ಧಾರವಾಡ, ಜುಲೈ 31: ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್ನಿಂದ ತಡೆಯಾಜ್ಞೆ ದೊರೆತಿರುವ ಬಗ್ಗೆ ಹೋರಾಟಗಾರ ಬಸವರಾಜ್ ಕೊರವರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಹೈ ಪ್ರೊಫೈಲ್ ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು, ತಡೆಯಾಜ್ಞೆ ಕೂಡ ಸಿಗಬಾರದು ಎಂದು ಅವರು ಅಭಿಪ್ರಾಯಪಟ್ಟರು. ನ್ಯಾಯಾಲಯದ ಆದೇಶವನ್ನು ಗೌರವಿಸುವುದಾಗಿ ಹೇಳಿದ ಅವರು, ಆದೇಶದ ಸಂಪೂರ್ಣ ಪ್ರತಿ ಬಂದ ನಂತರ, ಯಾವ ಅಂಶಗಳ ಆಧಾರದ ಮೇಲೆ ಹೈಕೋರ್ಟ್ ಈ ತಡೆಯಾಜ್ಞೆ ನೀಡಿದೆ ಎಂಬುದನ್ನು ಪರಿಶೀಲಿಸಲಾಗುವುದು ಎಂದರು. ಈಗಾಗಲೇ ಗುರುನಾಥ್ ಗೌಡ ಅವರೊಂದಿಗೆ ಚರ್ಚಿಸಿ, ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ವಿನಯ್ ಕುಲಕರ್ಣಿ ಅವರು ರಾಜಕೀಯವಾಗಿ ಪ್ರಭಾವಶಾಲಿ ಮತ್ತು ಹಣವಂತ ವ್ಯಕ್ತಿಯಾಗಿರುವುದರಿಂದ ಈ ಹೋರಾಟ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವರೆಗೂ ಮುಂದುವರೆಯುವುದು ಅನಿವಾರ್ಯ ಎಂದು ಕೊರವರ್ ಹೇಳಿದರು. ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿದ್ದರೂ, ಈ ತಡೆಯಾಜ್ಞೆ ನೀಡಿರುವುದು ಬೇಸರ ತಂದಿದೆ ಎಂದು ಅವರು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
