ಲಕ್ನೋ, ಜೂನ್ 25: ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ(Assembly Election)ಯಲ್ಲಿ ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಬೃಹತ್ ಗುರಿಯೊಂದಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರ್ಜರಿ ಸಿದ್ಧತೆ ಆರಂಭಿಸಿದೆ. ಈ ನಿಟ್ಟಿನಲ್ಲಿ, ದೆಹಲಿ ಮತ್ತು ಲಕ್ನೋದಲ್ಲಿ ನಡೆದ ಹಿರಿಯ ನಾಯಕರ ಸರಣಿ ಸಭೆಗಳ ಬಳಿಕ, ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಪಂಕಜ್ ಚೌಧರಿ ನೇತೃತ್ವದಲ್ಲಿ ಹೊಸ ರಾಜ್ಯ ಸಂಘಟನಾ ತಂಡವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ತಳಮಟ್ಟದ ಜಾಲವನ್ನು ಬಲಪಡಿಸಲು ಈ ಹೊಸ ತಂಡದಲ್ಲಿ 19 ಉಪಾಧ್ಯಕ್ಷರು ಮತ್ತು 8 ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.
ಜನಾಥ್ ಸಿಂಗ್ ಪುತ್ರ ಮತ್ತು ಹಿರಿಯ ನಾಯಕರಿಗೆ ಸ್ಥಾನ
ಈ ಹೊಸ ಪಟ್ಟಿಯಲ್ಲಿ ಹಿರಿಯ ನಾಯಕರ ಜೊತೆಗೆ ಪ್ರಮುಖ ರಾಜಕೀಯ ವಾರಸುದಾರರಿಗೂ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪುತ್ರ ನೀರಜ್ ಸಿಂಗ್ ಅವರನ್ನು ಉತ್ತರ ಪ್ರದೇಶದ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.
ಅವರೊಂದಿಗೆ ಮಾಜಿ ಸಚಿವ ಸುರೇಶ್ ರಾಣಾ, ಅರ್ಚನಾ ಮಿಶ್ರಾ ಮತ್ತು ಪೂಜಾ ಪಾಲ್ ಹೊಸ ತಂಡದಲ್ಲಿ ಉಪಾಧ್ಯಕ್ಷರಾಗಿ ಗುರುತರ ಪಾತ್ರ ವಹಿಸಲಿದ್ದಾರೆ.
ನೂತನ ಪ್ರಧಾನ ಕಾರ್ಯದರ್ಶಿಗಳ ಪಟ್ಟಿ
ರಾಜ್ಯದ ವಿವಿಧ ವಲಯಗಳು ಹಾಗೂ ಸಾಮಾಜಿಕ ಸಮುದಾಯಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಪಕ್ಷವು ಹೊಸ ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಿದೆ. ಅಭಿಜತ್ ಮಿಶ್ರಾ, ಶಂಕರ್ ಲೋಧಿ, ದಿಲೀಪ್ ಪಟೇಲ್ ಮತ್ತು ರಾಜೇಶ್ ಚೌಧರಿ ಅವರಿಗೆ ಯುಪಿ ಬಿಜೆಪಿಯ ಹೊಸ ಪ್ರಧಾನ ಕಾರ್ಯದರ್ಶಿ ಹುದ್ದೆಗಳನ್ನು ವಹಿಸಲಾಗಿದೆ.
ಮತ್ತಷ್ಟು ಓದಿ: Assembly Election Results 2026: ಐದು ರಾಜ್ಯಗಳ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ, ಇಂದು ವಿಧಾನಸಭಾ ಚುನಾವಣಾ ಫಲಿತಾಂಶ
ಆರು ಪ್ರಮುಖ ವಲಯಗಳಿಗೆ ಪ್ರಾದೇಶಿಕ ಅಧ್ಯಕ್ಷರ ನೇಮಕ
ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಪಕ್ಷದ ಚುನಾವಣಾ ಚಟುವಟಿಕೆಗಳನ್ನು ಚುರುಕುಗೊಳಿಸಲು ಆರು ಪ್ರಮುಖ ಪ್ರಾದೇಶಿಕ ಅಧ್ಯಕ್ಷರನ್ನು ಘೋಷಿಸಲಾಗಿದೆ.
ಗೋರಖ್ಪುರ: ವಿನೋದ್ ರಾಯ್
ಅವಧ್: ಅವಧ್ ದ್ವಿವೇದಿ
ಕಾಶಿ: ಅಶೋಕ್ ಚೌರಾಸಿಯಾ
ಕಾನ್ಪುರ: ರಾಮ್ಕಿಶೋರ್ ಸಾಹು
ಪಶ್ಚಿಮ ಪ್ರದೇಶ: ನವಾಬ್ ಸಿಂಗ್ ನಗರ
ಬ್ರಜ್ ಪ್ರದೇಶ: ಪೂರನ್ ಲೋಧಿ
ಯುವ ನಾಯಕತ್ವಕ್ಕೆ ಆದ್ಯತೆ
ಈ ಬಾರಿಯ ಪುನರಚನೆಯಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲು ಹೈಕಮಾಂಡ್ ನಿರ್ಧರಿಸಿದೆ. ಇದರ ಭಾಗವಾಗಿ, ಭಾರತೀಯ ಜನತಾ ಯುವ ಮೋರ್ಚಾ’ (BJYM) ರಾಜ್ಯ ಅಧ್ಯಕ್ಷ ಹುದ್ದೆಗೆ ಗರಿಷ್ಠ ವಯೋಮಿತಿಯನ್ನು 35 ವರ್ಷಗಳಿಗೆ ಕಟ್ಟುನಿಟ್ಟಾಗಿ ನಿಗದಿಪಡಿಸಲಾಗಿದೆ. ಈ ಮೂಲಕ ಯುವ ಮತದಾರರನ್ನು ಸೆಳೆಯಲು ಪಕ್ಷ ಹೊಸ ಪ್ಲಾನ್ ಮಾಡಿದೆ.
ಈ ಮಹತ್ವದ ಪಟ್ಟಿಯನ್ನು ಬಿಡುಗಡೆ ಮಾಡುವ ಮುನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಹಾಗೂ ರಾಜ್ಯ ಅಧ್ಯಕ್ಷ ಪಂಕಜ್ ಚೌಧರಿ ಅವರು ಸುಮಾರು 30 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿ, ಪ್ರತಿಯೊಂದು ಹೆಸರನ್ನು ಪರಿಶೀಲಿಸಿದ ನಂತರವೇ ಕೇಂದ್ರ ನಾಯಕತ್ವದ ಒಪ್ಪಿಗೆಯೊಂದಿಗೆ ಈ ಅಂತಿಮ ಮುದ್ರೆ ಒತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 1:36 pm, Thu, 25 June 26