ರಾಜ್ಯದ ತರಕಾರಿಗಳಲ್ಲಿ ಹೇರಳವಾಗಿ ಸಿಕ್ತು ಲೆಡ್ ಅಂಶ!ನೀವು ತಿನ್ನುವುದು ನಿಜವಾಗಲೂ ಆರ್ಗ್ಯಾನಿಕ್ ತರಕಾರಿನಾ? – Kannada News | Shocking Report: Lead and Pesticides Found in Karnataka Vegetables

ನೀವು ತಿನ್ನುವುದು ನಿಜವಾಗಲೂ ಆರ್ಗ್ಯಾನಿಕ್ ತರಕಾರೀನಾ?

ಬೆಂಗಳೂರು, ಫೆಬ್ರವರಿ 23: ರಾಜ್ಯದ ತರಕಾರಿಗಳಲ್ಲಿ ಲೆಡ್ (Lead)ಪ್ರಮಾಣ ಹೇರಳವಾಗಿ ಕಂಡುಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯು ಕರ್ನಾಟಕದಾದ್ಯಂತ 70ಕ್ಕೂ ಹೆಚ್ಚು ತರಕಾರಿ ಸ್ಯಾಂಪಲ್​ಗಳನ್ನು ತಂದು ಪರಿಶೀಲಿಸಿದಾಗ 19 ಮಾದರಿಗಳಲ್ಲಿ ಸೀಸದ ಪ್ರಮಾಣ ಮಿತಿ ಮೀರಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಕೀಟನಾಶಕ ಬಳಕೆ ಬಗ್ಗೆ ಜಾಗೃತಿ ಮೂಡಿಸುವಂತೆ ಸಮಿತಿ ಶಿಫಾರಸು ಮಾಡಿದೆ.

ಎರಡು ವರ್ಷಗಳ ಹಿಂದೆಯೂ ತರಕಾರಿಗಳಲ್ಲಿ ಭಾರಿ ಲೋಹಗಳ ಅಂಶ ಪತ್ತೆಯಾಗಿದೆ ಎಂದು ಅಧ್ಯಯನ ವರದಿ ಪ್ರಕಟವಾಗಿತ್ತು. 2023ರ ಅಕ್ಟೋಬರ್ 25ರಂದು ಇಎಂಪ್ರಿ ಸಂಸ್ಥೆ 400 ಮಾದರಿಗಳ ಪರಿಶೀಲನೆ ಆಧಾರವಾಗಿ ಸೀಸ ಸೇರಿದಂತೆ ಭಾರಿ ಲೋಹಗಳ ಅಸ್ತಿತ್ವವಿದೆ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ, CPCBಗೆ ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಿತ್ತು. ಆದರೀಗ ಮತ್ತೊಮ್ಮೆ ಮಾಡಿದ ಅಧ್ಯಯನದಿಂದ ರಾಜ್ಯದ ವಿವಿಧ ಭಾಗದ ತರಕಾರಿಗಳಲ್ಲಿ ಸೀಸದ ಪ್ರಮಾಣ ಹೆಚ್ಚಿರುವುದು ತಿಳಿದು ಬಂದಿದೆ.

ರಾಜ್ಯದ 19 ಸ್ಯಾಂಪಲ್​ಗಳಲ್ಲಿ ಲೋಹದ ಅಂಶ ಪತ್ತೆ!

ಎಫ್‌ಎಸ್‌ಎಸ್‌ಎಐ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಬೇಕು ಎಂದು ಹೇಳಿದ ಸಿಪಿಸಿಬಿ, ಐದು ಸದಸ್ಯರ ಸಮಿತಿಯನ್ನು ರಚಿಸಿ 72 ತರಕಾರಿ ಮಾದರಿಗಳನ್ನು ಸಂಗ್ರಹಿಸಿತ್ತು. ಇದರಲ್ಲಿ ನೆಲಮಂಗಲ, ರಾಜಾಜಿನಗರ, ಕೋಲಾರ ಮಾರುಕಟ್ಟೆಗಳಿಂದ 53 ಮಾದರಿಗಳು ಹಾಗೂ ನೆಲಮಂಗಲ, ಕೋಲಾರ, ಚಿಕ್ಕಬಳ್ಳಾಪುರ ಕೃಷಿ ಕ್ಷೇತ್ರಗಳಿಂದ ಉಳಿದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು, ಸೀಸ ಹಾಗೂ ಕೀಟನಾಶಕಗಳ ಅಂಶ ಪತ್ತೆಯಾಗಿದೆ.

ಇದನ್ನೂ ಓದಿ ಬೆಂಗಳೂರು ಗ್ರಾಮಾಂತರ ಭಾಗದ ಪ್ರಯಾಣಿಕರಿಗೂ ಬಿಎಂಟಿಸಿ ಗುಡ್ ನ್ಯೂಸ್: ಇನ್ಮುಂದೆ 80 ಕಿಮೀ ವ್ಯಾಪ್ತಿಯಲ್ಲಿ ಸಂಚಾರ!

ಯಾವ್ಯಾವ ತರಕಾರಿಗಳಲ್ಲಿ ಸೀಸ?

72 ತರಕಾರಿ ಮಾದರಿಗಳಲ್ಲಿ 19 ಮಾದರಿಗಳು ಮಾನದಂಡಕ್ಕಿಂತ ಹೆಚ್ಚಾದ ಸೀಸದ ಅಂಶ ಹೊಂದಿರುವುದು ಎಫ್‌ಎಸ್‌ಎಸ್‌ಎಐ ಮಾನ್ಯತೆ ಪಡೆದ ಪ್ರಯೋಗಾಲಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಆರ್ಗ್ಯಾನಿಕ್ ಎಂದು ಮಾರಾಟವಾಗಿದ್ದ ಬದನೆಕಾಯಿಯಲ್ಲಿ 1.953 ಮಿ.ಗ್ರಾಂ/ಕೆಜಿ ಸೀಸ ಪತ್ತೆಯಾಗಿದ್ದು, ಇದು ನಿಗದಿತ 0.1 ಮಿ.ಗ್ರಾಂ ಮಿತಿಗಿಂತ ಸುಮಾರು 20 ಪಟ್ಟು ಹೆಚ್ಚಾಗಿದೆ. ತೊಂಡೆಕಾಯಿ, ಅವರೆಕಾಯಿ, ಸೊಪ್ಪು, ಕೋಸು ಸೇರಿದಂತೆ ಹಲವು ತರಕಾರಿಗಳಲ್ಲೂ ಮಿತಿಗಿಂತ ಹಲವು ಪಟ್ಟು ಅಧಿಕ ಸೀಸ ಕಂಡುಬಂದಿದೆ. ಸೌತೆಕಾಯಿ, ಹೀರೇಕಾಯಿ, ಕ್ಯಾಪ್ಸಿಕಂ, ಬೀಟ್‌ರೂಟ್, ಹಾಗಲಕಾಯಿ, ಶಲಗಂ, ಸ್ಕ್ವಾಶ್ ಮತ್ತು ಮೆಣಸಿನಕಾಯಿ ಮಾದರಿಗಳಲ್ಲೂ ಅತಿಯಾದ ಅಂಶ ಪತ್ತೆಯಾಗಿದೆ.

ಮಣ್ಣಿನಲ್ಲೂ ಸಿಕ್ತು ವಿಷಕಾರಿ ಅಂಶ

ಕೋಲಾರ, ಚಿಕ್ಕಬಳ್ಳಾಪುರ ಮತ್ತು ನೆಲಮಂಗಲ ಪ್ರದೇಶಗಳಿಂದ ಸಂಗ್ರಹಿಸಿದ 26 ಮಣ್ಣಿನ ಮಾದರಿಗಳಲ್ಲಿ 23 ಮಾದರಿಗಳು ದೂಷಿತವಾಗಿವೆ. ಇದು ಪ್ರಾಥಮಿಕ ವರದಿ ಮಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ಸಮಗ್ರ ಅಧ್ಯಯನ ನಡೆಸುವಂತೆ ಸೂಚಿಸಲಾಗಿದೆ. ಪರಿಶೀಲನೆ ವೇಳೆ ಎಫ್‌ಎಸ್‌ಎಸ್‌ಆರ್ ಮಾನದಂಡಕ್ಕಿಂತ ಹೆಚ್ಚು ಪ್ರಮಾಣದ 12 ವಿಧದ ಕೀಟನಾಶಕ ಅವಶೇಷಗಳು ಪತ್ತೆಯಾಗಿವೆ. ಕ್ಯಾಪ್ಸಿಕಂ, ಮೆಣಸಿನಕಾಯಿ (ಬಜ್ಜಿ ಮೆಣಸು), ಶುಂಠಿ ಹಾಗೂ ಸೌತೆಕಾಯಿ ಮಾದರಿಗಳಲ್ಲಿ ಅತಿಯಾದ ಕೀಟನಾಶಕ ಅಂಶ ಕಂಡುಬಂದಿದೆ.

ಭಾರೀ ವಿಷಕಾರಿ ಕೀಟನಾಶಕವಾದ ಮೊನೋಕ್ರೋಟೊಫೋಸ್ ಕೂಡ ಪತ್ತೆಯಾಗಿದ್ದು, ಭಾರತದಲ್ಲಿ 2023ರಲ್ಲಿ ಇದನ್ನು ನಿಷೇಧಿಸಲಾಗಿತ್ತು. ಮೆಣಸಿನಕಾಯಿ ಮಾದರಿಗಳಲ್ಲಿ ನಿಗದಿತ 0.2 ಮಿ.ಗ್ರಾಂ/ಕೆಜಿ ಮಿತಿಗಿಂತ ಎರಡು ಪಟ್ಟು ಹೆಚ್ಚು ಮೊನೋಕ್ರೋಟೊಫೋಸ್ ಕಂಡುಬಂದಿದೆ.

ಇದನ್ನೂ ಓದಿ ಕರ್ನಾಟಕ ಹವಾಮಾನ ವರದಿ: ಕೂಲ್ ಸಿಟಿ ಇನ್ಮುಂದೆ ಹಾಟ್ ಸಿಟಿ! ಬೆಂಗಳೂರಿಗೆ ಗರಿಷ್ಠ ತಾಪಮಾನದ ಅಲರ್ಟ್

ಇದಲ್ಲದೆ ಏಸಿಫೇಟ್, ಇಥಿಯಾನ್, ಫಿಪ್ರೋನಿಲ್ ಹಾಗೂ ಪ್ರೊಫೆನೋಫೋಸ್ ಮುಂತಾದ ಕೀಟನಾಶಕಗಳು ಸಹ ಪತ್ತೆಯಾಗಿದ್ದು, ಅವುಗಳ ವಿಷಕಾರಿ ಪರಿಣಾಮದ ಹಿನ್ನೆಲೆಯಲ್ಲಿ ಯುರೋಪಿಯನ್ ಯೂನಿಯನ್‌ನಲ್ಲಿ ಈಗಾಗಲೇ ನಿಷೇಧಿಸಲಾಗಿದೆ ಆದರೆ ನಮ್ಮಲ್ಲಿ ಬಳಕೆಯಲ್ಲಿರುವುದು ಆತಂಕ ಸೃಷ್ಟಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:43 am, Mon, 23 February 26

Source link

Leave a Reply

Your email address will not be published. Required fields are marked *