‘ರಾಮಾಯಣ’ ಚಿತ್ರದ ಬಿಡುಗಡೆ ಮುಂದೂಡಿಕೆ? ವದಂತಿಗಳಿಗೆ ತೆರೆ ಎಳೆದ ಚಿತ್ರತಂಡ! – Kannada News | Ramayana movie released postponed what team said

ರಣ್​​ಬೀರ್ ಕಪೂರ್ (Ranbir Kapoor), ಯಶ್, ಸಾಯಿ ಪಲ್ಲವಿ ಇನ್ನೂ ಹಲವು ಸ್ಟಾರ್ ನಟ, ನಟಿಯರು ನಟಿಸಿ ಭಾರಿ ಬಜೆಟ್​​ನಲ್ಲಿ ನಿರ್ಮಾಣ ಮಾಡಲಾಗಿರುವ ‘ರಾಮಾಯಣ’ ಸಿನಿಮಾ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿದೆ. ಸಿನಿಮಾವನ್ನು ಹಾಲಿವುಡ್​​ ಮಾದರಿಯಲ್ಲಿ ನಿರ್ಮಾಣ ಮಾಡಿರುವುದಾಗಿ ಮಾತ್ರವಲ್ಲದೆ, ಭಾರತದಿಂದ ವಿಶ್ವ ಸಿನಿಮಾ ರಂಗಕ್ಕಾಗಿ ನಿರ್ಮಾಣ ಮಾಡಲಾಗಿರುವ ಸಿನಿಮಾ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಪದೇ ಪದೇ ಹೇಳಿದ್ದಾರೆ. ಸಿನಿಮಾದ ಪ್ರಚಾರವನ್ನು ಈಗಾಗಲೇ ಆರಂಭಿಸಲಾಗಿದೆ. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ಸಿನಿಮಾದ ಬಿಡುಗಡೆ ಮುಂದೂಡಲಾಗಿದೆ ಎನ್ನಲಾಗುತ್ತಿದೆ.

‘ರಾಮಾಯಣ’ ಸಿನಿಮಾದ ಟೀಸರ್ ಬಿಡುಗಡೆ ವಿಳಂಬವಾಗಿತ್ತು, ಆ ಬಳಿಕ ಬಿಡುಗಡೆ ಆದ ಟೀಸರ್​​ನಲ್ಲಿ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಲಾಗಿತ್ತು. ಇದೇ ವರ್ಷದ ದೀಪಾವಳಿಗೆ ಸಿನಿಮಾದ ಮೊದಲ ಭಾಗ ರಿಲೀಸ್ ಆಗಲಿದೆ ಎನ್ನಲಾಯ್ತು. ಆದರೆ ಇದೀಗ ಹರಿದಾಡುತ್ತಿರುವ ಕೆಲ ಸುದ್ದಿಗಳ ಪ್ರಕಾರ ಸಿನಿಮಾದ ಬಿಡುಗಡೆ ತಡವಾಗಲಿದೆಯಂತೆ. ಅಂತರಾಷ್ಟ್ರೀಯ ಯುದ್ಧ ಪರಿಸ್ಥಿತಿಯ ಜೊತೆಗೆ ಸಿನಿಮಾದ ಕೆಲ ಭಾಗಗಳ ಮರು ವಿಎಫ್​​ಎಕ್ಸ್ ಮತ್ತು ಮರು ಚಿತ್ರೀಕರಣ ಸಹ ಮಾಡಲಾಗುತ್ತಿದೆ ಎಂಬ ಸುದ್ದಿಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.

ಆದರೆ ಚಿತ್ರತಂಡ ಹೇಳಿರವಂತೆ ಅದೆಲ್ಲ ಸುಳ್ಳು ಸುದ್ದಿ ಎನ್ನಲಾಗಿದ್ದು, ಸಿನಿಮಾವು ಈ ಹಿಂದೆಯೇ ನಿಗದಿ ಪಡಿಸಿರುವಂತೆ ದೀಪಾವಳಿ ಹಬ್ಬದಂದೇ ಬಿಡುಗಡೆ ಆಗಲಿದೆಯೆಂತೆ. ಹಿಂದಿ ಮಾತ್ರವಲ್ಲದೆ, ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಕೆಲ ವಿದೇಶಿ ಭಾಷೆಗಳಲ್ಲಿಯೂ ಡಬ್ ಆಗಿ ಸಿನಿಮಾ ಬಿಡುಗಡೆ ಆಗಲಿದೆ. ‘ರಾಮಾಯಣ’ ಸಿನಿಮಾದ ಪ್ರಚಾರ ಭಾರತದಲ್ಲಿ ಇನ್ನೂ ಅಧಿಕೃತವಾಗಿ ಆರಂಭವಾಗಿಲ್ಲ, ಆದರೆ ಅದೂ ಸಹ ಶೀಘ್ರವೇ ಆರಂಭ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:‘ಅನಿಮಲ್ ಪಾರ್ಕ್’ ಚಿತ್ರೀಕರಣ ಯಾವಾಗ: ಬಾಯ್ಬಿಟ್ಟ ರಣ್​​ಬೀರ್ ಕಪೂರ್

ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾ ನಮಿತ್ ಮಲ್ಹೋತ್ರಾ ಅವರ ಅತ್ಯಂತ ಮಹತ್ವಾಕಾಂಕ್ಷೆಯ ಸಿನಿಮಾ ಆಗಿದೆ. ಆಸ್ಕರ್ ವಿಜೇತ ಹಾಲಿವುಡ್ ಸಂಗೀತ ನಿರ್ದೇಶಕ ಹ್ಯಾನ್ಸ್ ಝಿಮ್ಮರ್ ಮತ್ತು ಎಆರ್ ರೆಹಮಾನ್ ಒಟ್ಟಿಗೆ ಈ ಸಿನಿಮಾಕ್ಕೆ ಸಂಗೀತ ನೀಡುತ್ತಿರುವುದು ವಿಶೇಷ. ಈ ಚಿತ್ರವನ್ನು ಜಾಗತಿಕ ಮಟ್ಟದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಅತ್ಯಾಧುನಿಕ ವಿಎಫ್‌ಎಕ್ಸ್ ತಂತ್ರಜ್ಞಾನದೊಂದಿಗೆ ತಯಾರಿಸಲಾಗುತ್ತಿದೆ. ಚಿತ್ರದ ಕೆಲಸಗಳು ವೇಗವಾಗಿ ನಡೆಯುತ್ತಿದ್ದು, ಬಿಡುಗಡೆಯ ದಿನಾಂಕದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎನ್ನಲಾಗಿದೆ. ಸಿನಿಮಾದ ಮೊದಲ ಭಾಗ ಈ ವರ್ಷ ದೀಪಾವಳಿಗೆ ಬಿಡುಗಡೆ ಆದರೆ ಎರಡನೇ ಭಾಗ ಮುಂದಿನ ವರ್ಷದ ದೀಪಾವಳಿಗೆ ಬಿಡುಗಡೆ ಆಗಲಿದೆ. ಸಿನಿಮಾ ಅನ್ನು ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *