‘ರಾಮಾಯಣ’ (Ramayana) ಸಿನಿಮಾದ ಪ್ರಚಾರ ಬಲು ಜೋರಾಗಿ ನಡೆಯುತ್ತಿದೆ. ವಿದೇಶಿ ಮಾರುಕಟ್ಟೆಯನ್ನು ಮುಖ್ಯವಾಗಿ ಗಮನದಲ್ಲಿರಿಸಿಕೊಂಡು ಸಿನಿಮಾದ ಪ್ರಚಾರ ಮಾಡಲಾಗುತ್ತಿದೆ. ಸಿನಿಮಾದ ಟ್ರೈಲರ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಕೆಲವರು ಟ್ರೈಲರ್ ಚೆನ್ನಾಗಿದೆ ಎಂದರೆ ಇನ್ನು ಕೆಲವರು ಟೀಕೆ ಮಾಡುತ್ತಿದ್ದಾರೆ. ಏನೇ ಆಗಲಿ ಟ್ರೈಲರ್ ವೈರಲ್ ಅಂತೂ ಆಗಿದೆ. ಆದರೆ ಇದೀಗ ಸಿನಿಮಾದ ನಾಯಕ ರಣ್ಬೀರ್ ಕಪೂರ್ ನೀಡಿರುವ ಹೇಳಿಕೆ ಸಿನಿಮಾದ ಬಗ್ಗೆ ತುಸು ಗೊಂದಲ ಮೂಡಿಸುವಂತಿದೆ. ಅವರು ‘ರಾಮಾಯಣ’ ಮೊದಲ ಭಾಗಕ್ಕಿಂತಲೂ ಎರಡನೇ ಭಾಗ ಚೆನ್ನಾಗಿರಲಿದೆ ಎಂದಿದ್ದಾರೆ. ಆ ಮೂಲಕ ಮೊದಲ ಭಾಗ ಅಷ್ಟೇನೂ ಅದ್ಭುತವಾಗಿಲ್ಲ ಎಂಬ ಸಂದೇಶ ಪರೋಕ್ಷವಾಗಿ ನೀಡಿದಂತಿದ್ದಾರೆ.
‘ದಿ ಡೈರೆಕ್ಟ್’ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ರಣಬೀರ್ ಕಪೂರ್, ‘ಭಾರತದ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದನ್ನು ದೊಡ್ಡ ಪರದೆಗೆ ತರುವ ಅಪಾರ ಜವಾಬ್ದಾರಿಯ ಬಗ್ಗೆ ಹೇಳಿಕೊಂಡಿದ್ದಾರೆ, ‘ನಿಜ ಹೇಳಬೇಕೆಂದರೆ, ರಾಮಾಯಣವನ್ನು ಹೇಳಲು ಬಹುಶಃ 10 ಭಾಗಗಳ ಸಿನಿಮಾ ಬೇಕಾಗಬಹುದು, ಆದರೆ ಅದನ್ನು ಕೇವಲ ಎರಡು ಭಾಗಗಳಲ್ಲಿ ಸಂಕ್ಷಿಪ್ತವಾಗಿ ಹೇಳುವುದು ಬಹಳ ಕಷ್ಟವಾಗಿತ್ತು’ ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಕಪೂರ್, ‘ರಾಮಾಯಣ ಗ್ರಂಥವು 4,000 ವರ್ಷಗಳಿಗೂ ಹೆಚ್ಚು ಕಾಲ ಉಳಿದುಕೊಂಡು ಬಂದಿದೆ ಎನ್ನಲಾಗುತ್ತದೆ. ಪ್ರಭು ಶ್ರೀರಾಮ ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಆಂತರಿಕ ರಕ್ಷಕನಾಗಿದ್ದಾರೆ, ಮತ್ತು ಇದು ಧೈರ್ಯ, ಕೆಟ್ಟದರ ಮೇಲೆ ಒಳ್ಳೆಯದರ ವಿಜಯ, ಧರ್ಮ, ಕ್ಷಮೆ, ಕರುಣೆ ಹಾಗೂ ಅಹಂಕಾರದ ಬಗ್ಗೆ ಮಾತನಾಡುವ ಕತೆಯಾಗಿದೆ. ಕತೆಯ ಪ್ರತಿಯೊಂದು ವಿಷಯವೂ ಜೀವನದ ಒಂದು ಪಾಠವಾಗಿದೆ’ ಎಂದು ರಾಮಾಯಣ ಕತೆಯನ್ನು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ:‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ 2’ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಣಬೀರ್, ‘ಸೀಕ್ವೆಲ್ನ ಕೆಲಸಗಳು ವೇಗದ ಗತಿಯಲ್ಲಿ ಸಾಗುತ್ತಿವೆ ಎಂದು ಖಚಿತಪಡಿಸಿದರು. ‘ಮೊದಲ ಭಾಗ ಬಿಡುಗಡೆಯಾಗುವ ಮೊದಲೇ ನಾವು ಈಗಾಗಲೇ ಪಾರ್ಟ್ 2 ರ ಶೂಟಿಂಗ್ ಅನ್ನು ಶೇಕಡಾ 50 ರಷ್ಟು ಮುಗಿಸಿದ್ದೇವೆ. ಕಥೆಯು ತನ್ನ ಮಹತ್ವದ ಅಂತ್ಯದತ್ತ ಸಾಗುತ್ತಿದ್ದಂತೆ ಸನ್ನಿ ಡಿಯೋಲ್ ಅವರ ಹನುಮಾನ್ ಪಾತ್ರವು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಲಿದೆ ಎಂದು ತಿಳಿಸಿದ ನಟ, ಮುಂಬರುವ ಭಾಗವು “ಇನ್ನಷ್ಟು ದೊಡ್ಡದಾಗಿ ಮತ್ತು ಹೆಚ್ಚು ಮನರಂಜನೆಯಿಂದ ಕೂಡಿರಲಿದೆ” ಎಂದು ಭರವಸೆ ನೀಡಿದ್ದಾರೆ.
ರಾಮಾಯಣ ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾದ ಮೊದಲ ಭಾಗ ಇದೇ ವರ್ಷದ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಎರಡನೇ ಭಾಗ ಮುಂದಿನ ವರ್ಷ ನವೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 10:57 am, Wed, 5 August 26