ರಾಯಚೂರು, ಚಿತ್ರದುರ್ಗದಲ್ಲಿ ಮತ್ತೆ ಬೀದಿನಾಯಿಗಳ ದಾಳಿ: 4 ವರ್ಷದ ಬಾಲಕನ ಸ್ಥಿತಿ ಗಂಭೀರ, ನಾಲ್ವರು ಮಕ್ಕಳಿಗೆ ಗಾಯ – Kannada News | Stray Dog Attacks Spark Panic in Karnataka: 4 Year Old Critical in Raichur, Four Children Injured in Chitradurga

ಬೀದಿ ನಾಯಿಗಳು ಹಾಗೂ ಬಲಚಿತ್ರದಲ್ಲಿ ಗಾಯಾಳು ಬಾಲಕ ಗೋಪಾಲ್Image Credit source: tv9

ರಾಯಚೂರು, ಚಿತ್ರದುರ್ಗ, ಜುಲೈ 21: ರಾಯಚೂರು (Raichur) ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಮತ್ತೆ ಆತಂಕ ಮೂಡಿಸಿದೆ. ಕೆಲ ದಿನ ಹಿಂದಷ್ಟೇ ಬೀದಿನಾಯಿಗಳ ದಾಳಿಯಿಂದ ಒಂದೂವರೆ ವರ್ಷದ ಬಾಲಕಿ ಮೃತಪಟ್ಟಿದ್ದ ಬೆನ್ನಲ್ಲೇ, ಇದೀಗ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆದಿದೆ. ರಾಯಚೂರು ಹೊರವಲಯದ ಮಲಿಯಾಬಾರ್ ಪ್ರದೇಶದಲ್ಲಿ ಸೋಮವಾರ ಮನೆ ಸಮೀಪ ಆಟವಾಡುತ್ತಿದ್ದ ಗೋಪಾಲ್ ಎಂಬ ಬಾಲಕನ ಮೇಲೆ ಬೀದಿನಾಯಿಗಳು ಏಕಾಏಕಿ ಎರಗಿವೆ. ದಾಳಿಯಲ್ಲಿ ಬಾಲಕನ ತಲೆಗೆ ಗಂಭೀರ ಗಾಯಗಳಾಗಿದ್ದು, ತಲೆಯ ಚರ್ಮಕ್ಕೆ ತೀವ್ರ ಹಾನಿಯಾಗಿದೆ.

ಬೀದಿ ನಾಯಿ ದಾಳಿಗೆ ಬಾಲಕನ ಸ್ಥಿತಿ ಗಂಭೀರ

ಗಾಯಾಳು ಬಾಲಕನಿಗೆ ರಾಯಚೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಬಳಿಕ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿನಾಯಿಗಳನ್ನು ತಕ್ಷಣ ಸೆರೆಹಿಡಿಯುವಂತೆ ಆಗ್ರಹಿಸಿದ್ದಾರೆ.

ಚಿತ್ರದುರ್ಗದಲ್ಲಿ ನಾಲ್ವರು ಮಕ್ಕಳ ಮೇಲೆ ಬೀದಿ ನಾಯಿ ದಾಳಿ

ಇತ್ತ ಚಿತ್ರದುರ್ಗ ನಗರದಲ್ಲೂ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಒಂದೇ ದಿನ ನಾಲ್ವರು ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿವೆ. ಚೇಳಗುಡ್ಡ ಹಾಗೂ ನೆಹರುನಗರ ಬಡಾವಣೆಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಐದರಿಂದ ಆರು ವರ್ಷದೊಳಗಿನ ಮಕ್ಕಳು ಗಾಯಗೊಂಡಿದ್ದಾರೆ. ಆಲೀನಾ, ಆದಿಲ್, ಮನ್ವಿತ್ ಸೇರಿದಂತೆ ನಾಲ್ವರು ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಆಟವಾಡುತ್ತಿದ್ದ ಮಕ್ಕಳ ಮೇಲೆ ಎರಗಿದ ಬೀದಿ ನಾಯಿಗಳು

ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ನಗರಸಭೆ ಮತ್ತು ಜಿಲ್ಲಾಡಳಿತ ಬೀದಿನಾಯಿ ಹಾವಳಿ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೆ, ಜಿಲ್ಲಾಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಅಗತ್ಯ ಇಂಜೆಕ್ಷನ್ ಲಭ್ಯವಿರಲಿಲ್ಲ. ಹೊರಗಿನಿಂದ ಖರೀದಿಸಿ ತರಬೇಕಾಯಿತು ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾಯಿ ಕಡಿತ ನಿರ್ಲಕ್ಷಿಸಲು ಸಾಧ್ಯವಿಲ್ಲ, ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಖಡಕ್ ಆದೇಶ

ರಾಯಚೂರು ಮತ್ತು ಚಿತ್ರದುರ್ಗದ ಈ ಎರಡು ಘಟನೆಗಳು ರಾಜ್ಯದಲ್ಲಿ ಬೀದಿನಾಯಿಗಳ ನಿಯಂತ್ರಣ ಕುರಿತು ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಮಕ್ಕಳ ಸುರಕ್ಷತೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ: ಭೀಮೇಶ್ ಪೂಜಾರ್ ಹಾಗೂ ಬಸವರಾಜ ಮುದನೂರ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *