
ಗದಗ, ಮಾರ್ಚ್ 12: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆಗಾಗಿ ಅಡಿಪಾಯ ತೆಗೆಯುವಾಗ ಸುಮಾರು 470 ಗ್ರಾಂ ಚಿನ್ನಾಭರಣಗಳು ಪತ್ತೆಯಾಗಿದ್ದವು. ಸಿಕ್ಕ ನಿಧಿಯನ್ನು ಪ್ರಜ್ವಲ್ ರಿತ್ತಿ ಕುಟುಂಬ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿತ್ತು. ಆ ಬಳಿಕ ಬಹಳ ಬೆಳವಣಿಗೆಗಳು ನಡೆದಿದ್ದವು. ಈ ನಡುವೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅಂದು ಸಿಕ್ಕಿದ್ದ ಬಂಗಾರದ ಬೆಲೆ ಇಂದಿಗೆ ಸುಮಾರು 80 ಲಕ್ಷ ರೂಪಾಯಿಗಳಾಗಿದ್ದು, ಆ್ಯಂಟಿಕ್ ಮೌಲ್ಯ ಸುಮಾರು 8 ಕೋಟಿ ಎಂದು ತಜ್ಞರು ಹೇಳಿದ್ದಾರೆ. ಈ ಬೆನ್ನಲ್ಲೇ ಪ್ರಜ್ವಲ್ ರಿತ್ತಿ ಕುಟುಂಬ ಹೊಸ ಬೇಡಿಕೆ ಮುಂದಿಟ್ಟಿದ್ದು, 8 ಕೋಟಿ ಮೊತ್ತಕ್ಕೆ ಐದರಲ್ಲಿ ಒಂದು ಪಾಲು ತಮಗೆ ಬೇಕು ಎಂದಿದೆ.
ಪ್ರಜ್ವಲ್ ರಿತ್ತಿ ಕುಟುಂಬ ಹೇಳಿದ್ದೇನು?
ಸಿಕ್ಕ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದೇವೆ. ಹೀಗಾಗಿ ತಜ್ಞರು ಹೇಳಿರುವ ಸಿಕ್ಕ ಬಂಗಾರದ ಆ್ಯಂಟಿಕ್ ಮೌಲ್ಯದಲ್ಲಿ ತಮಗೆ ಐದರಲ್ಲಿ ಒಂದು ಭಾಗ ಪಾಲು ನೀಡಬೇಕು. ಸರ್ಕಾರ ಕೂಡ ನಮಗೆ ಪ್ರಾಮಾನಿಕವಾಗಿ ಪರಿಹಾರ ನೀಡಬೇಕು. ಈಗಿನ ಬೆಲೆಯನ್ನು ಕೊಡುತ್ತೇವೆ ಎಂದರೆ ನಾವು ಅದನ್ನು ಒಪ್ಪಲ್ಲ. ಸಚಿವ ಎಚ್. ಕೆ. ಪಾಟೀಲ್, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ್ ನಮಗೆ ಭರವಸೆ ನೀಡಿದ್ದರು. ಹೀಗಾಗಿ ಅವರ ಮೇಲೆ ನಮಗೆ ನಂಬಿಕೆ ಇದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ಯಾರ ಕಾಲದ್ದು ಗೊತ್ತಾ? ಇದರ ಬೆಲೆ ಕೇಳಿದ್ರೆ ಶಾಕ್ ಆಗುವುದು ಗ್ಯಾರಂಟಿ!
ಪುರಾತತ್ವ ತಜ್ಞರು ಏನು ಹೇಳಿದ್ದರು?
ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿಯ ಇಂದಿನ ವ್ಯಾಲ್ಯೂ ಸುಮಾರು 80 ಲಕ್ಷ ರೂ., ಆ್ಯಂಟಿಕ್ ಮೌಲ್ಯ ಹತ್ತು ಪಟ್ಟು ಹಾಕಿದ್ರೆ ಬಹಳ ಆಗುತ್ತೆ ಎಂದು ಗದಗದಲ್ಲಿ ಪುರಾತತ್ವ ತಜ್ಞೆ ಚೂಡಾಮಣಿ ಹೇಳಿದ್ದರು. ಲಕ್ಕುಂಡಿಯ ದೇವರಿಗೆ ಹಾಕುವ ಆಭರಣದ ಮೌಲ್ಯ ಹೇಳೋಕೆ ಆಗಲ್ಲ. ಇಲ್ಲಿಯ ಆಭರಣ ಬಹಳ ಅತ್ಯಮೂಲ್ಯವಾಗಿದ್ದು, ಸೂಕ್ಷ್ಮ ಕೆತ್ತನೆ ಮತ್ತು ಕುಸುರಿಯಿಂದ ಕೂಡಿವೆ. ಹರಳು ಮಾಣಿಕ್ಯ, ನೀಲಮಣಿ, ಪಚ್ಚೆ ಸೇರಿ ಹಲವಾರು ಅತ್ಯಮೂಲ್ಯವಾಗಿವೆ. ಕಿವಿಗೆ ಧರಿಸುವ ನಾಗಹೆಡೆಯ ಆಭರಣ ಸೂಕ್ಷ್ಮ ಕೆತ್ತನೆ ಹೊಂದಿದೆ. ಈ ರೀತಿ ಆಭರಣಗಳನ್ನು ಮಾಡಲು ಬೇರೆಯವರಿಂದ ಸಾಧ್ಯವಿಲ್ಲ. ಆದರೆ ನೂರಾರು ವರ್ಷ ಭೂಮಿಯಲ್ಲಿ ಸಿಲುಕಿ ಅವುಗಳು ಆಕಾರ ಕಳೆದುಕೊಂಡಿವೆ ಎಂದು ತಿಳಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.