ರಾಜ್ಯದಲ್ಲಿ ‘ಹೀಟ್ ವೇವ್’ ಅಬ್ಬರ: ಆಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಬೆಡ್ ಮೀಸಲಿಡಲು ದಿನೇಶ್ ಗುಂಡೂರಾವ್ ಸೂಚನೆ! – Kannada News | Heatwave Crisis in Karnataka: Minister Urges Caution, Govt Sets Up Special Wards

ಬೆಂಗಳೂರು, ಏ.21: ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಕುರಿತು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಬಿಸಿ ಗಾಳಿ (Heat Wave) ಹೆಚ್ಚಿರುವುದರಿಂದ ಜನರು ತೀವ್ರ ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ. ನೆನ್ನೆ (ಏ.20) ಬೀದರ್‌ನಲ್ಲಿ 20 ವರ್ಷದ ಯುವಕ ಹೀಟ್‌ಸ್ಟ್ರೋಕ್‌ಗೆ ಬಲಿಯಾಗಿದ್ದಾನೆ. ಇದೀಗ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಎಂದೂ ಕಾಣದಂತಹ ದಾಖಲೆ ಮಟ್ಟದ ಉಷ್ಣಾಂಶ ದಾಖಲಾಗುತ್ತಿದೆ. ಮಳೆಯೂ ಇಲ್ಲದ ಕಾರಣ ಪರಿಸ್ಥಿತಿ ಮತ್ತಷ್ಟು ಸವಾಲಾಗಿ ಪರಿಣಮಿಸಿದೆ. ಬಿಸಿಲಿನ ತಾಪಕ್ಕೆ ಈಗಾಗಲೇ ರಾಜ್ಯದಲ್ಲಿ ಒಂದು ಸಾವು ವರದಿಯಾಗಿದೆ ಎಂದು ಸಚಿವರು ಖಚಿತಪಡಿಸಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ಪ್ರಖರತೆ ವಿಪರೀತವಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಹೀಟ್​ ಸ್ಟ್ರೋಕ್​ಗೆ ಮೊದಲ ಬಲಿ! ಬೀದರ್​ನಲ್ಲಿ ಬಿಸಿಲ ಝಳ ತಾಳಲಾರದೆ ಕುಸಿದು ಬಿದ್ದ ಯುವಕ ಸ್ಥಳದಲ್ಲೇ ಸಾವು

ಬಿಸಿಲಿನ ಹೊಡೆತಕ್ಕೆ (Heat Stroke) ಒಳಗಾಗುವವರಿಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಮತ್ತು ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ತುರ್ತು ಚಿಕಿತ್ಸೆಗಾಗಿ ವೈದ್ಯರು ಸನ್ನದ್ಧರಾಗಿದ್ದಾರೆ. ಮಧ್ಯಾಹ್ನದ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ. ಬಿಸಿ ಗಾಳಿಯ ಪ್ರಭಾವ ಇರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಸಚಿವರು ತಿಳಿಸಿದ್ದಾರೆ.ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸೂರ್ಯನ ಶಾಖ ವಿಪರೀತವಾಗಿದ್ದು, ಅಲ್ಲಿನ ಜನರು ಮನೆಯಿಂದ ಹೊರಬರುವಾಗ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಜಿಲ್ಲಾ ಆಸ್ಪತ್ರೆಗಳಲ್ಲಿ ಈಗಾಗಲೇ ಅಗತ್ಯ ಔಷಧಿ ಮತ್ತು ಚಿಕಿತ್ಸಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಹೈಟೆಕ್ ‘ಹೀಟ್ ಸ್ಟ್ರೋಕ್ ವಾರ್ಡ್’ ಸಜ್ಜು

ಜಿಲ್ಲೆಯಲ್ಲಿ ಸೂರ್ಯನ ತಾಪಮಾನ ಏರುತ್ತಲೇ ಇದ್ದು, ಪ್ರಸ್ತುತ 40 ರಿಂದ 41 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಈ ಬಿಸಿ ಗಾಳಿ ಮತ್ತು ಉಷ್ಣಾಘಾತದ (Heat Stroke) ಭೀತಿಯ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಿಸಿಲಿನ ಹೊಡೆತಕ್ಕೆ ಒಳಗಾಗುವವರಿಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ‘ಹೀಟ್ ಸ್ಟ್ರೋಕ್ ವಾರ್ಡ್’ ಅನ್ನು ಸಿದ್ಧಪಡಿಸಲಾಗಿದೆ. ಈ ವಾರ್ಡ್‌ನಲ್ಲಿ ಒಟ್ಟು 10 ಸುಸಜ್ಜಿತ ಬೆಡ್‌ಗಳಿದ್ದು, ಇವುಗಳನ್ನು ಐಸಿಯು (ICU) ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ವಿಶೇಷ ವಾರ್ಡ್‌ನ ನಿರ್ವಹಣೆಗಾಗಿ ಇಬ್ಬರು ನರ್ಸ್‌ಗಳು ಹಾಗೂ ಪ್ರತ್ಯೇಕ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ.

ನಿನ್ನೆಯಷ್ಟೇ ಆಸ್ಪತ್ರೆಯಲ್ಲಿ ಫ್ಯಾನ್ ಸೌಲಭ್ಯದ ಕೊರತೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾದ ಬೆನ್ನಲ್ಲೇ, ಆಸ್ಪತ್ರೆ ಅಧೀಕ್ಷಕರು ಎಚ್ಚೆತ್ತುಕೊಂಡು ಈ ತುರ್ತು ಚಿಕಿತ್ಸಾ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ ಜಿಲ್ಲಾ ಆಸ್ಪತ್ರೆಯ ಮುಖ್ಯ ಅಧೀಕ್ಷಕರಾದ ಡಾ. ಮಂಜುನಾಥ್ ಅವರು ಜನರಿಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಬೆಳಿಗ್ಗೆ 10 ಗಂಟೆಯ ನಂತರ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ. ಮಕ್ಕಳು ಮತ್ತು ವೃದ್ಧರು ಪ್ರತಿ ಒಂದು ಗಂಟೆಗೊಮ್ಮೆ ತಪ್ಪದೇ ನೀರು ಕುಡಿಯಬೇಕು. ಬಿಸಿ ಗಾಳಿಯ ಪ್ರಭಾವದಿಂದ ತಲೆಸುತ್ತು ಅಥವಾ ಸುಸ್ತು ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *