಡಿಕ್ಕಿಯಲ್ಲಿ ದಂಪತಿಗಳು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಸಯ್ಯದ್ ದಸ್ತಗೀರ್ (35) ಮತ್ತು ಯಾಸ್ಮೀನ್ ದಸ್ತಗೀರ್ (33) ಮೃತರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಐವರ ಮೇಲೆ ಆ್ಯಸಿಡ್ ದಾಳಿ; ಮಚ್ಚಿನಿಂದ ಹಲ್ಲೆ ಮಾಡಿ ವ್ಯಕ್ತಿ ಪರಾರಿ
ಮೃತರು ಬಸವಕಲ್ಯಾಣದ ಖಾದಿಜಂಡಾ ಕಾಲೋನಿಯಲ್ಲಿ ವಾಸವಾಗಿದ್ದರು. ದಂಪತಿಗಳು ಬಸ್ ನಿಲ್ದಾಣದ ಕಡೆಯಿಂದ ತಮ್ಮ ಮನೆ ಕಡೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ, ಅತೀವೇಗವಾಗಿ ಬಂದ ಟಿಪ್ಪರ್ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಅಲಿಸಾಬ್ ಹಾಗೂ ಪಿಎಸ್ಐ ಸಿದ್ದೇಶ್ವರ್ ಮತ್ತು ಚಂದ್ರಶೇಖರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಆಲಿಕಲ್ಲು ಮಳೆಗೆ 25ಕ್ಕೂ ಹೆಚ್ಚು ಕುರಿಗಳು ಸಾವು
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮದಲ್ಲಿ ಆಲಿಕಲ್ಲು ಮಳೆಗೆ 25ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವಂತಹ ದಾರುಣ ಘಟನೆಯೊಂದು ನಡೆದಿದೆ. ಹುಸೇನಸಾಬ್ ಬಾಂಗದ ಎಂಬುವರಿಗೆ ಕುರಿಗಳು ಮೃತಪಟ್ಟಿವೆ. ಸೂಕ್ತ ಪರಿಹಾರ ನೀಡುವಂತೆ ಕುರಿಗಾಹಿ ಹುಸೇನಸಾಬ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.