ದಳಪತಿ ವಿಜಯ್ ಅವರು ರಾಜಕೀಯದಲ್ಲಿ ಯಶಸ್ಸು ಕಂಡಿದ್ದಾರೆ. ಹಲವು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಅವರು ಸಂಪಾದಿಸಿದ ಅಭಿಮಾನ ಈಗ ಮತವಾಗಿ ಬದಲಾಗಿದೆ. ಅವರು ತಮಗೆ ಸಿಕ್ಕ ಬಣ್ಣದ ಲೋಕದ ವೇದಿಕೆಯನ್ನು ಸರಿಯಾದ ರೂಪದಲ್ಲಿ ಬಳಸಿಕೊಂಡರು. ಜನರ ನೋವು-ನಲಿವುಗಳಿಗೆ ಸ್ಪಂದಿಸುವ ಒಂದು ದೊಡ್ಡ ವೇದಿಕೆಯಾಗಿ ಬೆಳೆದಿದೆ. ಆರಂಭದಲ್ಲಿ ಕಮರ್ಷಿಯಲ್ ಮತ್ತು ರೊಮ್ಯಾಂಟಿಕ್ ಹೀರೋ ಆಗಿ ಗುರುತಿಸಿಕೊಂಡ ವಿಜಯ್, ನಂತರದ ವರ್ಷಗಳಲ್ಲಿ ತಮಿಳುನಾಡಿನ ಪ್ರಬಲ ರಾಜಕೀಯ ಧ್ವನಿಯಾಗಿ ರೂಪಾಂತರಗೊಂಡರು. ಅವರ ಈ ಪಯಣದಲ್ಲಿ ರಾಜಕೀಯ ಕಥಾಹಂದರ ಹೊಂದಿರುವ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ.
ವಿಜಯ್ ಸಿನಿಮಾಗಳಲ್ಲಿ ರಾಜಕೀಯದ ಕಿಚ್ಚು:
ವಿಜಯ್ ಅವರ ರಾಜಕೀಯ ಪ್ರವೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದು ಅವರ ಸಿನಿಮಾಗಳಲ್ಲಿನ ಹರಿತವಾದ ಸಂಭಾಷಣೆಗಳು ಮತ್ತು ಸಾಮಾಜಿಕ ಕಳಕಳಿ. ಈ ನಿಟ್ಟಿನಲ್ಲಿ ಕೆಲವು ಪ್ರಮುಖ ಸಿನಿಮಾಗಳ ವಿವರ ಇಲ್ಲಿದೆ.
ಮೆರ್ಸಲ್: ಅಟ್ಲಿ ನಿರ್ದೇಶನದ ‘ಮೆರ್ಸೆಲ್’ ಸಿನಿಮಾ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿತು. ಇದು ರಾಜಕೀಯ ಹಿನ್ನೆಲೆ ಹೊಂದಿತ್ತು. ಅವರ ರಾಜಕೀಯ ಕನಸಿಗೆ ಈ ಸಿನಿಮಾ ಸಾಕಷ್ಟು ವೇಗ ನೀಡಿತು. ದೇಶದ ಆರೋಗ್ಯ ವ್ಯವಸ್ಥೆ ಮತ್ತು ಜಿಎಸ್ಟಿ ವಿಷಯಗಳ ಕುರಿತು ಈ ಸಿನಿಮಾ ಬೆಳಕು ಚೆಲ್ಲಿತ್ತು. ಸಾಮಾನ್ಯ ಜನರ ಪರವಾಗಿ ಧ್ವನಿ ಎತ್ತುವ ನಾಯಕನಾಗಿ ವಿಜಯ್ ಇಲ್ಲಿ ಮಿಂಚಿದ್ದರು.
ಸರ್ಕಾರ್: ರಾಜಕೀಯ ವ್ಯವಸ್ಥೆಯ ಭ್ರಷ್ಟಾಚಾರ ಹಾಗೂ ಒಂದು ಮತದ ಪ್ರಾಮುಖ್ಯತೆಯನ್ನು ಹೇಳುವ ಕಥೆಯನ್ನು ‘ಸರ್ಕಾರ್’ ಹೊಂದಿತ್ತು. ಈ ಸಿನಿಮಾ ರಿಲೀಸ್ ಬಳಿಕ ವಿಜಯ್ ರಾಜಕೀಯಕ್ಕೆ ಬರೋದು ಪಕ್ಕಾ ಎಂಬ ಮಾತುಗಳು ಕೇಳಿ ಬಂದವು. ಕಳ್ಳಮತದಾನದ ವಿರುದ್ಧ ಹೋರಾಡುವ ಎನ್ಆರ್ಐ ಉದ್ಯಮಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.
ಕತ್ತಿ : ರೈತರ ಆತ್ಮಹತ್ಯೆ ಮತ್ತು ಕಾರ್ಪೊರೇಟ್ ಕಂಪನಿಗಳ ದಬ್ಬಾಳಿಕೆಯ ವಿರುದ್ಧದ ಹೋರಾಟದ ಕಥೆಯೇ ‘ಕತ್ತಿ’. ಈ ಸಿನಿಮಾ ವಿಜಯ್ ಅವರನ್ನು ಕೇವಲ ನಟನನ್ನಾಗಿ ಅಲ್ಲದೆ, ಒಬ್ಬ ಹೋರಾಟಗಾರನನ್ನಾಗಿ ಬಿಂಬಿಸಿತು.
ತುಪ್ಪಾಕಿ: ದೇಶಪ್ರೇಮ ಮತ್ತು ಭಯೋತ್ಪಾದನೆಯ ವಿರುದ್ಧದ ಕಥೆಯನ್ನು ‘ತುಪ್ಪಾಕಿ’ ಹೊಂದಿತ್ತು. ಇದು ನಮ್ಮ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಇದು ಎತ್ತಿ ತೋರಿಸಿತ್ತು.
ಇದನ್ನೂ ಓದಿ:
ಜನ ನಾಯಗನ್: ರಾಜಕೀಯಕ್ಕೆ ಕಾಲಿಡೋದಕ್ಕೂ ಮೊದಲು ಒಂದೊಳ್ಳೆಯ ರಾಜಕೀಯ ಕಥೆ ಹೇಳುವ ಆಲೋಚನೆ ವಿಜಯ್ಗೆ ಇತ್ತು. ಇದಕ್ಕಾಗಿ ಅವರು ‘ಜನ ನಾಯಗನ್’ ಚಿತ್ರ ಆಯ್ಕೆ ಮಾಡಿಕೊಂಡರು. ಇದು ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷಕ್ಕೆ ಸೈದ್ಧಾಂತಿಕ ಶಕ್ತಿ ತುಂಬುವಂತಿತ್ತು. ಆದರೆ, ಈ ಸಿನಿಮಾ ಅಂದುಕೊಂಡಂತೆ ತೆರೆಗೆ ಬಂದಿಲ್ಲ. ವಿಜಯ್ ಸಿಎಂ ಆದ ಬಳಿಕ ಚಿತ್ರ ತೆರೆಗೆ ಬರೋ ನಿರೀಕ್ಷೆ ಇದೆ. ಸಿನಿಮಾ ರಂಗಕ್ಕೆ ಅವರು ವಿದಾಯ ಹೇಳುವ ಸೂಚನೆ ನೀಡಿದ್ದರೂ, ಅವರು ಕಟ್ಟಿಕೊಟ್ಟ ‘ಮಾಸ್’ ಮತ್ತು ‘ಸೋಶಿಯಲ್’ ಪಾತ್ರಗಳು ಜನರ ಮನದಲ್ಲಿ ಶಾಶ್ವತವಾಗಿ ಉಳಿಯಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
