ಬೆಂಗಳೂರು, ಜೂ.25: ರಾಜ್ಯದ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸುವ ಹಾಗೂ ಜಿಲ್ಲಾ ಮಟ್ಟದ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಮತ್ತು ಪ್ರಮುಖವಾಗಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಸಂಪುಟದ ಪ್ರಮುಖ ಸಚಿವರಿಗೆ ವಿವಿಧ ಜಿಲ್ಲೆಗಳ ಉಸ್ತುವಾರಿಯನ್ನು ಹಂಚಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳ ಜವಾಬ್ದಾರಿಯನ್ನು ಹಿರಿಯ ನಾಯಕರಿಗೆ ಹಂಚಿಕೆ ಮಾಡಲಾಗಿದ್ದು, ಡಿಸಿಎಂ ಡಾ. ಜಿ. ಪರಮೇಶ್ವರ, ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ್ ಹಾಗೂ ಯುವ ನಾಯಕರಾದ ಯತೀಂದ್ರ ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆ ಅವರಿಗೆ ಪ್ರಮುಖ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.
ಸಚಿವರು ಮತ್ತು ಹಂಚಿಕೆಯಾಗಿರುವ ಜಿಲ್ಲೆಗಳ ವಿವರ ಪಟ್ಟಿ:
| ಸಚಿವರ ಹೆಸರು | ಜಿಲ್ಲೆಗಳು |
| ಡಾ. ಜಿ. ಪರಮೇಶ್ವರ (ಡಿಸಿಎಂ) | ತುಮಕೂರು ಮತ್ತು ಚಿತ್ರದುರ್ಗ |
| ಕೃಷ್ಣ ಭೈರೇಗೌಡ | ಬೆಂಗಳೂರು ನಗರ ಮತ್ತು ಹಾಸನ |
| ರಾಮಲಿಂಗಾರೆಡ್ಡಿ | ಬೆಂಗಳೂರು ದಕ್ಷಿಣ ಮತ್ತು ಮಂಡ್ಯ |
| ಕೆ.ಹೆಚ್. ಮುನಿಯಪ್ಪ | ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಮತ್ತು ವಿಜಯನಗರ |
| ಡಾ. ಯತೀಂದ್ರ ಸಿದ್ದರಾಮಯ್ಯ | ಮೈಸೂರು ಮತ್ತು ಚಾಮರಾಜನಗರ |
| ಯು.ಟಿ. ಖಾದರ್ | ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ |
| ಎಂ.ಬಿ. ಪಾಟೀಲ್ | ವಿಜಯಪುರ ಮತ್ತು ಬಾಗಲಕೋಟೆ |
| ಪ್ರಿಯಾಂಕ್ ಖರ್ಗೆ | ಕಲಬುರಗಿ ಮತ್ತು ಯಾದಗಿರಿ |
| ಸತೀಶ್ ಜಾರಕಿಹೊಳಿ | ಬೆಳಗಾವಿ, ಧಾರವಾಡ ಮತ್ತು ಹಾವೇರಿ |
| ಕೆ.ಜೆ. ಜಾರ್ಜ್ | ಚಿಕ್ಕಮಗಳೂರು ಮತ್ತು ದಾವಣಗೆರೆ |
| ಈಶ್ವರ ಖಂಡ್ರೆ | ಬೀದರ್ ಮತ್ತು ಗದಗ |
| ಭೈರತಿ ಸುರೇಶ್ | ಕೋಲಾರ ಮತ್ತು ಚಿಕ್ಕಬಳ್ಳಾಪುರ |
| ಡಾ. ಶರಣಪ್ರಕಾಶ್ ಪಾಟೀಲ್ | ರಾಯಚೂರು ಮತ್ತು ಕೊಪ್ಪಳ |
ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮತ್ತು ಪರಿಹಾರ ಕಾಮಗಾರಿಗಳ ಉಸ್ತುವಾರಿ ವಹಿಸಲು ಮುಖ್ಯಮಂತ್ರಿಗಳು ಸಚಿವರಿಗೆ ವಿವಿಧ ಜಿಲ್ಲೆಗಳ ತುರ್ತು ಪ್ರಕೃತಿ ವಿಕೋಪ ಮೇಲುಸ್ತುವಾರಿಜವಾಬ್ದಾರಿಯನ್ನು ಹಂಚಿಕೆ ಮಾಡಿ ಆದೇಶಿಸಿದ್ದಾರೆ.
ಸದ್ಯ ಹೊರಬಿದ್ದಿರುವ ಈ ಪಟ್ಟಿಯು ಪೂರ್ಣ ಪ್ರಮಾಣದ ಅಧಿಕೃತ ಜಿಲ್ಲಾ ಉಸ್ತುವಾರಿ ಹಂಚಿಕೆಯಲ್ಲ, ಬದಲಿಗೆ ಮಳೆಗಾಲದ ತುರ್ತು ಪರಿಸ್ಥಿತಿ ಮತ್ತು ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿಗಾಗಿ ಮಾತ್ರ ಸಚಿವರಿಗೆ ಈ ತಾತ್ಕಾಲಿಕ ಹೊಣೆಗಾರಿಕೆಯನ್ನು ನೀಡಲಾಗಿದೆ ಎಂದು ಪ್ರಮುಖ ರಾಜಕೀಯ ಮೂಲಗಳು ಸ್ಪಷ್ಟಪಡಿಸಿವೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ತೀವ್ರವಾಗಿರುವುದರಿಂದ ಯು.ಟಿ. ಖಾದರ್ ಹಾಗೂ ಕೆ.ಜೆ. ಜಾರ್ಜ್ ಅವರಿಗೆ ಆಯಾ ಸೂಕ್ಷ್ಮ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ.
ಇದನ್ನೂ ಓದಿ: 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ವೈಟ್ ಟ್ಯಾಪಿಂಗ್ ರಸ್ತೆಯಲ್ಲೇ 350 ಕೋಟಿ ರೂ.ನಲ್ಲಿ ಫ್ಲೈಓವರ್
ಈ ಹಂಚಿಕೆಯು ಕೇವಲ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ, ತಕ್ಷಣದ ಪರಿಹಾರ ಕಾರ್ಯಗಳಿಗೆ ಚಾಲನೆ ನೀಡಲು ಮಾಡಲಾದ ತಾತ್ಕಾಲಿಕ ವ್ಯವಸ್ಥೆಯಾಗಿದೆ. ಪೂರ್ಣ ಪ್ರಮಾಣದ ಜಿಲ್ಲಾ ಉಸ್ತುವಾರಿ ಸಚಿವರ ಅಧಿಕೃತ ಪಟ್ಟಿ ಸದ್ಯದಲ್ಲೇ ಹೊರಬೀಳಲಿದೆ ಎಂದು ಹೇಳಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 1:19 pm, Thu, 25 June 26
