ವಿಯೆಟ್ನಾಂನಲ್ಲಿ ಬೋಟ್ ಮುಳುಗಿ 15 ಭಾರತೀಯ ಪ್ರವಾಸಿಗರು ಸಾವು; ಪ್ರಧಾನಿ ಮೋದಿ ಸಂತಾಪ – Kannada News | 15 Indian Tourists dead as boat capsizes in Vietnam PM Narendra Modi Condoles Assures All Possible Assistance

ನವದೆಹಲಿ, ಜುಲೈ 11: ವಿಯೆಟ್ನಾಂನ ಫೂ ಕ್ವೋಕ್ (Phu Quoc) ದ್ವೀಪದ ಬಳಿ ಸಂಭವಿಸಿದ ಭೀಕರ ಬೋಟ್ ದುರಂತದಲ್ಲಿ 15 ಭಾರತೀಯ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಈ ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲಾಗುತ್ತಿದ್ದು, ಭಾರತೀಯ ಅಧಿಕಾರಿಗಳು ವಿಯೆಟ್ನಾಂ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಅವರು ಭರವಸೆ ನೀಡಿದ್ದಾರೆ.

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿಯೆಟ್ನಾಂ ಬೋಟ್ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, “ವಿಯೆಟ್ನಾಂನ ಫೂ ಕ್ವೋಕ್ ಬಳಿ ಭಾರತೀಯ ನಾಗರಿಕರು ಪ್ರಯಾಣಿಸುತ್ತಿದ್ದ ಬೋಟ್ ಅಪಘಾತಕ್ಕೀಡಾದ ದುರಂತದ ಸುದ್ದಿ ಕೇಳಿ ಅತ್ಯಂತ ಆಘಾತವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಅತ್ಯಂತ ಪ್ರಾಮಾಣಿಕ ಸಾಂತ್ವನಗಳು. ಗಾಯಗೊಂಡು ಬದುಕುಳಿದವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ನಮ್ಮ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಕಚೇರಿಗಳು ಸಾಧ್ಯವಿರುವ ಎಲ್ಲಾ ನೆರವು ನೀಡುತ್ತಿವೆ. ನಮ್ಮ ಅಧಿಕಾರಿಗಳು ವಿಯೆಟ್ನಾಂ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಯೆಟ್ನಾಂನ ದ್ವೀಪದ ಬಳಿ 32 ಭಾರತೀಯ ಪ್ರವಾಸಿಗರಿದ್ದ ಬೋಟ್ ಮುಳುಗಡೆ

32 ಭಾರತೀಯ ಪ್ರವಾಸಿಗರು ಮತ್ತು ನಾಲ್ವರು ಸಿಬ್ಬಂದಿ ಸೇರಿದಂತೆ ಒಟ್ಟು 36 ಜನರಿದ್ದ ಈ ಸ್ಪೀಡ್ ಬೋಟ್ ಹಾನ್ ಮೇ ರುತ್ ದ್ವೀಪದಿಂದ ಪ್ರಯಾಣಿಸುತ್ತಿದ್ದಾಗ, ಕರಾವಳಿಯಿಂದ ಕೇವಲ 400 ಮೀಟರ್ ದೂರದಲ್ಲಿ ತಲೆಕೆಳಗಾಗಿ ಪಲ್ಟಿಯಾಗಿದೆ. ಸ್ಥಳೀಯ ರಕ್ಷಣಾ ಅಧಿಕಾರಿಗಳು ತಕ್ಷಣವೇ ಕಾರ್ಯಾಚರಣೆ ನಡೆಸಿ ಬೋಟ್‌ನ ಒಳಗಿನಿಂದ 21 ಜನರನ್ನು ರಕ್ಷಿಸಿದ್ದಾರೆ. ಆದರೆ, ದುರದೃಷ್ಟವಶಾತ್ ಇಬ್ಬರು ಮಹಿಳೆಯರು ಮತ್ತು 13 ಪುರುಷರು ಸೇರಿದಂತೆ ಒಟ್ಟು 15 ಭಾರತೀಯ ಪ್ರವಾಸಿಗರು ಈ ಅಪಘಾತದಲ್ಲಿ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಆಂಧ್ರಪ್ರದೇಶದ ಪ್ರವಾಸಿಗರು:

ಮಾಧ್ಯಮಗಳ ವರದಿ ಪ್ರಕಾರ, ಈ ಪ್ರವಾಸಿಗರು ಆಂಧ್ರಪ್ರದೇಶಕ್ಕೆ ಸೇರಿದ ಒಂದೇ ಗುಂಪಿನವರಾಗಿದ್ದಾರೆ ಎನ್ನಲಾಗಿದೆ. ಬೋಟ್‌ನಲ್ಲಿ 32 ಭಾರತೀಯರೊಂದಿಗೆ ನಾಲ್ವರು ಸಿಬ್ಬಂದಿ ಇದ್ದರು. ಸ್ಥಳೀಯ ಕಾಲಮಾನ ಮಧ್ಯಾಹ್ನ ಸುಮಾರು 1 ಗಂಟೆಗೆ, ಪ್ರವಾಸಿಗರನ್ನು ಹಾನ್ ಮೇ ರುತ್‌ನಿಂದ ಅನ್ ಥೋಯ್ ಬಂದರಿಗೆ ಕರೆದೊಯ್ಯುತ್ತಿದ್ದಾಗ ಬೋಟ್ ಪಲ್ಟಿಯಾಗಿದೆ. ಈ ಬೋಟ್ ಅನ್ನು ‘ಓಷಿಯನ್ ಪರ್ಲ್ ಐಲ್ಯಾಂಡ್ ಕಂಪನಿ’ ನಿರ್ವಹಿಸುತ್ತಿತ್ತು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ:

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಈ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. “ಈ ಕಷ್ಟದ ಸಮಯದಲ್ಲಿ ಭಾರತ ಸರ್ಕಾರವು ಸಂತ್ರಸ್ತ ಕುಟುಂಬಗಳ ಪರವಾಗಿ ನಿಲ್ಲುತ್ತದೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಮತ್ತು ಶೋಧ ಕಾರ್ಯ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಅವರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಯಿಂದ ಹಡಗು ಮುಳುಗಿ 4 ಜನ ಸಾವು

ಭಾರತೀಯ ರಾಯಭಾರ ಕಚೇರಿಯಿಂದ ಸಹಾಯವಾಣಿ:

ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ದುರಂತವನ್ನು ಖಚಿತಪಡಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ನೆರವಾಗಲು ಹೋ ಚಿ ಮಿನ್ ಸಿಟಿ ಮತ್ತು ಹನೋಯಿ ನಗರಗಳಲ್ಲಿ ತುರ್ತು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದೆ. ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಘಟನೆಯ ಸಂಪೂರ್ಣ ವಿವರಗಳನ್ನು ಕಲೆಹಾಕಲಾಗುತ್ತಿದೆ.

ಹನೋಯಿ ನಿಯಂತ್ರಣ ಕೊಠಡಿ ಸಂಖ್ಯೆ: +84 91 308 9165

ಹೋ ಚಿ ಮಿನ್ ಸಿಟಿಯ ಕಾನ್ಸುಲೇಟ್ ಜನರಲ್ ಕಚೇರಿ ಸಂಖ್ಯೆಗಳಾದ +84 36 281 7930, +84 91 552 37 14, ಮತ್ತು +84 33 452 0414 ಸಂಪರ್ಕಿಸಬಹುದು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 7:20 pm, Sat, 11 July 26

Source link

Leave a Reply

Your email address will not be published. Required fields are marked *