ರಾಮ್ ಚರಣ್ ಕಾರಣಕ್ಕೆ ಟ್ರೋಲ್​​ಗೆ ಒಳಗಾದ ಮೆಗಾಸ್ಟಾರ್ ಚಿರಂಜೀವಿ – Kannada News | Chiranjeevi being criticized for over praising his son

ಮೆಗಾಸ್ಟಾರ್ ಚಿರಂಜೀವಿ (Chiranjeevi) ಟಾಲಿವುಡ್​​ನ ಸೂಪರ್ ಸ್ಟಾರ್ ನಟ. 70ರ ವಯಸ್ಸಿನಲ್ಲೂ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಮಾತ್ರವಲ್ಲದೆ, ಸಿನಿಮಾ ರಂಗಕ್ಕೆ ಏನೇ ಸಮಸ್ಯೆ ಬಂದಾಗ ಮುಂದೆ ನಿಲ್ಲುತ್ತಾರೆ. ಹೊಸಬರ ಸಿನಿಮಾಗಳಿಗೆ ಬೆಂಬಲ ನೀಡುತ್ತಾರೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಹೀಗೆ ಒಬ್ಬ ಆದರ್ಶ ಹಿರಿಯ ನಟನಂತೆ ಇದ್ದಾರೆ. ಆದರೆ ಇತ್ತೀಚೆಗೆ ಚಿರಂಜೀವಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಣ್ಣ ಬೇಸರ, ಟೀಕೆ ಮತ್ತು ಟ್ರೋಲಿಂಗ್ ಶುರುವಾಗಿದೆ. ಅದಕ್ಕೆ ಅವರ ಪುತ್ರ ಪ್ರೇಮವೇ ಕಾರಣವಾಗಿದೆ.

ಮೆಗಾಸ್ಟಾರ್ ಚಿರಂಜೀವಿ ಅವರು ಸಹಜವಾಗಿಯೇ ಮಗ ರಾಮ್ ಚರಣ್ ಸಿನಿಮಾಗಳಿಗೆ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ಇತ್ತೀಚೆಗೆ ‘ಪೆದ್ದಿ’ ಸಿನಿಮಾಕ್ಕೂ ಚಿರಂಜೀವಿ ಅವರು ಆಸಕ್ತಿವಹಿಸಿ, ಆರಂಭದಲ್ಲಿ ಎದುರಾದ ವಿಘ್ನಗಳನ್ನು ಸಹ ನಿವಾರಿಸಿಕೊಟ್ಟರು. ಸೆಟ್​​ಗೆ ಭೇಟಿ ನೀಡಿದ ಸಮಯದಲ್ಲೂ ಸಹ ಮಗನ ಶ್ರಮ, ಸಾಹಸಗಳನ್ನು ಬಾಯ್ತುಂಬ ಕೊಂಡಾಡಿದರು. ಅದೆಲ್ಲ ಸಹಜವಾಗಿಯೇ ಇತ್ತು, ಆದರೆ ಇತ್ತೀಚೆಗೆ ‘ಪೆದ್ದಿ’ ಸಿನಿಮಾದ ಯಶಸ್ಸಿನ ಸಂಭ್ರಮಾಚರಣೆ ವೇಳೆ ಚಿರಂಜೀವಿ ಆಡಿರುವ ಮಾತುಗಳು ಇದೀಗ ವಿಮರ್ಶೆಗೆ ಒಳಗಾಗಿವೆ.

ತಮ್ಮ ಮಗನನ್ನು ಮುಂದಿನ ‘ಮೆಗಾಸ್ಟಾರ್’ ಆಗಿ ಟಾಲಿವುಡ್​​ನಲ್ಲಿ ನೆಲೆ ನಿಲ್ಲಿಸುವ ದೂರಾಲೋಚನೆ ಹೊಂದಿರುವ ಚಿರಂಜೀವಿ ಅವರು ತಮ್ಮ ಅಂದಿನ ಭಾಷಣದಲ್ಲಿ ಪದೇ ಪದೇ ಇದೇ ವಿಷಯವನ್ನು ಒತ್ತಿ ಹೇಳಿದರು. ‘ನನ್ನ ಬಿರುದನ್ನು ನಾನು ಮಗನಿಗೆ ನೀಡುತ್ತಿದ್ದೇನೆ’, ‘ಅಪ್ಪನನ್ನು ಮೀರಿಸಿದ ಮಗ ಎನಿಸಿಕೊಂಡಿದ್ದಾನೆ’, ‘ಪ್ರಧಾನಿ ನರೇಂದ್ರ ಮೋದಿ ಸಹ ರಾಮ್ ಚರಣ್ ಅನ್ನು ಭವಿಷ್ಯದ ಮೆಗಾಸ್ಟಾರ್’ ಎಂದೇ ಕರೆಯುತ್ತಾರೆ’ ಎಂದೆಲ್ಲ ಹೇಳಿದರು. ಆ ಮೂಲಕ ತಮ್ಮ ಸ್ಥಾನಕ್ಕೆ ಮಗನನ್ನು ಕೂರಿಸುವ ಪ್ರಯತ್ನ ಮಾಡಿದರು.

ಇದನ್ನೂ ಓದಿ:ಸಮಂತಾ ತಾಯಿ ಆಗೋ ವಿಷಯವನ್ನು ಖಚಿತಪಡಿಸಿದ ಚಿರಂಜೀವಿ

ರಾಮ್ ಚರಣ್ ನಟನೆ ಬಗ್ಗೆ ಮಾತನಾಡುತ್ತಾ, ‘ಈ ಬಾರಿ ರಾಷ್ಟ್ರಪ್ರಶಸ್ತಿ ನನ್ನ ಮಗನಿಗೆ ಸಿಗಲೇ ಬೇಕು’ ಎಂಬರ್ಥದ ಮಾತುಗಳನ್ನು ಚಿರಂಜೀವಿ ಆಡಿದರು. ರಾಷ್ಟ್ರಪ್ರಶಸ್ತಿಗೂ ಮೀರಿದ ನಟನೆಯನ್ನು ತಮ್ಮ ಮಗ ಮಾಡಿದ್ದಾನೆ ಎಂದು ಸಹ ಅವರು ಹೇಳಿದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ‘ಪುಷ್ಪ’ ಸಿನಿಮಾದ ನಟನೆಗೆ ಅಲ್ಲು ಅರ್ಜುನ್ ಅವರಿಗೆ ಈಗಾಗಲೇ ರಾಷ್ಟ್ರಪ್ರಶಸ್ತಿ ದೊರೆತಿದೆ. ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ನಡುವೆ ಸ್ಪಷ್ಟವಾದ ಸ್ಪರ್ಧೆ, ಪ್ರತಿಸ್ಪರ್ಧೆ ಇದೆ. ಅಲ್ಲು ಅರ್ಜುನ್ ಈಗಾಗಲೇ ರಾಷ್ಟ್ರಪ್ರಶಸ್ತಿ ಗಳಿಸಿರುವ ಕಾರಣ, ಚಿರಂಜೀವಿ ಅವರು ತಮ್ಮ ಪುತ್ರನಿಗೂ ರಾಷ್ಟ್ರಪ್ರಶಸ್ತಿ ಲಭಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ತಮ್ಮ ಪ್ರಭಾವ ಬಳಸಿ ರಾಷ್ಟ್ರಪ್ರಶಸ್ತಿ ಕೊಡಿಸಿದರೂ ಅಚ್ಚರಿ ಏನಿಲ್ಲ.

ಚಿರಂಜೀವಿ ಅವರು ಮೊದಲಿನಿಂದಲೂ ತಮ್ಮ ಪುತ್ರ ಪ್ರೇಮದ ಕಾರಣದಿಂದ ಆಗಾಗ್ಗೆ ಟ್ರೋಲ್ ಆಗುತ್ತಾ ಬಂದಿದ್ದಾರೆ. ಹಿಂದೆ, ‘ಬಾಹುಬಲಿ 1’ ಸಿನಿಮಾ ಬಿಡುಗಡೆ ಆದಾಗಲೂ ಸಹ ಆ ಸಿನಿಮಾದ ಬಗ್ಗೆ ಪೂರ್ಣ ತೃಪ್ತಿಯಿಂದ ಮಾತನಾಡಿರಲಿಲ್ಲ, ಬದಲಿಗೆ ‘ಮಗಧೀರ’ ಸಿನಿಮಾ ‘ಬಾಹುಬಲಿ 1’ಗಿಂತಲೂ ಚೆನ್ನಾಗಿದೆ ಎಂಬರ್ಥದ ಮಾತುಗಳನ್ನಾಡಿದ್ದರು. ಈಗ ಆ ಹಳೆಯ ವಿಡಿಯೋ ಸಹ ಮತ್ತೆ ವೈರಲ್ ಆಗುತ್ತಿದೆ. ಒಟ್ಟಾರೆ, ವೃತ್ತಿ ಜೀವನದ ಉದ್ದಕ್ಕೂ ಪ್ರಶಂಸೆಗಳನ್ನೇ ಕೇಳುತ್ತಾ ಬಂದಿರುವ ಚಿರಂಜೀವಿ ಅವರು ಈಗ ತಮ್ಮ ಅತಿಯಾದ ಪುತ್ರ ಪ್ರೇಮದಿಂದ ಟೀಕೆಗಳನ್ನು ಎದುರಿಸಬೇಕಾಗಿ ಬಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Source link

Leave a Reply

Your email address will not be published. Required fields are marked *