ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬೇಕು: 40 ಓವರ್​ಗೆ ಗಿಲ್ ವಿರೋಧ! – Kannada News | IND vs ENG: Shubman Gill press conference Highlights

ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿಯು ಇಂದಿನಿಂದ (ಜು.14) ಶುರುವಾಗಲಿದೆ. ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯಲಿರುವ ಈ ಸರಣಿಯ ಆರಂಭಕ್ಕೂ ಮುನ್ನ, ಭಾರತ ತಂಡದ ನಾಯಕ ಶುಭ್​ಮನ್ ಗಿಲ್ ಭವಿಷ್ಯದ ಬ್ಲೂಪ್ರಿಂಟ್ ಅನ್ನು ಬಹಿರಂಗಪಡಿಸಿದ್ದಾರೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಿವೃತ್ತಿಯ ಕುರಿತಾದ ಊಹಾಪೋಹಗಳಿಗೆ ತೆರೆ ಎಳೆದಿರುವ ಅವರು, ಈ ಇಬ್ಬರೂ ದಿಗ್ಗಜರು 2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ಭಾರತದ ಪ್ರಮುಖ ಯೋಜನೆಗಳ ಭಾಗವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಜೊತೆಗಿನ ಚರ್ಚೆ!

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶುಭ್​ಮನ್ ಗಿಲ್, “ಕಳೆದ ಎರಡು ದಿನಗಳ ಹಿಂದೆಯಷ್ಟೇ ನಾನು ವಿರಾಟ್ ಭಾಯ್ ಜೊತೆ 2027ರ ಏಕದಿನ ವಿಶ್ವಕಪ್ ಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದೇನೆ. ಸೌತ್ ಆಫ್ರಿಕಾದ ಪರಿಸ್ಥಿತಿಗೆ ತಕ್ಕಂತೆ ನಮ್ಮ ತಂಡದ ಸಂಯೋಜನೆ ಹೇಗಿರಬೇಕು, ಸದ್ಯ ತಂಡದಲ್ಲಿ ಇಲ್ಲದಿದ್ದರೂ ಭವಿಷ್ಯದಲ್ಲಿ ನಮಗೆ ನೆರವಾಗಬಲ್ಲ ಯುವ ಬೌಲರ್‌ಗಳು, ಆಲ್‌ರೌಂಡರ್‌ಗಳು ಮತ್ತು ಸ್ಪಿನ್ನರ್‌ಗಳು ಯಾರು ಎಂಬುದರ ಬಗ್ಗೆ ನಾವು ಮಾತನಾಡಿದ್ದೇವೆ” ಎಂದಿದ್ದಾರೆ.

ಹಿರಿಯ ಆಟಗಾರರೇ ತಂಡದ ಶಕ್ತಿ:

ರೋಹಿತ್ ಮತ್ತು ವಿರಾಟ್ ಅವರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಗಿಲ್, “ವಿರಾಟ್ ಭಾಯ್ ಮತ್ತು ರೋಹಿತ್ ಭಾಯ್ ಕಳೆದ ಒಂದು ದಶಕದಿಂದ ಭಾರತೀಯ ಬ್ಯಾಟಿಂಗ್ ವಿಭಾಗದ ಬೆನ್ನೆಲುಬಾಗಿದ್ದಾರೆ. ಅವರು ಇಂದಿಗೂ ನಮ್ಮ ತಂಡದ ಅತ್ಯಂತ ಪ್ರಮುಖ ಭಾಗ. ವಿಭಿನ್ನ ಪರಿಸ್ಥಿತಿಗಳಲ್ಲಿ ಅವರು ದೇಶಕ್ಕಾಗಿ ಮ್ಯಾಚ್ ಗೆಲ್ಲಿಸಿಕೊಟ್ಟಿದ್ದಾರೆ. ಅವರಲ್ಲಿರುವ ಅಪಾರ ಅನುಭವ ಮತ್ತು ಕೌಶಲ್ಯ ತಂಡದ ಯುವ ಆಟಗಾರರಿಗೆ ದೊಡ್ಡ ಮಾರ್ಗದರ್ಶನ” ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.

40 ಓವರ್‌ಗಳ ಏಕದಿನ ಪ್ರಸ್ತಾಪಕ್ಕೆ ಗಿಲ್ ವಿರೋಧ:

ಇತ್ತೀಚೆಗೆ ಐಸಿಸಿ ವಾರ್ಷಿಕ ಸಭೆಯಲ್ಲಿ ಏಕದಿನ ಕ್ರಿಕೆಟ್ ಅನ್ನು 40 ಓವರ್‌ಗಳಿಗೆ ಕಡಿತಗೊಳಿಸುವ ಬಗ್ಗೆ ಚರ್ಚೆಗಳು ನಡೆದಿರುವ ಕುರಿತು ಕೇಳಲಾದ ಪ್ರಶ್ನೆಗೆ ಶುಭ್​ಮನ್ ಗಿಲ್ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರು. “ಏಕದಿನ ಕ್ರಿಕೆಟ್ ಅನ್ನು 40 ಓವರ್‌ಗಳಿಗೆ ಇಳಿಸುವುದು ಸರಿಯಲ್ಲ ಎಂದು ನನಗೆ ಅನ್ನಿಸುತ್ತದೆ. ಅದರ ಬದಲಿಗೆ, ಈ ಮಾದರಿಯಲ್ಲಿ ಮತ್ತೆ ಆಸಕ್ತಿ ಮೂಡಿಸಲು ಮೂರು ಅಥವಾ ನಾಲ್ಕು ದೇಶಗಳು ಭಾಗವಹಿಸುವ ‘ಟ್ರೈ-ಸೀರೀಸ್’ ಅಥವಾ ‘ಕ್ವಾಡ್ರಾಂಗ್ಯುಲರ್ ಸೀರೀಸ್’ಗಳನ್ನು ಹೆಚ್ಚಾಗಿ ಆಯೋಜಿಸಬೇಕು” ಎಂದು ಕ್ರಿಕೆಟ್ ಮಂಡಳಿಗಳಿಗೆ ಸಲಹೆ ನೀಡಿದ್ದಾರೆ.

ಟಿ20 ಸೋಲಿನ ಪ್ರಭಾವ ಏಕದಿನ ಸರಣಿಯ ಮೇಲಿಲ್ಲ!

ಇತ್ತೀಚೆಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಭಾರತ ಅನುಭವಿಸಿದ ಸೋಲಿನ ಬಗ್ಗೆ ಮಾತನಾಡಿದ ಗಿಲ್, “ಟಿ20 ಮತ್ತು ಏಕದಿನ ಎರಡೂ ಸಂಪೂರ್ಣ ವಿಭಿನ್ನ ಮಾದರಿಗಳು. ಟಿ20 ಸರಣಿಯ ಫಲಿತಾಂಶಗಳು ನಮ್ಮ ಏಕದಿನ ತಂಡದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಜಸ್​ಪ್ರೀತ್ ಬುಮ್ರಾ ಅವರ ಪುನರಾಗಮನವು ನಮ್ಮ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಿದೆ. ನಾವು ಸಕಾರಾತ್ಮಕ ಮನೋಭಾವದೊಂದಿಗೆ ಹೊಸ ಸರಣಿಯನ್ನು ಆರಂಭಿಸಲಿದ್ದೇವೆ” ಎಂದು ಟೀಮ್ ಇಂಡಿಯಾ ನಾಯಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧ ‘ಬೆಥೆಲ್’ ಪ್ರಯೋಗ!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯವು ಇಂದು (ಜುಲೈ 14, ಮಂಗಳವಾರ) ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿದ್ದು, ಶುಭ್​ಮನ್ ಗಿಲ್ ನೇತೃತ್ವದ ಅನುಭವಿ ಪಡೆ ಭರ್ಜರಿ ಪ್ರದರ್ಶನ ನೀಡುವ ಮೂಲಕ ಮೊದಲ ಮ್ಯಾಚ್​ನಲ್ಲೇ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ.

Source link

Leave a Reply

Your email address will not be published. Required fields are marked *