ಚಿಕ್ಕಮಗಳೂರು/ಶಿವಮೊಗ್ಗ, ಜುಲೈ 12: ಈ ವರ್ಷದ ಮುಂಗಾರು ಮಳೆ ಕೊರತೆಯಿಂದ ಕರ್ನಾಟಕದಲ್ಲಿ ನೀರಿನ ಅಭಾವ ಹೆಚ್ಚಿದೆ. ಅದರಲ್ಲೂ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲಾಡಳಿತವು ಲಕ್ಕವಳ್ಳಿ ಭದ್ರಾ ಜಲಾಶಯದ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಮೀಸಲಿಡಲು ನಿರ್ಧರಿಸಿದೆ. ಜಲಸಂಪನ್ಮೂಲ ಇಲಾಖೆ ಹಾಗೂ ಮೈಸೂರು ಪ್ರಾದೇಶಿಕ ಆಯುಕ್ತರ ನಿರ್ದೇಶನದ ಮೇರೆಗೆ ಚಿಕ್ಕಮಗಳುರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವಂತೆ ಆದೇಶ ಹೊರಡಿಸಿದ್ದಾರೆ.ಈ ಕ್ರಮದಿಂದ ನೀರಾವರಿಯನ್ನು ಅವಲಂಬಿಸಿರುವ ರೈತರಲ್ಲಿ ತೀವ್ರ ಆತಂಕ ಉಂಟಾಗಿದೆ.
ಡಿಸಿ ಆದೇಶದಲ್ಲಿ ಏನಿದೆ?
ಈ ನಿರ್ಧಾರದಿಂದ ನೀರಾವರಿಗೆ ನೀರು ಬಿಡುಗಡೆಗೆ ನಿರ್ಬಂಧ ಉಂಟಾಗಲಿದ್ದು, ರೈತರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಬಹುದು. ಆದರೆ ಬರ ಪರಿಸ್ಥಿತಿ ಮುಂದುವರಿದರೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಈಗಿರುವ ನೀರನ್ನು ಸಂರಕ್ಷಿಸುವುದು ಅನಿವಾರ್ಯವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಒಣಹವಾಮಾನ ಮುಂದುವರಿದರೆ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಅನಿವಾರ್ಯವಾಗಿದೆ ಎಂದೂ ಡಿಸಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಕಾಲುವೆಗಳ ಮೂಲಕ ನೀರಾವರಿ ಪಡೆಯುವ ರೈತರಿಗೆ ಇದರಿಂದ ತೊಂದರೆಯಾಗಬಹುದು ಎಂಬುದನ್ನು ಒಪ್ಪಿಕೊಂಡಿದ್ದರೂ, ಲಭ್ಯವಿರುವ ನೀರನ್ನು ಸಂರಕ್ಷಿಸುವುದು ಅತ್ಯಗತ್ಯ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಕರಾವಳಿ, ಮಲೆನಾಡಿನಲ್ಲಿ ವರುಣನ ಅಬ್ಬರಕ್ಕೆ ಬ್ರೇಕ್! ಉತ್ತರ ಕರ್ನಾಟಕದಲ್ಲಿ ಒಣ ಹವೆಯ ಮುನ್ಸೂಚನೆ
ಜಲಾಶಯದಲ್ಲಿರೋದು ಕೇವಲ 31.257 ಟಿಎಂಸಿ ನೀರು!
186 ಅಡಿ ಪೂರ್ಣ ಜಲಮಟ್ಟ ಹಾಗೂ 71.535 ಟಿಎಂಸಿ ಒಟ್ಟು ಸಂಗ್ರಹ ಸಾಮರ್ಥ್ಯ ಹೊಂದಿರುವ ಭದ್ರಾ ಜಲಾಶಯದಲ್ಲಿ ಜುಲೈ 10ರ ವೇಳೆಗೆ ಕೇವಲ 146 ಅಡಿ ನೀರಿನ ಮಟ್ಟವಿದ್ದು, 31.257 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 173.7 ಅಡಿಗೆ ತಲುಪಿದ್ದು, 56.794 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ವರ್ಷದ ಸ್ಥಿತಿಗೆ ಹೋಲಿಸಿದರೆ ಇದು ಭಾರೀ ಕುಸಿತವಾಗಿದೆ. ಪ್ರಸ್ತುತ ಜಲಾಶಯಕ್ಕೆ 13,123 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೂ, ನೀರಿನ ಸಂರಕ್ಷಣೆಯ ಉದ್ದೇಶದಿಂದ ಹೊರಹರಿವನ್ನು ಕೇವಲ 218 ಕ್ಯೂಸೆಕ್ಗೆ ಮಿತಿಗೊಳಿಸಲಾಗಿದೆ. ಇದರಲ್ಲಿ ಎಡದಂಡೆ ಕಾಲುವೆಗೆ 50 ಕ್ಯೂಸೆಕ್, ಬಲದಂಡೆ ಕಾಲುವೆಗೆ 10 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಸುಮಾರು 6 ಕ್ಯೂಸೆಕ್ ನೀರು ಆವಿಯಾಗುತ್ತಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.