ತಮಿಳುನಾಡು ಮುಖ್ಯಮಂತ್ರಿ ಹಾಗೂ ಸ್ಟಾರ್ ನಟ ವಿಜಯ್ ಅವರ (Vijay) ಪುತ್ರ ಜೇಸನ್ ಸಂಜಯ್ ಸದ್ಯ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ಚಲನಚಿತ್ರ ರಂಗದ ಪ್ರವೇಶದ ಹೊತ್ತಿನಲ್ಲಿ ವೈಯಕ್ತಿಕ ಬದುಕಿನ ಆಸಕ್ತಿದಾಯಕ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಸ್ಟಾರ್ ಕುಟುಂಬದ ಹಿನ್ನೆಲೆಯಿಂದ ಬಂದ ಜೇಸನ್, ತಮಗೆ ಅರಿವಿಲ್ಲದೆ ಎದುರಿಸಿದ ಒಂದು ದೊಡ್ಡ ಸಂಕಷ್ಟದ ದಿನವನ್ನು ನೆನಪಿಸಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಜೇಸನ್ ಸಂಜಯ್ ಸದ್ಯದಲ್ಲೇ ‘ಸಿಗ್ಮಾ’ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಸಂದರ್ಭದಲ್ಲಿ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ತಮ್ಮ ಕುಟುಂಬದ ಜವಾಬ್ದಾರಿಯ ಬಗ್ಗೆ ಅವರು ಹಲವು ವಿಷಯಗಳನ್ನು ತೆರೆದಿಟ್ಟಿದ್ದಾರೆ.
ಅವರು ತಮ್ಮ ತಂಗಿ ದಿವ್ಯಾ ಸಾಶಾ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ತಂಗಿಯ ಜೊತೆ ತಮಗೆ ಅತ್ಯಂತ ನಿಕಟ ಬಾಂಧವ್ಯ ಇದೆ ಎಂದು ಹೇಳಿದ್ದಾರೆ. ಇಬ್ಬರೂ ಉನ್ನತ ಶಿಕ್ಷಣಕ್ಕಾಗಿ ಮನೆಯಿಂದ ಹೊರಗಿದ್ದಾಗ ಇವರ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ. ತಂಗಿ ಕೂಡ ಸಿನಿಪ್ರಿಯೆಯಾಗಿದ್ದು, ಕಥೆಗಳ ಬಗ್ಗೆ ಪ್ರಾಮಾಣಿಕ ವಿಮರ್ಶೆ ನೀಡುತ್ತಾರೆ.
ತಮ್ಮ ತಾಯಿ ಸಂಗೀತಾ ಅವರ ಬಗ್ಗೆಯೂ ಜೇಸನ್ ತಮಾಷೆಯಾಗಿ ಮಾತನಾಡಿದ್ದಾರೆ. ತಾಯಿ ಸದಾ ತಮ್ಮ ಮೇಲೆ ಕಣ್ಣಿಟ್ಟಿರುತ್ತಾರೆ ಎಂದು ಹೇಳಿದ್ದಾರೆ. ಮನೆಯವರಿಗೆ ತಿಳಿಸದೆ ಎಲ್ಲಾದರೂ ಹೋದರೆ ತಕ್ಷಣ ಸಿಕ್ಕಿಬೀಳುತ್ತೇನೆ ಎಂದಿದ್ದಾರೆ.
ಇದೇ ವೇಳೆ ಅವರು ತಮ್ಮ ಜೀವನದ ಒಂದು ಪ್ರಮುಖ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಒಂದು ರಾತ್ರಿ ಮನೆಯವರೆಲ್ಲಾ ಮಲಗಿದ್ದಾಗ ಜೇಸನ್ ಯಾರಿಗೂ ಹೇಳದೆ ಕಾರು ತಗೆದುಕೊಂಡು ಹೊರಹೋಗಿದ್ದರು. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಅವರು ಬೆಳಿಗ್ಗೆಯವರೆಗೆ ಮನೆಗೆ ಮರಳಿ ರಲಿಲ್ಲ.
ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸ್ ದೂರು ನೀಡಲು ಮುಂದಾಗಿದ್ದರು. ಜೇಸನ್ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡುವ ಸಿದ್ಧತೆಯಲ್ಲಿದ್ದರು. ಆದರೆ ಬೆಳಿಗ್ಗೆ ಅವರು ಮನೆಗೆ ಬಂದಾಗ ಪರಿಸ್ಥಿತಿ ಶಾಂತವಾಯಿತು. ಅಂದು ಮನೆಯಲ್ಲಿ ದೊಡ್ಡ ಗದ್ದಲವೇ ನಡೆದಿತ್ತು ಎಂದು ಜೇಸನ್ ವಿವರಿಸಿದ್ದಾರೆ.
ಇದನ್ನೂ ಓದಿ: ತಂದೆ ಜೊತೆ ಹಾಲಿವುಡ್ ಸಿನಿಮಾ ಮಾಡಬೇಕು; ಆಸೆ ಬಿಚ್ಚಿಟ್ಟ ವಿಜಯ್ ಮಗ ಜೇಸನ್
ಜೇಸನ್ ನಿರ್ದೇಶನದ ‘ಸಿಗ್ಮಾ’ ಚಿತ್ರದಲ್ಲಿ ಸಂದೀಪ್ ಕಿಶನ್ ನಾಯಕರಾಗಿ ನಟಿಸಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಈ ಸಿನಿಮಾ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
