ವರ್ಕ್ ಫ್ರಮ್ ಹೋಮ್ ಆಮಿಷ: ಕೋಲಾರದಲ್ಲಿ ಊದುಬತ್ತಿ ಕಂಪನಿಯಿಂದ 10 ಕೋಟಿ ರೂ ವಂಚನೆ! – Kannada News | Shri Kalikadevi Enterprises 10 Crore Work From Home Packing Scam Exposed

ಕೋಲಾರ, ಜುಲೈ 20: ಮನೆಯಲ್ಲೇ ಕುಳಿತು ಬಿಡುವಿನ ವೇಳೆಯಲ್ಲಿ ಊದುಬತ್ತಿ ಹಾಗೂ ಕರ್ಪೂರ ಪ್ಯಾಕ್ ಮಾಡುವ ಕೆಲಸ (work from home) ಮತ್ತು ಆಕರ್ಷಕ ಸಂಬಳ ನೀಡುವುದಾಗಿ ನಂಬಿಸಿ, ಸಾರ್ವಜನಿಕರಿಂದ ಕೋಟ್ಯಂತರ ರೂ ಹೂಡಿಕೆ ಮಾಡಿಸಿಕೊಂಡಿದ್ದ ಕಂಪನಿಯೊಂದು ಇದೀಗ ವಂಚನೆ (fraud) ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಕೋಲಾರ ನಗರದ ಪಾಲಸಂದ್ರ ಬಡಾವಣೆಯ 4ನೇ ಕ್ರಾಸ್‌ನಲ್ಲಿ ಕಳೆದ ಒಂದು ವರ್ಷದ ಹಿಂದೆ ಆರಂಭವಾಗಿದ್ದ ‘ಶ್ರೀ ಕಾಳಿಕಾದೇವಿ ಎಂಟರ್‌ಪ್ರೈಸಸ್’ ಎಂಬ ಸಂಸ್ಥೆಯೇ ವಂಚನೆ ಎಸಗಿರುವ ಕಂಪನಿ.

ನಡೆದಿದ್ದೇನು?

ಈ ಕಂಪನಿಯು ವಿವಿಧ ಬ್ರಾಂಡ್‌ಗಳ ಊದುಬತ್ತಿ, ಕರ್ಪೂರ, ಪೇಪರ್ ಪ್ಲೇಟ್ ಹಾಗೂ ಪೇಪರ್ ಕಪ್‌ಗಳಂತಹ ಸಲಕರಣೆಗಳನ್ನು ಪ್ಯಾಕ್ ಮಾಡಲು ನೀಡುವುದಾಗಿ ಹೇಳಿ, ಆ ವಸ್ತುಗಳ ಸುರಕ್ಷತಾ ಠೇವಣಿ (ಸೆಕ್ಯೂರಿಟಿ ಡೆಪಾಸಿಟ್) ಹೆಸರಿನಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರೂ ಹಣವನ್ನು ಪಡೆದುಕೊಂಡಿತ್ತು. ಒಂದು ಲಕ್ಷ ರೂ ಹೂಡಿಕೆ ಮಾಡಿದರೆ ಇಂತಿಷ್ಟು ಸಾವಿರ ಸಂಬಳ ನೀಡುವುದಾಗಿ ಆಮಿಷ ಒಡ್ಡಲಾಗಿತ್ತು.

ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೊ ನಂಬಿ 6.88 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ! ನಕಲಿ ಹೂಡಿಕೆ ಜಾಹೀರಾತುಗಳ ಬಗ್ಗೆ ಎಚ್ಚರ

ಇದನ್ನು ನಂಬಿದ ಕೋಲಾರ ಜಿಲ್ಲೆಯ ಜನರು ಒಬ್ಬೊಬ್ಬರಾಗಿ 1 ಲಕ್ಷದಿಂದ ಹಿಡಿದು 30 ಲಕ್ಷ ರೂ.ವರೆಗೆ ಬಂಡವಾಳ ಹೂಡಿದ್ದಾರೆ. ಕೋಲಾರ ಮಾತ್ರವಲ್ಲದೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ, ಮಾಲೂರು ಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶಾಖೆಗಳನ್ನು ತೆರೆದು, ಸುಮಾರು 2 ರಿಂದ 3 ಸಾವಿರ ಜನರಿಂದ ಅಂದಾಜು 10 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸಂಗ್ರಹಿಸಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಜನರು ಆಕ್ರೋಶ 

ಆರಂಭದ ಒಂದು ವರ್ಷದ ಅವಧಿಯಲ್ಲಿ ಹೂಡಿಕೆಗೆ ತಕ್ಕಂತೆ ಕಂಪನಿಯು ಸಂಬಳವನ್ನು ನೀಡುತ್ತಾ ಬಂದಿತ್ತಾದರೂ, ಕಳೆದ ಎರಡು ತಿಂಗಳಿಂದ ವೇತನ ನೀಡದೆ ವಿಳಂಬ ಮಾಡಿದೆ. ಇದರಿಂದ ಆತಂಕಗೊಂಡ ಹೂಡಿಕೆದಾರರು ಕಚೇರಿಗೆ ಬಂದು ವಿಚಾರಿಸಿದಾಗ ಸಿಬ್ಬಂದಿಯಿಂದ ಯಾವುದೇ ಸಮಂಜಸವಾದ ಉತ್ತರ ಸಿಕ್ಕಿಲ್ಲ. ಸದ್ಯ ಕಚೇರಿಯಲ್ಲಿ ಉತ್ತರಿಸುವವರಿಲ್ಲದೆ ಸಿಬ್ಬಂದಿ ನಾಪತ್ತೆಯಾಗಿದ್ದು, ಹಣ ಕಳೆದುಕೊಂಡ ನೂರಾರು ಅಮಾಯಕ ಜನರು ಕೈಯಲ್ಲಿ ಬಾಂಡ್ ಪೇಪರ್ ಹಿಡಿದುಕೊಂಡು ಕಚೇರಿ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ವಂಚನೆ: ಟಿವಿ9 ವರದಿ ಬಳಿಕ ಆರೋಪಿಗಳ ಬಂಧನ!

ಈ ನಡುವೆ, ಕಂಪನಿಯ ವ್ಯವಸ್ಥಾಪಕಿ ರಮ್ಯಾ ಎಂಬುವರು ಕೋಲಾರ ಎಸ್ಪಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಗ್ರಾಹಕರಿಂದ ಒಂದು ವಾರ ಕಾಲಾವಕಾಶ ಕೇಳಿದ್ದಾರೆ. ಸಾರ್ವಜನಿಕರಿಂದ ಪಡೆದ ಹಣವನ್ನು ಆದಷ್ಟು ಬೇಗ ವಾಪಸ್ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಂಡು ಬೀದಿಗೆ ಬಿದ್ದಿರುವ ಸಾರ್ವಜನಿಕರು ಸಪ್ಪೆಮೋರೆ ಹಾಕಿಕೊಂಡು ನಿಲ್ಲುವಂತಾಗಿದ್ದು, ಪೊಲೀಸ್ ಇಲಾಖೆಯು ತಕ್ಷಣವೇ ಮಧ್ಯಪ್ರವೇಶಿಸಿ ವಂಚಕರಿಗೆ ತಕ್ಕ ಪಾಠ ಕಲಿಸಬೇಕು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *