Headlines

ರೈತರ ಹೆಸರಲ್ಲಿ ಕೋಟಿ ಕೋಟಿ ಸಾಲದ ಗೋಲ್‌ಮಾಲ್; ಕಾಳಂಗಿ ಸಹಕಾರಿ ಬ್ಯಾಂಕ್‌ಗೆ ಷೇರುದಾರರ ಮುತ್ತಿಗೆ! – Kannada News | Sirsi Bank Fraud: Farmers Protest Against Kalangi Co operative Bank Over Crores of Loan Scam

ಕಾಳಂಗಿ ಸಹಕಾರಿ ಬ್ಯಾಂಕ್‌ಗೆ ಷೇರುದಾರರ ಮುತ್ತಿಗೆ!

ಶಿರಸಿ, ಮೇ 16: ಗ್ರಾಮೀಣ ರೈತರ ಆರ್ಥಿಕ ಪ್ರಗತಿಗೆ ಬೆಂಬಲವಾಗಿ ನಿಲ್ಲಬೇಕಾದ ಸಹಕಾರಿ ಬ್ಯಾಂಕ್‌ ಒಂದರಲ್ಲಿ, ರೈತರ ಹೆಸರನ್ನೇ ಬಳಸಿಕೊಂಡು ಕೋಟ್ಯಂತರ ರೂಪಾಯಿ ಹಣ ದುರುಪಯೋಗಪಡಿಸಿಕೊಂಡಿರುವ ಆಘಾತಕಾರಿ ಹಗರಣ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ತಾಲೂಕಿನ ದಾಸನಕೊಪ್ಪದಲ್ಲಿ ಬೆಳಕಿಗೆ ಬಂದಿದೆ. ದಾಸನಕೊಪ್ಪದ ಕಾಳಂಗಿ ಸಹಕಾರಿ ಬ್ಯಾಂಕ್‌ನಲ್ಲಿ ಈ ಬೃಹತ್ ಗೋಲ್‌ಮಾಲ್ ನಡೆದಿದ್ದು, ವಂಚನೆಗೆ ಒಳಗಾದ ರೈತರು ಮತ್ತು ಷೇರುದಾರರು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.

ಮುಖ್ಯಾಂಶಗಳು

  • ಶಿರಸಿಯ ಕಾಳಂಗಿ ಸಹಕಾರಿ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂಪಾಯಿ ಸಾಲದ ಬೃಹತ್ ಗೋಲ್‌ಮಾಲ್.
  • ಅರವತ್ತಕ್ಕೂ ಹೆಚ್ಚು ರೈತರ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ಹಣ ಲೂಟಿ.
  • ಹಣ ಕಳೆದುಕೊಂಡ ಷೇರುದಾರರಿಂದ ಬ್ಯಾಂಕ್ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ಹಾಗೂ ಮುತ್ತಿಗೆ.

ಕೃಷಿ ಸಾಲದ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿ

ಕಾಳಂಗಿ ಸಹಕಾರಿ ಬ್ಯಾಂಕ್‌ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ರೈತರು ಸದಸ್ಯರಾಗಿದ್ದು, ತಮ್ಮ ಕೃಷಿ ಆದಾಯ ಹಾಗೂ ಠೇವಣಿಗಳನ್ನು ಇಲ್ಲಿ ಇಡುತ್ತಿದ್ದರು. ರೈತರು ಪ್ರತಿ ವರ್ಷ ಬೆಳೆ ಸಾಲ ಪಡೆದು, ಫಸಲು ಬಂದ ನಂತರ ಪ್ರಾಮಾಣಿಕವಾಗಿ ಮರುಪಾವತಿಸಿ ಕ್ಲಿಯರೆನ್ಸ್ ಸರ್ಟಿಫಿಕೇಟ್ (Clearance Certificate) ಪಡೆಯುತ್ತಿದ್ದರು. ಆದರೆ, ಇತ್ತೀಚೆಗೆ ಮತ್ತೆ ಸಾಲ ಪಡೆಯಲು ಹೋದ 60ಕ್ಕೂ ಹೆಚ್ಚು ರೈತರಿಗೆ ಬ್ಯಾಂಕ್ ಸಿಬ್ಬಂದಿ ನಿಮ್ಮ ಹಳೆಯ ಸಾಲ ಬಾಕಿ ಇದೆ ಎಂದು ಹೇಳಿ ಶಾಕ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಹಲವು ರೈತರಿಗೆ ಅವರು ಪಡೆದ ಸಾಲದ ದುಪ್ಪಟ್ಟು ಹಣ ಕಟ್ಟುವಂತೆ ನೋಟಿಸ್ ಜಾರಿಯಾಗಿದೆ.

ತನಿಖೆ ನಡೆಸಿದಾಗ, ರೈತರು ಸಾಲಕ್ಕಾಗಿ ನೀಡಿದ್ದ ದಾಖಲೆಗಳನ್ನು ಬಳಸಿ ಅವರ ಖಾತೆಯಿಂದ ಕೋಟ್ಯಂತರ ರೂಪಾಯಿಗಳನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ (RTGS) ಮಾಡಿ ಡ್ರಾ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರೊಂದಿಗೆ ಬ್ಯಾಂಕ್‌ಗೆ ಸೇರಿದ 69 ಲಕ್ಷ ರೂಪಾಯಿ ಹಣವನ್ನು ಹಾನಗಲ್ ಮೂಲದ ವ್ಯಕ್ತಿಯೊಬ್ಬನಿಗೆ ಬಡ್ಡಿ ವ್ಯವಹಾರಕ್ಕಾಗಿ ವರ್ಗಾಯಿಸಲಾಗಿದೆ ಎಂದು ಷೇರುದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಠೇವಣಿ ಹಣವೂ ಮಾಯ; ಆಡಳಿತ ಮಂಡಳಿ ವಿರುದ್ಧ ಆಕ್ರೋಶ

ಇನ್ನೊಂದೆಡೆ, ಬ್ಯಾಂಕ್‌ನಲ್ಲಿ ನಡೆದ ಹಗರಣದಿಂದ ಆತಂಕಗೊಂಡ ಗ್ರಾಹಕರು ತಾವು ಇಟ್ಟಿದ್ದ ಲಕ್ಷಾಂತರ ರೂಪಾಯಿ ಠೇವಣಿ ಹಣವನ್ನು ಹಿಂಪಡೆಯಲು ಹೋದರೆ ಬ್ಯಾಂಕ್‌ನಲ್ಲಿ ಹಣವೇ ಇಲ್ಲ ಎನ್ನುವ ಬೇಜವಾಬ್ದಾರಿಯ ಉತ್ತರ ಸಿಗುತ್ತಿದೆ. ಬ್ಯಾಂಕ್ ಕಾರ್ಯದರ್ಶಿ ಸುನೀಲ್ ಬಸವರಾಜ್ ಗೌಡ ನಕಲಿ ದಾಖಲೆ ಸೃಷ್ಟಿಸಿ ಕನಿಷ್ಠ 25 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದರೆ ಆಡಳಿತ ಮಂಡಳಿಯ 12 ಜನ ಕಮಿಟಿ ಸದಸ್ಯರ ಅನುಮತಿ ಇಲ್ಲದೆ ಇಷ್ಟೊಂದು ದೊಡ್ಡ ಮಟ್ಟದ ಸಾಲ ಮಂಜೂರಾಗಲು ಸಾಧ್ಯವಿಲ್ಲ ಎನ್ನುವುದು ಸಂತ್ರಸ್ತರ ವಾದವಾಗಿದೆ.

ತನಿಖೆಯ ಭರವಸೆ ನೀಡಿದ ಅಧಿಕಾರಿಗಳು

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಸಹಕಾರಿ ಇಲಾಖೆಯ ಉಪ ನಿಬಂಧಕರಾದ ತೇಜಸ್ವಿನಿ, ಕಾರ್ಯದರ್ಶಿ ಹಣ ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಜಿಲ್ಲಾ ಸಹಕಾರಿ ಸಂಘಗಳ ಜಂಟಿ ನಿಬಂಧಕರು ತನಿಖೆ ನಡೆಸಿ ವರದಿ ಬಂದ ನಂತರ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.

ಸದ್ಯಕ್ಕೆ ವಂಚನೆ ಮಾಡಿದವರ ವಿರುದ್ಧ ಯಾವುದೇ ಕಠಿಣ ಕ್ರಮ ಜರುಗದ ಹಿನ್ನೆಲೆಯಲ್ಲಿ ರೈತರು ಬ್ಯಾಂಕ್ ಮುಂದೆ ಧರಣಿ ಮುಂದುವರಿಸಿದ್ದಾರೆ. ರೈತರು ಬೆವರು ಹರಿಸಿ ಕೂಡಿಟ್ಟ ಹಣ ಬ್ಯಾಂಕ್ ಅಧಿಕಾರಿಗಳ ದುರಾಶೆಯಿಂದ ಮಾಯವಾಗಿದ್ದು, ಅನ್ನದಾತ ಕಂಗೆಟ್ಟು ನ್ಯಾಯಕ್ಕಾಗಿ ಬೀದಿಗೆ ಬೀಳುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *