ವಿದೇಶಿಗರಿಗೆ ಹಿಂದು ಧರ್ಮ ಪರಿಚಯಿಸುವ ಕಾರ್ಯ ಮಾಡಿದ ‘ರಾಮಾಯಣ’ ತಂಡ – Kannada News | Ramayana movie team gave beautiful gifts in San Diego Comicon

ಭಾರತೀಯ ಚಿತ್ರರಂಗದ (Indian Cinema) ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನಿಸಿಕೊಂಡಿದೆ ‘ರಾಮಾಯಣ’. ಈ ಸಿನಿಮಾವನ್ನು ಬಲು ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಇದೇ ಕಾರಣಕ್ಕೆ ವಿದೇಶಗಳಲ್ಲಿ ಸಿನಿಮಾದ ಪ್ರಚಾರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಇತ್ತೀಚೆಗೆ ಸ್ಯಾನ್ ಡಿಯಾಗೊನಲ್ಲಿ ನಡೆದ ಕಾಮಿಕಾನ್​​ನಲ್ಲಿ ಚಿತ್ರತಂಡ ಭಾಗಿ ಆಗಿತ್ತು. ರಣ್​​ಬೀರ್ ಕಪೂರ್, ಯಶ್, ನಮಿತ್ ಮಲ್ಹೋತ್ರಾ, ನಿತೀಶ್ ತಿವಾರಿ ಅವರುಗಳು ಸಿನಿಮಾ ಬಗ್ಗೆ ಹಲವಾರು ಸಂದರ್ಶನಗಳನ್ನು ನೀಡಿದರು. ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ‘ರಾಮಾಯಣ’ ಚಿತ್ರತಂಡ ನೀಡಿದ ಉಡುಗೊರೆ ಇದೀಗ ಸಖತ್ ವೈರಲ್ ಆಗಿದೆ.

ಸ್ಯಾನ್ ಡಿಯೋಗೊ ಕಾಮಿಕಾನ್​​​ಗೆ ಬಂದಿದ್ದ ಕೆಲ ಅಭಿಮಾನಿಗಳಿಗೆ, ಯೂಟ್ಯೂಬರ್​​ಗಳಿಗೆ, ಆಯ್ದ ಪತ್ರಕರ್ತರಿಗೆ, ಆಯೋಜಕರಿಗೆ, ‘ರಾಮಾಯಣ’ ಸಿನಿಮಾದ ಪ್ರಚಾರಕ್ಕೆ ಸಹಾಯ ಮಾಡಿದವರಿಗೆ ಚಿತ್ರತಂಡವು ಉಡುಗೊರೆಗಳನ್ನು ನೀಡಿತ್ತು. ಉಡುಗೊರೆ ಪಡೆದವರಲ್ಲಿ ಯಾರೋ ಕೆಲವರು ಇದೀಗ ‘ರಾಮಾಯಣ’ ತಂಡ ಕೊಟ್ಟಿದ್ದ ಉಡುಗೊರೆಯ ಅನ್​​ಬಾಕ್ಸಿಂಗ್ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಚಿತ್ರತಂಡ ಕೊಟ್ಟಿದ್ದ ಉಡುಗೊರೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.

ಚಿತ್ರತಂಡವು ಕಮಲದ ಹೂವಿನ ಚಿತ್ರ ಇರುವ ಸುಂದರ ಬಾಕ್ಸ್​​​ನಲ್ಲಿ ಉಡುಗೊರೆಗಳನ್ನು ಆಯ್ದವರಿಗೆ ನೀಡಿದೆ. ಜೊತೆಗೆ ಒಂದು ನೋಟ್ ಸಹ ಇದೆ. ಆ ನೋಟ್ ಸಹ ಭಿನ್ನವಾಗಿದ್ದು ನೋಟ್​​ನ ಕೆಳಗಡೆ ಮಾಯಾಜಿಂಕೆಯ ಚಿತ್ರವಿದೆ. ಇನ್ನು ಬಾಕ್ಸ್​​ನಲ್ಲಿ ಚಿನ್ನದ ಬಣ್ಣದ ಶಂಕ ಇದೆ. ಈ ಶಂಕವನ್ನೇ ಉಡುಗೊರೆಯಾಗಿ ನೀಡಲಾಗಿದೆ. ಶಂಖದ ಮೇಲೆ ವಿಷ್ಣುವಿನ ಕೆತ್ತನೆಗಳಿವೆ. ವಿಷ್ಣು ಹಾಗೂ ಆತನ ಅವತಾರಗಳ ಕೆತ್ತನೆಗಳಿವೆ. ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುವ ಕೆತ್ತನೆಗಳು ಸಹ ಶಂಖದ ಮೇಲಿವೆ. ‘ರಾಮಾಯಣ’ ತಂಡ ನೀಡಿರುವ ಉಡುಗೊರೆಯನ್ನು ಹಲವರು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ:ಭಾರತೀಯ ಚಿತ್ರರಂಗದ ಭವಿಷ್ಯ ಬದಲಿಸಲಿದೆ ಧುರಂಧರ್ 2: ರಣವೀರ್ ಸಿಂಗ್

ಭಾರತೀಯ ಸಂಸ್ಕೃತಿ, ಧರ್ಮದ ಮಹತ್ವವನ್ನು ಹೊರದೇಶಗಳಲ್ಲಿಯೂ ಸಾರುವ ಪ್ರಯತ್ನವನ್ನು ಚಿತ್ರತಂಡ ಮಾಡುತ್ತಿದೆ ಎಂದು ಭಾರತೀಯ ನೆಟ್ಟಿಗರು ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವಿಡಿಯೋವನ್ನು ಸತತವಾಗಿ ಶೇರ್ ಮಾಡುತ್ತಿದ್ದಾರೆ. ‘ರಾಮಾಯಣ’ ಸಿನಿಮಾವು ಇದೇ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ತಂಡವು ಸೋನಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಸೋನಿಯು, ವಿಶ್ವದಾದ್ಯಂತ ಈ ಸಿನಿಮಾವನ್ನು ಬಲು ಅದ್ಧೂರಿಯಾಗಿ ತೆರೆಗೆ ತರಲಿದೆ.

‘ರಾಮಾಯಣ’ ಸಿನಿಮಾನಲ್ಲಿ ರಾಮನಾಗಿ ರಣ್​​ಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಮತ್ತು ನಟ ಯಶ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಎರಡೂ ಭಾಗಗಳ ನಿರ್ಮಾಣಕ್ಕೆ ಒಟ್ಟು 2000 ಕೋಟಿ ಬಂಡವಾಳ ಹೂಡಲಾಗುತ್ತಿದೆ ಎನ್ನಲಾಗಿದೆ. ಸಿನಿಮಾವನ್ನು ‘ದಂಗಲ್’ ಖ್ಯಾತಿಯ ನಿತೀಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತರಾದ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *