ರಾಮ ಮಂದಿರ ದೇಣಿಗೆ ಕಳ್ಳತನ ವಿವಾದ; ಚಂಪತ್ ರಾಯ್ ಮೊದಲ ಪ್ರತಿಕ್ರಿಯೆ – Kannada News | Champat Rai first reaction on Ram Temple Donation Theft row says Allegations against me baseless

ಅಯೋಧ್ಯೆ, ಜುಲೈ 7: ಸುಮಾರು 1 ತಿಂಗಳಿಂದ ಮೌನವಾಗಿದ್ದ ಅಯೋಧ್ಯೆ ರಾಮ ಮಂದಿರ (Ram Mandir) ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, “ದೇಣಿಗೆ ಕಳ್ಳತನದ ಆರೋಪದ ಕುರಿತು ಎಸ್​ಐಟಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ ನಂತರವೇ ನಾನು ಈ ವಿಷಯದ ಬಗ್ಗೆ ಸಮಗ್ರವಾಗಿ ಮಾತನಾಡುತ್ತೇನೆ” ಎಂದು ಹೇಳಿದ್ದಾರೆ. ಈ ಕುರಿತು ಪತ್ರವೊಂದನ್ನು ಬರೆದಿರುವ ಚಂಪತ್ ರಾಯ್, ಡಿಜಿಟಲ್ ಜಗತ್ತಿನಲ್ಲಿ ತಮ್ಮ ವಿರುದ್ಧ ಹರಿದಾಡುತ್ತಿರುವ ವದಂತಿಗಳು ಮತ್ತು ಊಹಾಪೋಹಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ರಾಮ ಮಂದಿರದ ದೇಣಿಗೆ ಪೆಟ್ಟಿಗೆಗಳ ಒಳಗಿನ ಹಣ ಎಣಿಕೆಗೆ ಸಂಬಂಧಿಸಿದಂತೆ ತಮ್ಮ ಮೇಲೆ ಮಾಡಲಾಗಿರುವ ಎಲ್ಲಾ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿಹಾಕಿದ್ದಾರೆ.

“ನಾನು 1991ರಿಂದ ಅಯೋಧ್ಯೆಯಲ್ಲಿ ಸಾಂಘಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 45 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ” ಎಂದು ಹೇಳಿರುವ ಚಂಪತ್ ರಾಯ್ “ಒಮ್ಮೆ ತನಿಖೆ ಪೂರ್ಣಗೊಂಡರೆ ಸತ್ಯ ಏನೆಂಬುದು ಹೊರಬರಲಿದೆ” ಎಂದಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ವಿವಾದ: ಕೊನೆಗೂ ಮೌನ ಮುರಿದ ಟ್ರಸ್ಟ್ ಅಧ್ಯಕ್ಷರು, ಪ್ರಧಾನಿ, ಸಿಎಂಗೆ ಭಾವುಕ ಪತ್ರ

“ಎಸ್‌ಐಟಿಯ ಅಂತಿಮ ವರದಿ ಬಂದ ನಂತರ, ಸಾರ್ವಜನಿಕವಾಗಿ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತೇನೆ. ಆಗ ಸಂಪೂರ್ಣ ಸತ್ಯವು ಬೆಳಕಿಗೆ ಬರಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ” ಎಂದು ಅವರು ಪತ್ರದಲ್ಲಿ ಸೇರಿಸಿದ್ದಾರೆ.

ಸತ್ಯ ಶೀಘ್ರದಲ್ಲೇ ಹೊರಬರಲಿದೆ:

ಪ್ರಸ್ತುತ ನಡೆಯುತ್ತಿರುವ ಎಸ್‌ಐಟಿ ತನಿಖೆಯ ಕುರಿತು ಮಾತನಾಡಿದ ಅವರು, “ನನಗೆ ತನಿಖಾ ಸಂಸ್ಥೆಗಳ ಮೇಲೆ ಸಂಪೂರ್ಣ ವಿಶ್ವಾಸವಿದೆ. ಸತ್ಯ ಏನೆಂಬುದು ಶೀಘ್ರದಲ್ಲೇ ಜಗತ್ತಿನ ಮುಂದೆ ಬರಲಿದೆ. ನಾನು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ಯಾವುದೇ ತನಿಖೆಗೂ ಹೆದರುವುದಿಲ್ಲ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ದೇಣಿಗೆ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಜನರನ್ನು ಆರೋಪಿಗಳೆಂದು ಹೆಸರಿಸಿ ಬಂಧಿಸಲಾಗಿದೆ. ಆದರೆ, ಆರೋಪಿಗಳ ಪಟ್ಟಿಯಲ್ಲಿ ಚಂಪತ್ ರಾಯ್ ಅವರ ಹೆಸರನ್ನು ಏಕೆ ಸೇರಿಸಿಲ್ಲ? ಎಂದು ವಿರೋಧ ಪಕ್ಷಗಳು ಪ್ರಶ್ನಿಸಿದ್ದು, ಅವರ ಬಂಧನಕ್ಕೂ ಒತ್ತಾಯಿಸಿವೆ.

ಇದನ್ನೂ ಓದಿ: Ram Mandir Temple Donation Row: ಚಂಪತ್ ರಾಯ್ ರಾಜೀನಾಮೆ ಅಂಗೀಕಾರ; ರಾಮ ಮಂದಿರ ಟ್ರಸ್ಟ್‌ನ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಮೋಹನ್‌ ನೇಮಕ

ಚಂಪತ್ ರಾಯ್ ರಾಜೀನಾಮೆ ಅಂಗೀಕಾರ:

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸೋಮವಾರ ನಡೆಸಿದ ತುರ್ತು ಉನ್ನತ ಮಟ್ಟದ ಸಭೆಯಲ್ಲಿ ಚಂಪತ್ ರಾಯ್ ಅವರ ರಾಜೀನಾಮೆಯನ್ನು ಅಧಿಕೃತವಾಗಿ ಅಂಗೀಕರಿಸಿದ ಕೇವಲ 24 ಗಂಟೆಗಳ ಒಳಗೆ ಅವರ ಈ ಮೊದಲ ಅಧಿಕೃತ ಹೇಳಿಕೆ ಹೊರಬಂದಿದೆ. ಚಂಪತ್ ರಾಯ್ ಅವರೊಂದಿಗೆ ಮತ್ತೊಬ್ಬ ಟ್ರಸ್ಟಿ ಅನಿಲ್ ಮಿಶ್ರಾ ಕೂಡ ಎಸ್‌ಐಟಿಯ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾದ ಅಂಶಗಳ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಮ ಮಂದಿರ ಟ್ರಸ್ಟ್ ಕೃಷ್ಣ ಮೋಹನ್ ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದು, ಮಂದಿರದ ಸಂಕೀರ್ಣವನ್ನು ನಿರ್ವಹಿಸುವ ವಿಧಾನದಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಟ್ರಸ್ಟ್‌ನ ಮುಂದಿನ ಸಭೆಯು ಜುಲೈ 22ರಂದು ನಿಗದಿಯಾಗಿದ್ದು, ಅಷ್ಟರೊಳಗೆ ಸಂಪೂರ್ಣ ಹಣಕಾಸಿನ ಹರಿವಿನ ವಿವರಗಳನ್ನು ಒಳಗೊಂಡ ಅಂತಿಮ ವರದಿಯನ್ನು ಎಸ್​ಐಟಿ ಸಲ್ಲಿಸಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *