ಮಾದನಾಯಕನಹಳ್ಳಿ ಪೊಲೀಸ್ ಠಾಣೆImage Credit source: tv9 kannada
ನೆಲಮಂಗಲ, ಮೇ 06: ಆರೋಪಿ (Accused) ಓರ್ವ ವಿಚಾರಣೆ ವೇಳೆ ಲಾಕರ್ ಕೀ (Key) ನುಂಗಿ ಹೈಡ್ರಾಮಾ ಸೃಷ್ಟಿಸಿದ ಘಟನೆಯೊಂದು ಬೆಂಗಳೂರು ಉತ್ತರದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಬಳ್ಳಾರಿ ಮೂಲದ ಕಾರ್ತಿಕ್ ಅಲಿಯಾಸ್ ರಾಮು ಎಂಬಾತನೇ ಈ ವಿಚಿತ್ರ ಕೃತ್ಯ ಎಸಗಿದ ಆರೋಪಿ. ಕೀ ನುಂಗುವ ಮೂಲಕ ಪೊಲೀಸರಿಗೆ ಟೆನ್ಷನ್ ಕೊಟ್ಟಿದ್ದ. ಆದರೆ ಮಲದ ಮೂಲಕ ಕೀ ಹೊರಬಂದ ಬಳಿಕ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯಾಂಶಗಳು
- ಪೋಕ್ಸೋ ಕೇಸ್ ಭಯಕ್ಕೆ ಕೀ ನುಂಗಿದ ಯುವಕ
- 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋದ ಆರೋಪ
- ಏಪ್ರಿಲ್ 24ರಂದು ಪೊಲೀಸ್ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದ ಬಾಲಕಿ ಪೋಷಕರು
- ಮಲದ ಮೂಲಕ ಕೀ ಹೊರಬಂದ ಬಳಿಕ ನಿಟ್ಟುಸಿರು ಬಿಟ್ಟ ಪೊಲೀಸರು
ನಡೆದಿದ್ದೇನು?
ಏಪ್ರಿಲ್ 24ರಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಬಾಲಕಿ ಪೋಷಕರು ನಾಪತ್ತೆ ದೂರು ದಾಖಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋದ ಆರೋಪ ಹಿನ್ನೆಲೆ ಯುವಕ ಕಾರ್ತಿಕ್ ಅಲಿಯಾಸ್ ರಾಮು ನನ್ನು ಪೊಲೀಸರು ಠಾಣೆಗೆ ಕರೆತಂದಿದ್ದರು.
ಇದನ್ನೂ ಓದಿ: ಕುತೂಹಲಕ್ಕೆ ಹೋಗಿ ನೋಡಿದಾಗ ಎದುರಾಗಿದ್ದು ಶಾಕ್! ಬಾಲ್ಯ ವಿವಾಹ ತಡೆದ ಅಕ್ಕ ಪಡೆ
ಕಾರ್ತಿಕ್ ಅಲಿಯಾಸ್ ರಾಮು ನನ್ನು ಪತ್ತೆ ಹಚ್ಚಿ ಕರೆತಂದ ಪೊಲೀಸರು ಠಾಣೆಯಲ್ಲಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ಪೋಕ್ಸೋ ಕೇಸ್ ಭಯಕ್ಕೆ ಲಾಕರ್ ಕೀ ನುಂಗಿದ್ದಾನೆ. ಆ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಈ ಅನಿರೀಕ್ಷಿತ ಘಟನೆಯಿಂದ ಪೊಲೀಸ್ ಸಿಬ್ಬಂದಿ ಬೆಚ್ಚಿಬಿದ್ದರು.
10 ಕೆಜಿ ಬಾಳೆಹಣ್ಣು ತಿನ್ನಿಸಿದ ಪೊಲೀಸರು
ಘಟನೆ ನಡೆಯುತ್ತಿದ್ದಂತೆ ತಕ್ಷಣ ಆರೋಪಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ 3 ದಿನಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಆರೋಪಿಗೆ 10 ಕೆಜಿ ಬಾಳೆಹಣ್ಣು ತಿನ್ನಿಸಿ ಕೀ ಹೊರ ಬರುವ ಪ್ರಯತ್ನದಲ್ಲಿದ್ದರು. ಮೂರು ದಿನದ ನಂತರ ಮಲದ ಮೂಲಕ ಕೀ ಹೊರಬಂದ ಬಳಿಕ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.
ವರದಿ: ಮಂಜುನಾಥ್, ಟಿವಿ9, ನೆಲಮಂಗಲ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
