ಬೆಳಗಾವಿ, ಜೂನ್ 30: ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ನಡೆದ ಪ್ರೇಮ ಪ್ರಕರಣವೊಂದು ಹಿಂಸಾಚಾರಕ್ಕೆ ತಿರುಗಿದೆ. ವಿವಾಹಿತೆಯ ಜೊತೆ ಯುವಕನೋರ್ವ ಪರಾರಿಯಾದ ಕಾರಣಕ್ಕೆ, ಆ ಯುವಕನ ಮನೆ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ ಘಟನೆ ವರದಿಯಾಗಿದೆ. ಈ ಸಂಬಂಧ ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಿನ್ನೆ ಸಂಜೆ ಸುಮಾರು 6 ಗಂಟೆಗೆ ಭರಮ್ಯಾನಟ್ಟಿ ಗ್ರಾಮದ ಭೀಮಪ್ಪ ಅವರ ಮಗ ಯಲ್ಲಪ್ಪ ನಾಯಕ್ ಅವರ ಮನೆ ಮೇಲೆ ಕೆಲವು ಜನರು ದಾಳಿ ನಡೆಸಿದ್ದಾರೆ. ಯಲ್ಲಪ್ಪ, ಗ್ರಾಮದ ವಿವಾಹಿತೆ ನಾಗವ್ವ ಅವರೊಂದಿಗೆ ಓಡಿ ಹೋಗಿದ್ದಾರೆ ಎನ್ನಲಾಗಿದ್ದು, ಈ ಕಾರಣಕ್ಕೆ ನಾಗವ್ವ ಅವರ ಸಂಬಂಧಿಕರು ದಾಳಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಂತ್ರಸ್ತರು ದೂರು ನೀಡಿದ್ದು, ನಾಗರಾಜ್ ಬಾಳಪ್ಪ ನಾಯಕ್, ರವಿ ಬಿಜ್ಗಟ್ಟಿ, ಈಶ್ವರ್ ಶಿವಪ್ಪ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಆಸ್ತಿಪಾಸ್ತಿಗೆ ಸಾಕಷ್ಟು ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ದಸ್ತಗಿರಿ ಮಾಡಲಾಗುವುದು. ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
