ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss) ಅಂತ್ಯವಾಗಿದೆ. 113 ದಿನಗಳ ಕಾಲ ನಡೆದ ಈ ಶೋನಲ್ಲಿ ಅಂತಿಮವಾಗಿ ಗಿಲ್ಲಿ ವಿನ್ನರ್ ಆಗಿದ್ದಾರೆ. ಕೋಟ್ಯಂತರ ವೋಟುಗಳು ಗಿಲ್ಲಿಗೆ ಬಂದಿವೆ. ರನ್ನರ್ ಅಪ್ ಆಗಿದ್ದು ರಕ್ಷಿತಾ ಶೆಟ್ಟಿ. ಬಿಗ್ಬಾಸ್ ಮನೆಗೆ ಬಂದ ಮೊದಲ ದಿನವೇ ಶೋನಿಂದ ಹೊರಗೆ ಅಟ್ಟಲ್ಪಟ್ಟ ರಕ್ಷಿತಾ ವಾರದ ಬಳಿಕ ಮರು ಎಂಟ್ರಿ ಆಗಿದ್ದು ಮಾತ್ರವಲ್ಲದೆ ಬಿಗ್ಬಾಸ್ ಸೀಸನ್ನ ಕೊನೆಯ ದಿನದ ವರೆಗೆ ಬಂದಿದ್ದಾರೆ. ಅದೂ ಯಾವ ಹಿನ್ನೆಲೆಯೂ ಇಲ್ಲದೆ. ಫಿನಾಲೆ ವರೆಗೆ ಬಂದ ಅವರ ಪ್ರಯಾಣವೇ ಒಂದು ಸಾಧನೆ.
ಬಿಗ್ಬಾಸ್ನಲ್ಲಿ ಗೆದ್ದವರಿಗೆ 50 ಲಕ್ಷ ರೂಪಾಯಿ ಹಣ ನೀಡುವುದು ವಾಡಿಕೆ. ಅದರ ಜೊತೆಗೆ ಕಳೆದ ಕೆಲ ಸೀಸನ್ಗಳಿಂದ ಗೆದ್ದವರಿಗೆ ಕಾರೊಂದನ್ನು ಸಹ ಉಡುಗೊರೆಯಾಗಿ ನೀಡಲಾಗುತ್ತಿದೆ. ಆದರೆ ರನ್ನರ್ ಅಪ್ ಆದವರಿಗೆ ಏನೂ ಸಿಗುತ್ತಿರಲಿಲ್ಲ. ಇದರ ಬಗ್ಗೆ ಹಿಂದೆ ಕೆಲವು ಬಾರಿ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ರನ್ನರ್ ಅಪ್ ಆದವರಿಗೂ ನಗದು ಬಹುಮಾನ ನೀಡಲಾರಂಭಿಸಿದರು. ಇದೀಗ ಈ ಸೀಸನ್ನಲ್ಲಿ ರನ್ನರ್ ಅಪ್ ಆದ ರಕ್ಷಿತಾ ಅವರಿಗೂ ಸಹ ದೊಡ್ಡ ಮೊತ್ತವೇ ಬಹುಮಾನವಾಗಿ ದೊರೆತಿದೆ.
ವಿನ್ನರ್ ಘೋಷಣೆ ಮಾಡುವ ಮುಂಚೆ ಸುದೀಪ್ ಅವರು ರಕ್ಷಿತಾ ಬಳಿ, 50 ಲಕ್ಷ ಗೆದ್ದರೆ ಏನು ಮಾಡುತ್ತೀರಿ ಎಂದು ಕೇಳಿದರು. ಅದಕ್ಕೆ ರಕ್ಷಿತಾ 20 ಹಸು ಖರೀದಿ ಮಾಡುತ್ತೀನಿ ಎಂದರು. ಒಂದು ಹಸುವಿಗೆ ಎಷ್ಟು? ಎಂದರೆ ಒಂದು ಹಸುವಿಗೆ 1 ಲಕ್ಷ ರೂಪಾಯಿ ಎಂದರು. ಉಳಿದ ಹಣವನ್ನು ಖರ್ಚು ಮಾಡುತ್ತೀನಿ ಎಂದಿದ್ದರು. ಅಸಲಿಗೆ ರಕ್ಷಿತಾಗೆ 50 ಲಕ್ಷ ರೂಪಾಯಿ ಸಿಗಲಿಲ್ಲ. ಆದರೆ ಸಿಕ್ಕ ಹಣ ಕಡಿಮೆಯಂತೂ ಅಲ್ಲ.
ಇದನ್ನೂ ಓದಿ:ಬಿಗ್ಬಾಸ್ ಮನೆಯ ಬೆಂಕಿಯುಂಡೆ ಅಶ್ವಿನಿಗೆ ಧಕ್ಕಲಿಲ್ಲ ಗೆಲುವು
ರಕ್ಷಿತಾ ಅವರಿಗೆ ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ 20 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯ್ತು. ಖುದ್ದು ಟಿಎ ಶರವಣ ಅವರು ವೇದಿಕೆಗೆ ಆಗಮಿಸಿ ರಕ್ಷಿತಾ ಅವರಿಗೆ 20 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರ ಮಾಡಿದರು. ಅದಾದ ಬಳಿಕ ಜಾರ್ ಅಪ್ಲಿಕೇಶನ್ನ ವತಿಯಿಂದ ರಕ್ಷಿತಾ ಅವರಿಗೆ ಐದು ಲಕ್ಷ ರೂಪಾಯಿ ನಗದು ಹಣವನ್ನು ಉಡುಗೊರೆಯಾಗಿ ಸಹ ನೀಡಲಾಯ್ತು. ಬಹಳ ಕಷ್ಟಪಟ್ಟು ಆಡಿದ ರಕ್ಷಿತಾಗೆ ಒಳ್ಳೆಯ ಮೊತ್ತವನ್ನೇ ಬಹುಮಾನವಾಗಿ ನೀಡಲಾಯ್ತು. ಮಧ್ಯಮ ವರ್ಗದ ಕುಟುಂಬದವರಾದ ರಕ್ಷಿತಾಗೆ ಇದು ಸಹಕಾರಿ ಆಗುವುದಂತೂ ಗ್ಯಾರೆಂಟಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
