ಡಿಸಿಸಿ ಬ್ಯಾಂಕ್ ಶಾಖೆImage Credit source: tv9 kannada
ಬಾಗಲಕೋಟೆ, ಜುಲೈ 29: ಜಿಲ್ಲೆಯ ಡಿಸಿಸಿ ಬ್ಯಾಂಕ್ನಲ್ಲಿ (DCC Bank) ಈ ಹಿಂದೆ 12 ಕೋಟಿರೂ ಬೃಹತ್ ಹಗರಣವೊಂದು ನಡೆದಿತ್ತು. ಇದೀಗ ಮತ್ತೊಂದು ಗೋಲಮಾಲ್ ಬೆಳಕಿಗೆ ಬಂದಿದೆ. ಬ್ಯಾಂಕ್ ಮ್ಯಾನೇಜರ್ ಬರೋಬ್ಬರಿ 65 ಲಕ್ಷ ರೂ ಎಗರಿಸಿ ಪರಾರಿ ಆಗಿರುವ ಘಟನೆ ಬಾಗಲಕೋಟೆ (bagalkot) ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದಲ್ಲಿ ನಡೆದಿದೆ. ಬ್ಯಾಂಕ್ ಮ್ಯಾನೇಜರ್ ಗುರುರಾಜ್ ಶಿವರಾಜ್ ವಿರುದ್ಧ ಲೋಕಾಪುರ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಡೆದಿದ್ದೇನು?
ಲೋಕಾಪುರ ಪಟ್ಟಣದಲ್ಲಿರುವ ಡಿಸಿಸಿ ಬ್ಯಾಂಕ್ನಲ್ಲಿ ಕಳೆದ 12 ವರ್ಷಗಳಿಂದ ಬ್ರ್ಯಾಂಚ್ ಮ್ಯಾನೇಜರ್ ಆಗಿ ಗುರುರಾಜ್ ಶಿವರಾಜ ಕೆಲಸ ಮಾಡುತ್ತಿದ್ದರು. ಮಾರ್ಚ್ 31 ರಂದು ಬ್ಯಾಂಕ್ಗೆ ಸೇರಿದ ಎಸ್ಬಿಐ ಖಾತೆಯಿಂದ ನೇರವಾಗಿ ತಮ್ಮ ಐಡಿಎಫ್ಸಿ ವೈಯಕ್ತಿಕ ಖಾತೆಗೆ 65 ಲಕ್ಷ ರೂ ವರ್ಗಾಯಿಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ.
ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡ ಗುರುರಾಜ್
ಮ್ಯಾನೇಜರ್ ಗುರುರಾಜ್ ದೀರ್ಘ ರಜೆಯ ಮೇಲೆ ತೆರಳಿದ್ದಾಗ, ಆ ಹುದ್ದೆಗೆ ಮತ್ತೊಬ್ಬ ಮ್ಯಾನೇಜರ್ ಅನ್ನು ನೇಮಕ ಮಾಡಲಾಗಿದ್ದು, ಆಗ ವಂಚನೆ ಬೆಳಕಿಗೆ ಬಂದಿದೆ. ಇನ್ನು ಇತ್ತ ಕಳೆದ ಹಲವು ವಾರಗಳಿಂದ ಬ್ಯಾಂಕಿಗೆ ಬಾರದೆ ಗುರುರಾಜ್ ಗೈರಾಗಿದ್ದು, ಕಳೆದ ನಾಲ್ಕು ದಿನಗಳಿಂದ ತಮ್ಮ ಮೊಬೈಲ್ ಫೋನ್ ಅನ್ನು ಸಹ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ಹೆಚ್ಚಿನ ಬಡ್ಡಿ ಆಸೆ ತೋರಿಸಿ ಕೋಟಿ ಕೋಟಿ ವಂಚನೆ: ಮಹಿಳಾ ಸಂಘದ ಹೆಸರಲ್ಲಿ ಲೂಟಿ ಹೊಡೆದ ಮಹಿಳೆಯರು
ಇನ್ನು ಈ ಸಂಬಂಧ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಮ್ಯಾನೇಜರ್ ಗುರುರಾಜ್ ಶಿವರಾಜ ಬಂಧನಕ್ಕೆ ಲೋಕಾಪುರ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಬೇಲೂರು ಚನ್ನಕೇಶವಸ್ವಾಮಿ ದೇಗಲದ ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿ ಸಿಕ್ಕಿಬಿದ್ದ ಆಸಾಮಿ
ಇದೇ ಡಿಸಿಸಿ ಬ್ಯಾಂಕ್ನ ಅಮೀನಗಢ ಹಾಗೂ ಕಮತಗಿ ಶಾಖೆಗಳಲ್ಲಿ ಈ ಹಿಂದೆ ಪ್ಯೂನ್ನಿಂದ 12 ಕೋಟಿ ರೂ ಬೃಹತ್ ಹಗರಣ ನಡೆದಿತ್ತು. ಇದೀಗ ಮತ್ತೆ ಲೋಕಾಪುರ ಶಾಖೆಯಲ್ಲಿ ಮ್ಯಾನೇಜರ್ನಿಂದಲೇ ಇಂತಹ ವಂಚನೆ ನಡೆದಿರುವುದು ಗ್ರಾಹಕರಲ್ಲಿ ಸದ್ಯ ಆತಂಕ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
