ವಿಜಯ್​ಗೆ ಇದು ಅನಾಯಾಸವಾಗಿ ಸಿಕ್ಕ ಗೆಲುವಲ್ಲ; 17 ವರ್ಷದ ಹಿಂದೆ ನೆಟ್ಟ ಬೀಜದ ಫಲ – Kannada News | Thalapathy Vijay’s TVK Triumphs in Tamil Nadu Election: From Fan Club to Political Power

ಚೆನ್ನೈ, ಮೇ 4: ಕಾಲಿವುಡ್ ಸೂಪರ್ ಸ್ಟಾರ್ ‘ದಳಪತಿ’ ವಿಜಯ್ ನೇತೃತ್ವದ ಟಿವಿಕೆ ಪಕ್ಷ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections) ಐತಿಹಾಸಿಕ ಗೆಲುವು ಸಾಧಿಸಿದೆ. ಕೇವಲ ಎರಡು ವರ್ಷದ ಹಿಂದೆ (2024ರ ಫೆಬ್ರುವರಿ) ಉದಯಗೊಂಡ ತಮಿಳಗ ವೆಟ್ರಿ ಕಳಗಂ (TVK- Tamilaga Vetri Kazhagam) ಪಕ್ಷ ಅಧಿಕಾರ ಗದ್ದುಗೆ ಹಿಡಿಯುವ ಹಂತಕ್ಕೆ ಜನಬೆಂಬಲ ಪಡೆಯುತ್ತದೆ ಎಂದು ಬಹಳ ಜನರು ನಿರೀಕ್ಷಿಸಿರಲಿಲ್ಲ. ಕಮಲ್ ಹಾಸನ್ ಸಾಕಷ್ಟು ಹರಸಾಹಸ ಮಾಡಿದರೂ ಅವರಿಗೆ ಸಿಕ್ಕ ಯಶಸ್ಸು ಬಹಳ ಅಲ್ಪ. ವಿಜಯ್ ಹೊಸ ಪಕ್ಷ ಕಟ್ಟಿದಾಗಲೂ ಅನೇಕರು ಅದೇ ವೈಫಲ್ಯ ನಿರೀಕ್ಷಿಸಿದ್ದರು. ಆದರೆ ಎಲ್ಲರ ಎಣಿಕೆ ಮೀರಿಸುವಂತೆ ಟಿವಿಕೆ ಪಕ್ಷ ಬಹುಮತದ ಹತ್ತಿರ ಹತ್ತಿರ ಹೋಗಿದೆ. ಆದರೆ, ಟಿವಿಕೆ ಪಕ್ಷ ಆರಂಭವಾಗಿ ಎರಡು ವರ್ಷವಾದರೂ, ವಿಜಯ್ ರಾಜಕೀಯದ ಬೀಜ ನೆಟ್ಟಿದ್ದು ಮಾತ್ರ 17 ವರ್ಷದ ಹಿಂದೆ.

2009ರಲ್ಲೇ ವಿಜಯ್ ನೆಟ್ಟಿದ್ದ ಬೀಜದ ಫಲಶೃತಿ ಇದಾ?

ತಮಿಳುನಾಡು ಚಿತ್ರರಂಗದಲ್ಲಿ ಇರುವ ಮಾಸ್ ಹೀರೋಗಳಲ್ಲಿ ಪ್ರಮುಖವಾದವರು ರಜನೀಕಾಂತ್, ವಿಜಯ್ ಮತ್ತು ಅಜಿತ್. ವಿಜಯ್ ತಮಗಿರುವ ಫ್ಯಾನ್ ಬಳಗವನ್ನು ಸಂಘಟನೆಯ ರೂಪದಲ್ಲಿ ಬಳಸಿಕೊಳ್ಳಲು 2009ರಲ್ಲಿ ವಿಜಯ್ ಮಕ್ಕಳ್ ಇಯಕ್ಕಮ್ ಸ್ಥಾಪಿಸಿದರು. ರಾಜ್ಯಾದ್ಯಂತ ವಿವಿಧೆಡೆ ತಮ್ಮ ಅಭಿಮಾನಿಗಳನ್ನು ಬಳಸಿಕೊಂಡು ವಿಪತ್ತು ಪರಿಹಾರ ಸೇವೆ, ಶಿಕ್ಷಣ ಮತ್ತಿತರ ಸೇವೆಗಳನ್ನು ಈ ಸಂಘಟನೆ ಮೂಲಕ ಮಾಡತೊಡಗಿದರು. ಪ್ರತೀ ಬೂತ್ ಮಟ್ಟದಲ್ಲಿ ವಿಜಯ್ ಕೆಲಸಗಳು ಜನರಿಗೆ ಗುರುತಾಗತೊಡಗಿದವು.

ಇದನ್ನೂ ಓದಿ: ಟಿವಿಕೆ ಭರವಸೆಗಳು: ಗೃಹಿಣಿಯರಿಗೆ 2,500 ರೂ, ವೃದ್ಧರಿಗೆ 3,000 ರೂ, ಉಚಿತ ಗ್ಯಾಸ್, ವಧುವಿಗೆ ಚಿನ್ನ ಇತ್ಯಾದಿ ಕೊಡುಗೆ

ಅವು ಅವರ ರಾಜಕೀಯದ ಬೀಜ ಮೊಳಕೆಯೊಡೆಯಲು ಆರಂಭವಾದ ವರ್ಷಗಳು. ನಂತರ ತಮ್ಮ ಸಿನಿಮಾಗಳಲ್ಲಿ ರಾಜಕೀಯ ವಿಚಾರಗಳನ್ನು ಸೇರಿಸಿ, ತಾನು ರಾಜಕೀಯಕ್ಕೆ ಕಾಲಿಡಬಹುದು ಎನ್ನುವ ಸುಳಿವನ್ನೂ ಕೊಡತೊಡಗಿದರು. ಫ್ಯಾನ್ ಮೀಟಿಂಗ್, ಚಾರಿಟಿ ಇವೆಂಟ್ ಹೀಗೆ ವಿವಿಧ ಕಾರ್ಯಕ್ರಮಗಳ ಮೂಲಕ ಅವರು ವಿದ್ಯಾರ್ಥಿಗಳು, ನಿರುದ್ಯೋಗಿಗಳ ಸಮಸ್ಯೆ, ಭ್ರಷ್ಟಾಚಾರ, ಆಡಳಿತ ಸಮಸ್ಯೆಗಳ ಬಗ್ಗೆ ಸ್ಪಂದಿಸತೊಡಗಿದರು. ಯುವಸಮುದಾಯಕ್ಕೆ ವಿಜಯ್ ಆಶಾಕಿರಣವಾಗಿ ಕಾಣಲು ಸಾಧ್ಯವಾಗಿದ್ದಿರಬಹುದು.

2024ರಲ್ಲಿ ಟಿವಿಕೆ ಸ್ಥಾಪನೆ

ಎರಡು ವರ್ಷದ ಹಿಂದೆ ವಿಜಯ್ ಅವರು ತಮಿಳಗ ವೆಟ್ರಿ ಕಳಗಂ ಪಕ್ಷ ಸ್ಥಾಪನೆ ಮಾಡಿದಾಗ ಅನೇಕರ ಹುಬ್ಬೇರಿತ್ತು. ಕಮಲಹಾಸನ್ ರಾಜಕೀಯ ಪ್ರವೇಶಿಸಿ ಮುನ್ನುಗ್ಗಲು ತಡವರಿಸುತ್ತಿದ್ದ ಸಮಯವದು. ರಜನೀಕಾಂತ್ ರಾಜಕೀಯ ಪಕ್ಷ ಸ್ಥಾಪನೆಯ ಹೊಸ್ತಿಲಿಂದ ಕೊನೆಯ ಕ್ಷಣದಲ್ಲಿ ಹೊರಬಿದ್ದ ಸಮಯ. ವಿಜಯ್ ಏನು ಮಾಡಿಯಾನು ಎಂದು ಭಾವಿಸಿದವರೇ ಅನೇಕರು.

ಇದನ್ನೂ ಓದಿ: ವಿಜಯ್ vs ಎನ್‌ಟಿಆರ್: ಇಬ್ಬರು ಸೂಪರ್‌ಸ್ಟಾರ್‌ಗಳು, ಎರಡು ಭಿನ್ನ ದಾರಿಗಳು; ಹೀಗೊಂದು ಹೋಲಿಕೆ

ವಿಜಯ್ ಅವರು ತಮ್ಮ ಮೂರು ದಶಕದ ಸಿನಿಮಾ ವೃತ್ತಿಯನ್ನು ತ್ಯಜಿಸುತ್ತಿರುವುದಾಗಿ ಘೋಷಿಸಿದರು. ಇದರೊಂದಿಗೆ, ರಾಜಕೀಯ ಎನ್ನುವುದು ತಮ್ಮ ಸೈಡ್ ಬ್ಯುಸಿನೆಸ್ ಅಲ್ಲ ಎನ್ನುವ ಸಂದೇಶವನ್ನು ಜನತೆಗೆ ರವಾನಿಸಿದರು.

ನಂತರ, ವಿಜಯ್ ಮಕ್ಕಳ ಇಯಕ್ಕಂ ಮೂಲಕ ನಿರ್ಮಿಸಿದ್ದ ಗ್ರೌಂಡ್ ಲೆವೆಲ್ ಬೇಸ ಅನ್ನು ಗಟ್ಟಿಗೊಳಿಸುವ ಕೆಲಸ ಮಾಡತೊಡಗಿದರು. ಉಗ್ರ ಭಾಷಣಗಳ ಬದಲು ಜನತೆಯ ಸಮಸ್ಯೆ ಆಲಿಸುವ ಸಂವೇದನಾಶೀಲ ವ್ಯಕ್ತಿಯಾಗಿ ಗುರುತಾಗತೊಡಗಿದರು.

2025ರಲ್ಲಿ ಕರೂರು ಕಾಲ್ತುಳಿತ ಘಟನೆಯು ಅವರ ಮಾನಸಿಕ ಸ್ಥೈರ್ಯದ ಪರೀಕ್ಷೆಯಾಗಿ ಮಾರ್ಪಟ್ಟಿತು. ಆ ಸಂಕಷ್ಟದಲ್ಲಿ ವಿಜಯ್ ತೋರಿದ ವರ್ತನೆ ಮತ್ತು ಸಂಯಮವು ಬಹಳ ಜನರ ಗಮನ ಸೆಳೆದಿತ್ತು. ಇವೆಲ್ಲಾ ಅಂಶಗಳು ವಿಜಯ್ ಅವರಲ್ಲಿ ವಿಶ್ವಾಸಾರ್ಹ ನಾಯಕನನ್ನು ಕಾಣಲು ಜನರಿಗೆ ಸಾಧ್ಯವಾಯಿತು ಎಂಬುದು ವಿಶ್ಲೇಷಕರ ಅನಿಸಿಕೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *