ಸಚಿವರ ಗಮನ ಸೆಳೆಯಲು ಹದಗೆಟ್ಟ ರಸ್ತೆಯಲ್ಲೇ ಓಡಿದ ಬೆಂಗಳೂರಿನ ಯುವಕ!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹದಗೆಟ್ಟ ರಸ್ತೆಗಳು ಮತ್ತು ಸರಿಹೋಗದ ಮೂಲಸೌಕರ್ಯಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವುದು ಹೊಸದೇನಲ್ಲ. ಆದರೆ ಪಶ್ಚಿಮ ಬೆಂಗಳೂರಿನ ಯುವಕನೊಬ್ಬ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಣ್ಣು ತೆರೆಸಲು ಕೈಗೊಂಡಿರುವ ‘ವಿಭಿನ್ನ ಪ್ರತಿಭಟನೆ’ ಈಗ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಪೀಣ್ಯ ಸಮೀಪದ ಅಂದರಹಳ್ಳಿ ಮುಖ್ಯರಸ್ತೆ ಬಳಿಯಿರುವ ರುದ್ರಪ್ಪ ಲೇಔಟ್ ನಿವಾಸಿ, 34 ವರ್ಷದ ಎಂಜಿನಿಯರ್ ಹಾಗೂ ಉದ್ಯಮಿ ಧನಂಜಯ ಭಂಡಾರ್ಕರ್, ತಮ್ಮ ಬಡಾವಣೆಯ ಧೂಳು ಹಾಗೂ ಕಲ್ಲುಗಳಿಂದ ಕೂಡಿದ ಹದಗೆಟ್ಟ ರಸ್ತೆಯಲ್ಲೇ ಓಡುತ್ತಿರುವ (Running) ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
1.5 ಕಿ.ಮೀ. ಧೂಳಿನ ರಸ್ತೆ; ಅಸಹಾಯಕ ನಿವಾಸಿಗಳು
ರುದ್ರಪ್ಪ ಲೇಔಟ್ ರಚನೆಯಾಗಿ ಒಂದು ದಶಕ ಕಳೆದಿದೆ. ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಆದರೆ ಇಡೀ ಲೇಔಟ್ನ 1.7 ಕಿ.ಮೀ. ರಸ್ತೆಯಲ್ಲಿ ಕೇವಲ ಮೊದಲ 200 ಮೀಟರ್ಗೆ ಮಾತ್ರ ಡಾಂಬರು ಹಾಕಲಾಗಿದ್ದು, ಉಳಿದ 1.5 ಕಿ.ಮೀ. ರಸ್ತೆ ಕಳೆದ ಎರಡು ವರ್ಷಗಳಿಂದ ಅರೆಬರೆ ಮತ್ತು ಧೂಳುಮಯ ಸ್ಥಿತಿಯಲ್ಲೇ ಇದೆ. ಕಾವೇರಿ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿ ಮುಗಿದ ತಕ್ಷಣ ರಸ್ತೆ ಡಾಂಬರೀಕರಣ ಮಾಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಕಾವೇರಿ ನೀರು ಬಂದು ವರ್ಷ ಕಳೆದರೂ ರಸ್ತೆ ಭಾಗ್ಯ ಮಾತ್ರ ಲಭಿಸಿಲ್ಲ!
ಸಚಿವ ಕೃಷ್ಣ ಬೈರೇಗೌಡ ಮತ್ತು ಶಾಸಕರಿಗೆ ಮನವಿ
ಅಧಿಕಾರಿಗಳಿಗೆ ಆನ್ಲೈನ್ ಪೋರ್ಟಲ್ ಮೂಲಕ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಗದಿದ್ದಾಗ ಧನಂಜಯ ಈ ವಿಭಿನ್ನ ಹಾದಿ ತುಳಿದಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಯಶವಂತಪುರ ಶಾಸಕ ಎಸ್ಟಿ ಸೋಮಶೇಖರ್ ಅವರ ಗಮನ ಸೆಳೆಯಲು ತಾವು ನಿತ್ಯ ನಡೆಸುವ ‘ರನ್ನಿಂಗ್’ ಅನ್ನೇ ಪ್ರತಿಭಟನೆಯ ಆಸ್ತ್ರವನ್ನಾಗಿಸಿಕೊಂಡಿದ್ದಾರೆ. “ನಗರದ ರಸ್ತೆಗಳಲ್ಲಿರುವ ‘ಗುಂಡಿಗಳನ್ನು’ (pot ‘holes’) ಮುಚ್ಚಲು, ಅಧಿಕಾರಿಗಳು ಪೂರ್ಣ ಮನಸ್ಸಿನಿಂದ ಕೆಲಸ ಮಾಡಬೇಕು” ಎಂದು ಧನಂಜಯ ತಮ್ಮ ವಿಡಿಯೋದಲ್ಲಿ ಚಾಟಿ ಬೀಸಿದ್ದಾರೆ.
ಸಾಮಾನ್ಯವಾಗಿ ರಸ್ತೆ ಗುಂಡಿ ಪಕ್ಕ ನಿಂತು ಮಾತನಾಡುವ ವಿಡಿಯೋಗಳನ್ನು ಯಾರೂ ಗಮನಿಸುವುದಿಲ್ಲ. ಹೀಗಾಗಿ ಈ ರೀತಿ ರನ್ ಮಾಡಿ ಗಮನ ಸೆಳೆಯಲು ಯತ್ನಿಸಿದ್ದೇನೆ, ರಸ್ತೆ ಡಾಂಬರೀಕರಣವಾಗುವುದೇ ನನ್ನ ಅಂತಿಮ ಗುರಿ ಎಂದಿದ್ದಾರೆ. ಮುಂದಿನ ಬಾರಿ ರಸ್ತೆಯಲ್ಲಿ ‘ಹ್ಯಾಂಡ್ಸ್ಟ್ಯಾಂಡ್’ (Handstand) ಮಾಡಿ ವಿಡಿಯೋ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
