ಬೆಂಗಳೂರು, ಫೆಬ್ರವರಿ 17: ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈರತಿ ಬಸವರಾಜ್ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆ ಮುಂದುವರಿದಿದೆ. ಪ್ರಕರಣದ ಹಿಂದಿನ ಪಿತೂರಿ ಹಾಗೂ ವೈರತ್ವಕ್ಕೆ ಕಾರಣವಾದ ವಿಡಿಯೋ TV9ಗೆ ಲಭಿಸಿದ್ದು, ಮೂಲಗಳ ಪ್ರಕಾರ ಬಿಕ್ಲು ಶಿವ ಮತ್ತು ಜಗ್ಗ ಈ ಹಿಂದೆ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಮಲಯಾಳಿ ಅಜಿತ್ನ ಬಂಟ ಆಟೋ ಜೈ, ಜಗ್ಗ ಮತ್ತು ಶಿವನ ನಡುವೆ ವೈಮನಸ್ಸು ಮೂಡಿಸಲು ಸಂಚು ರೂಪಿಸಿದ್ದ. ಡಾನ್ ಪದದ ಕುರಿತು ನಡೆದ ಸಣ್ಣ ಗಲಾಟೆಯನ್ನು ದೊಡ್ಡದು ಮಾಡಿ, ಜಗ್ಗನ ವಿರುದ್ಧ ಬಿಕ್ಲು ಶಿವ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವಂತೆ ಮಾಡಿದ್ದ. ನಂತರ ಆಟೋ ಜೈ, ಕೊಲೆ ಪ್ರಕರಣದ ಎ2 ಆರೋಪಿ ಕಿರಣ್ಗೆ (ಜಗ್ಗನ ಭಾವ) ಕರೆ ಮಾಡಿ, ಬಿಕ್ಲು ಶಿವ ಜಗ್ಗನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾನೆ ಎಂದು ಪ್ರಚೋದಿಸಿದ್ದ. ಇದರಿಂದ ಕೆರಳಿದ ಕಿರಣ್ ಕೆ.ಆರ್. ಪುರಂ ಮತ್ತು ಅಮೃತಹಳ್ಳಿ ಹುಡುಗರ ತಂಡವನ್ನು ಕಟ್ಟಿಕೊಂಡು ಜುಲೈ 15ರಂದು ಬಿಕ್ಲು ಶಿವನನ್ನು ಆತನ ಮನೆಯ ಬಳಿಯೇ ಕೊಲೆ ಮಾಡಿದ್ದ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
