ವಿದ್ಯಾ ಬಾಲನ್ ಕಂಡರೆ ಬೆಚ್ಚಿ ಬೀಳುತ್ತಿದ್ದ ಅಕ್ಷಯ್ ಕುಮಾರ್ ಮಗ; ಕಾರಣ ಏನು? – Kannada News | Akshay Kumar says Aarav Bhatia was scared of Vidya Balan Manjulika character for 6 Years

ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಅವರು ಈಗ ‘ಭೂತ್ ಬಂಗ್ಲ’ (Bhooth Bangla) ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಪ್ರಚಾರದ ವೇಳೆ ಅವರು ತಮ್ಮ ಮಗ ಆರವ್ ಭಾಟಿಯಾಗೆ ಸಂಬಂಧಿಸಿದ ಒಂದು ಸ್ವಾರಸ್ಯಕರ ಹಾಗೂ ಅಚ್ಚರಿಯ ವಿಷಯವನ್ನು ಹಂಚಿಕೊಂಡಿದ್ದಾರೆ. 2007ರಲ್ಲಿ ತೆರೆಕಂಡು ಸೂಪರ್ ಹಿಟ್ ಆದ ‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ನಟಿ ವಿದ್ಯಾ ಬಾಲನ್ (Vidya Balan) ಅವರು ಮಾಡಿದ್ದ ಮಂಜುಲಿಕಾ ಪಾತ್ರವನ್ನು ಕಂಡು ಆರವ್ ಎಷ್ಟು ಭಯಬಿದ್ದಿದ್ದರೆಂದರೆ, ಬರೋಬ್ಬರಿ 6 ವರ್ಷಗಳ ಕಾಲ ಅವರು ವಿದ್ಯಾ ಬಾಲನ್ ಎದುರು ಬರಲು ಹೆದರುತ್ತಿದ್ದರಂತೆ.

ಅಕ್ಷಯ್ ಕುಮಾರ್ ಈ ಕುರಿತು ಮಾತನಾಡುತ್ತಾ, ‘ಆರವ್ ಸುಮಾರು 6 ವರ್ಷಗಳ ಕಾಲ ವಿದ್ಯಾ ಬಾಲನ್ ಅವರನ್ನು ಕಂಡು ಹೆದರುತ್ತಿದ್ದ. ವಿದ್ಯಾ ಅವರು ನಮ್ಮ ಮನೆಗೆ ಬಂದಾಗಲೆಲ್ಲಾ ಅವರನ್ನು ಆರವ್ ಭೇಟಿಯಾಗದೇ ತಪ್ಪಿಸಿಕೊಳ್ಳುತ್ತಿದ್ದ. ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಕೂಡ ಆತನಿಗೆ ಧೈರ್ಯವಿರಲಿಲ್ಲ. ತನ್ನ ಎದುರಿಗಿರುವುದು ಮಂಜುಲಿಕಾ ಎಂಬ ಭೂತವೇ ಹೊರತು ನಟಿ ವಿದ್ಯಾ ಬಾಲನ್ ಅಲ್ಲ ಎಂದು ಆತ ಗಾಬರಿಪಡುತ್ತಿದ್ದ’ ಎಂದು ಹಳೆಯ ನೆನಪನ್ನು ಸ್ಮರಿಸಿದ್ದಾರೆ.

ತಮ್ಮ ಮಗನ ಭಯವನ್ನು ಹೋಗಲಾಡಿಸಲು ಅಕ್ಷಯ್ ಸಾಕಷ್ಟು ಪ್ರಯತ್ನಪಟ್ಟಿದ್ದರಂತೆ. ‘ಅವಳು ಮಂಜುಲಿಕಾ ಅಲ್ಲ, ವಿದ್ಯಾ. ಅವಳು ತುಂಬಾ ಒಳ್ಳೆಯವಳು ಎಂದು ನಾನು ಎಷ್ಟೇ ವಿವರಿಸಿದರೂ ಆರವ್ ಸಮಾಧಾನ ಆಗುತ್ತಿರಲಿಲ್ಲ’ ಎಂದು ಅಕ್ಷಯ್ ಹೇಳಿದ್ದಾರೆ. ಅಷ್ಟರಮಟ್ಟಿಗೆ ವಿದ್ಯಾ ಬಾಲನ್ ಅಭಿನಯವು ಆರವ್ ಭಾಟಿಯಾ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು.

‘ಭೂತ್ ಬಂಗ್ಲ’ ಚಿತ್ರವು ‘ಭೂಲ್ ಭುಲಯ್ಯ’ ಸಿನಿಮಾ ರೀತಿಯೇ ಇರಬಹುದಾ ಎಂಬ ಪ್ರಶ್ನೆಗೆ ಅಕ್ಷಯ್ ಕುಮಾರ್ ಅವರು ಉತ್ತರಿಸಿದ್ದಾರೆ. ‘ಇದು ಸಂಪೂರ್ಣವಾಗಿ ವಿಭಿನ್ನವಾದ ಸಿನಿಮಾ. ಇದು ಡಿಸ್ನಿ ಶೈಲಿಯ ಹಾರರ್-ಫ್ಯಾಂಟಸಿ ಚಿತ್ರವಾಗಿದ್ದು, ಮಕ್ಕಳು ಕೂಡ ಇದನ್ನು ಇಷ್ಟಪಡುತ್ತಾರೆ. ಇದರಲ್ಲಿ ನಿಜವಾದ ಭೂತಗಳ ಕಥೆಯಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಆರ್ಭಟಕ್ಕೆ ಬೆದರಿದ ‘ಭೂತ್ ಬಂಗ್ಲ’: ಅಕ್ಷಯ್ ಕುಮಾರ್ ಚಿತ್ರದ ಬಿಡುಗಡೆ ಮುಂದೂಡಿಕೆ

ನಿರ್ದೇಶಕ ಪ್ರಿಯದರ್ಶನ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಭೂಲ್ ಭುಲಯ್ಯ ಒಂದು ಸೈಕಲಾಜಿಕಲ್ ಥ್ರಿಲ್ಲರ್ ಆಗಿತ್ತು. ಆದರೆ ಭೂತ್ ಬಂಗ್ಲ ಒಂದು ಫ್ಯಾಂಟಸಿ ಲೋಕದ ಕಥೆ. ಎರಡನ್ನೂ ಹೋಲಿಕೆ ಮಾಡಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಚಿತ್ರವು ಏಪ್ರಿಲ್ 17ರಂದು ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *