ಬೆಂಗಳೂರು, ಜೂನ್ 21: ಪ್ರಶ್ನೆ ಪತ್ರಿಕೆ ಲೀಕ್ನಿಂದ ರದ್ದಾಗಿದ್ದ ನೀಟ್ ಮರುಪರೀಕ್ಷೆ (NEET Re-Exam) ಇಂದು ರಾಜ್ಯಾದ್ಯಂತ ನಡೆದಿದೆ. ಯಾವುದೇ ಗೊಂದಲ, ಸೋರಿಕೆ ಇಲ್ಲದೆ ಬಿಗಿ ಭದ್ರತೆ ನಡುವೆ ವಿದ್ಯಾರ್ಥಿಗಳು (Students) ಪರೀಕ್ಷೆ ಬರೆದು ಇದೀಗ ಹೊರಬಂದಿದ್ದಾರೆ. ಬೆಂಗಳೂರಿನ 68 ಕೇಂದ್ರಗಳು ಸೇರಿದಂತೆ ರಾಜ್ಯದ 31 ನಗರಗಳ 200ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15 ರವರೆಗೂ ಪರೀಕ್ಷೆ ನಡೆಯಿತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪರೀಕ್ಷೆ ಕಠಿಣವಾಗಿತ್ತು ಅಂತಾ ಅಭ್ಯರ್ಥಿಗಳು ಹೇಳುತ್ತಿದ್ದಾರೆ. ಅದರಲ್ಲೂ ಜೀವಶಾಸ್ತ್ರ ಹಾಗೂ ರಸಾಯನಶಾಸ್ತ್ರ ಪೇಪರ್ ಹೆಚ್ಚು ಕಠಿಣವಾಗಿತ್ತು ಎಂದಿದ್ದಾರೆ.
ಮುಖ್ಯಾಂಶಗಳು
- ರಾಜ್ಯದಲ್ಲಿ ನೀಟ್ ಮರು ಪರೀಕ್ಷೆ ಯಶಸ್ವಿ ಮುಕ್ತಾಯ
- ಬಿಗಿ ಭದ್ರತೆ ನಡುವೆ ಪರೀಕ್ಷೆ ಬರೆದ ರಾಜ್ಯದ ವಿದ್ಯಾರ್ಥಿಗಳು
- ಈ ಬಾರಿಯ ಪೇಪರ್ ಕಠಿಣವಾಗಿತ್ತು ಎಂದ ವಿದ್ಯಾರ್ಥಿಗಳು
ವೈದ್ಯಕೀಯ ಸೀಟು ಹಂಚಿಕೆಗಾಗಿ ನಡೆಯುವ ನೀಟ್ ಪರೀಕ್ಷೆ ದೊಡ್ಡ ಸವಾಲ್ ಆಗಿತ್ತು. ಕಳೆದ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಪರೀಕ್ಷೆಯನ್ನೇ ರದ್ದು ಮಾಡಲಾಗಿತ್ತು. ಇದೆಲ್ಲದರ ನಡುವೆ ಇಂದು ನೀಟ್ ಮರು ಪರೀಕ್ಷೆ ನಡೆದಿದ್ದು, ಯಾವುದೇ ಗೊಂದಲ ಇಲ್ಲದೆ ಯಶಸ್ವಿಯಾಗಿ ಮುಗಿದಿದೆ.
ಹೆಚ್ಚು ಕಠಿಣವಾಗಿತ್ತು
ಇನ್ನು ಪರೀಕ್ಷೆ ಬರೆದ ಬೆಂಗಳೂರಿನ ವಿದ್ಯಾರ್ಥಿಗಳು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಪೇಪರ್ ಕಠಿಣವಾಗಿತ್ತು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಶೇಕಡಾ 10 ರಿಂದ 15ರಷ್ಟು ಹೆಚ್ಚು ಕಠಿಣವಾಗಿತ್ತು. ಮೇ 3 ರಂದು ನಡೆದ ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸುಲಭವಾಗಿತ್ತು. ಇಂದಿನ ಜೀವಶಾಸ್ತ್ರ ಹಾಗೂ ರಸಾಯನಶಾಸ್ತ್ರ ಪೇಪರ್ ತುಂಬಾ ಕಠಿಣವಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ನೀಟ್ ಪರೀಕ್ಷೆಯಿಂದ ಮತ್ತೆ ವಂಚಿತರಾದ ಹಲವು ವಿದ್ಯಾರ್ಥಿಗಳು: ಒಬ್ಬೊಬ್ಬರದು ಒಂದೊಂದು ಕಥೆ
ಹಾವೇರಿ ಜಿಲ್ಲೆಯ ಐದು ಕೇಂದ್ರಗಳಲ್ಲಿ ನೀಟ್ ಮರುಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಜಿಲ್ಲಾಡಳಿತದ ತಯಾರಿಗೆ ಪರೀಕ್ಷಾರ್ಥಿಗಳು ಪುಲ್ ಖುಷ್ ಆಗಿದ್ದಾರೆ. ಆದರೆ ಈ ಬಾರಿ ಪ್ರಶ್ನೆಪತ್ರಿಕೆ ಕಠಿಣವಾಗಿತ್ತು ಎಂದಿದ್ದಾರೆ. ಮುಂದೆ ಎಂಬಿಬಿಎಸ್, ಬಿಎಂಎಸ್ ಓದುವ ಇಂಗಿತವನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದಾರೆ.
ಲೀಕ್ ಆದಲ್ಲಿ ಮಾತ್ರ ಪರೀಕ್ಷೆ ಮಾಡಬೇಕಿತ್ತು ಎಂದ ವಿದ್ಯಾರ್ಥಿಗಳು
ಇನ್ನು ಕೊಪ್ಪಳದಲ್ಲಿ ನೀಟ್ ಪರೀಕ್ಷೆ ಮುಗಿಸಿ ಹೊರಬಂದ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಗಿಂತ ಈ ಪರೀಕ್ಷೆ ಕಠಿಣವಾಗಿತ್ತು. ಭೌತಶಾಸ್ತ್ರ ವಿಷಯದಲ್ಲಿ ದೀರ್ಘ ಪ್ರಶ್ನೆಗಳಿತ್ತು. ಎಲ್ಲಿ ಲೀಕ್ ಆಗಿತ್ತು, ಅಲ್ಲಿ ಅಷ್ಟೇ ಪರೀಕ್ಷೆ ಮಾಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
