ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿರುವ ಜೂ ಎನ್ಟಿಆರ್ (Jr NTR), ಇದೀಗ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾವನ್ನು ಅವರ ಆಪ್ತ ಗೆಳೆಯರಲ್ಲಿ ಒಬ್ಬರಾಗಿರುವ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಲಿದ್ದಾರೆ. ಸಿನಿಮಾದ ಪೋಸ್ಟರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಯುದ್ಧಗಳ ದೇವತೆ ಎಂದು ಕರೆಯಲಾಗುವ ಮುರುಗನ್ ಅಥವಾ ಸುಬ್ರಹ್ಮಣ್ಯ ಸ್ವಾಮಿಯನ್ನು ಆಧರಿಸಿದ ಕತೆಯನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಸಿನಿಮಾದ ಪೋಸ್ಟರ್ ಅನ್ನು ಸಹ ಇದೇ ವಿಷಯದ ಆಧಾರದ ಮೇಲೆ ಮಾಡಲಾಗಿದೆ. ಆದರೆ ಪೋಸ್ಟರ್ ಇದೀಗ ವಿವಾದಕ್ಕೆ ಕಾರಣವಾಗಿದೆ.
ಈಗ ಬಿಡುಗಡೆ ಆಗಿರುವ ಪೋಸ್ಟರ್ ಬಗ್ಗೆ ತಮಿಳುನಾಡಿನ ಸಿನಿಮಾ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ ಸಂಸ್ಕೃತದ ಶ್ಲೋಕವನ್ನು ಬಳಸಲಾಗಿದೆ. ಮುರುಗನ್ ತಮಿಳರ ಆರಾಧ್ಯ ದೈವವಾಗಿದ್ದು, ಅವರ ಕುರಿತಾದ ಸಿನಿಮಾನಲ್ಲಿ ತಮಿಳಿನ ಬದಲಿಗೆ ಸಂಸ್ಕೃತ ಶ್ಲೋಕ ಬಳಸಿರುವ ಬಗ್ಗೆ ಕೆಲವು ಟೀಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದೇ ಸಿನಿಮಾದ ನಿರ್ಮಾಪಕ ನಾಗವಂಶಿ, ಹಿಂದಿನ ಸಂದರ್ಶನವೊಂದರಲ್ಲಿ, ಮುರುಗನ್ ಅಥವಾ ಸುಬ್ರಹ್ಮಣ್ಯ ಸ್ವಾಮಿ ಉತ್ತರ ಭಾರತೀಯರು ಎಂದು ಹೇಳಿದ್ದು ಸಹ ವಿವಾದಕ್ಕೆ ಕಾರಣವಾಗಿದೆ.
ಇದೀಗ ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ ಮುರುಗನ್ ಆಯುಧವಾದ ತ್ರಿಶೂಲದ ಚಿತ್ರವಿದೆ. ಆದರೆ ತ್ರಿಶೂಲದ ಮಧ್ಯ ಭಾಗದಲ್ಲಿ ಡಿಎನ್ಎ ಅನ್ನು ಚಿತ್ರಿಸಲಾಗಿದೆ. ಇದನ್ನು ಸಹ ಕೆಲವರು ಟೀಕೆ ಮಾಡಿದ್ದಾರೆ. ತಮಿಳು ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಮುರುಗನ್ ದೇವರಿಗೆ ವಿಶೇಷ ಸ್ಥಾನವಿರುವುದರಿಂದ, ಈ ವಿಷಯವನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸುವಂತೆ ಅನೇಕರು ಚಿತ್ರತಂಡವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:100 ಕೋಟಿ ರೂಪಾಯಿ ಸನಿಹದಲ್ಲಿ ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾ ಕಲೆಕ್ಷನ್
ತ್ರಿವಿಕ್ರಮ್ ಅವರು ತೆಲುಗು ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ‘ಅತಡು’, ‘ಜಲ್ಸಾ’, ‘ಅತ್ತಾರಿಂಟಿಕಿ ದಾರೇದಿ’, ‘ಖಲೇಜ’, ‘ಜುಲಾಯ್’, ‘ಸನ್ ಆಫ್ ಸತ್ಯಮೂರ್ತಿ’, ‘ಅಲಾ ವೈಕುಂಟಪುರಂಲೋ’ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಜೂ ಎನ್ಟಿಆರ್ ಜೊತೆಗೆ ಈ ಹಿಂದೆ ‘ಅರವಿಂದ ಸಮೇತ ವೀರ ರಾಘವ’ ಹೆಸರಿನ ಸಿನಿಮಾ ಮಾಡಿದ್ದು, ಅದು ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಎರಡನೇ ಭಾರಿ ಜೂ ಎನ್ಟಿಆರ್ ಜೊತೆಗೆ ತ್ರಿವಿಕ್ರಮ್ ಕೈ ಜೋಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 12:32 pm, Tue, 30 June 26
