ಒಡಿಶಾ, ಏಪ್ರಿಲ್ 25: ವಿಷಕಾರಿ ಹಾವಿನಿಂದ 30 ಮಕ್ಕಳನ್ನು ರಕ್ಷಿಸಿದ ನಂತರ ಒಡಿಶಾದಲ್ಲಿ ಬೀದಿ ನಾಯಿ ವೀರಮರಣವನ್ನಪ್ಪಿದೆ. ಒಡಿಶಾದ ಹಳ್ಳಿಯೊಂದರಲ್ಲಿ ವಿಷಕಾರಿ ಹಾವಿನಿಂದ 30ಕ್ಕೂ ಹೆಚ್ಚು ಚಿಕ್ಕ ಮಕ್ಕಳನ್ನು ರಕ್ಷಿಸಿದ ನಂತರ ಬೀದಿ ನಾಯಿ (Stray Dog) ಸಾವನ್ನಪ್ಪಿದೆ. ಇದು ಸ್ಥಳೀಯ ನಿವಾಸಿಗಳಲ್ಲಿ ಭಾರೀ ದುಃಖವನ್ನು ಉಂಟುಮಾಡಿದೆ. ತಮ್ಮ ಮಕ್ಕಳನ್ನು ಕಾಪಾಡಲು ಪ್ರಾಣ ಬಿಟ್ಟ ಕಾಳಿ ಎಂಬ ಬೀದಿ ನಾಯಿಯ ಶವವನ್ನು ಮೆರವಣಿಗೆ ಮಾಡಿ ಊರಿನವರೆಲ್ಲರೂ ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಮೂಲಕ ಅವರು ಆ ಬೀದಿನಾಯಿಗೆ ಗೌರವ ಸಲ್ಲಿಸಿದ್ದಾರೆ.
ಆ ಏರಿಯಾದವರಿಂದ ಕಾಳಿ ಎಂದು ಕರೆಯಲ್ಪಡುತ್ತಿದ್ದ ಬೀದಿನಾಯಿ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಧೀರಕುಲ ಗ್ರಾಮದಲ್ಲಿ ಬಹಳ ಜನಪ್ರಿಯವಾಗಿತ್ತು. ಸೋಮವಾರ ಬೆಳಿಗ್ಗೆ ಸುಮಾರು ಎಂಟೂವರೆ ಗಂಟೆಗೆ ಹತ್ತಿರದ ಪ್ರಾಥಮಿಕ ಶಾಲೆಯಾದ ಶ್ರೀ ಜಗನ್ನಾಥ ಶಿಶು ವಿದ್ಯಾ ಮಂದಿರದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಶಾಲಾ ಆವರಣದ ಹೊರಗೆ ಕುಳಿತಿದ್ದಾಗ ವಿಷಕಾರಿ ಹಾವು ಅವರ ಕಡೆಗೆ ಬರುತ್ತಿತ್ತು. ಇದನ್ನು ನೋಡಿದ ಕಾಳಿ ನಾಯಿ ಆ ಹಾವನ್ನು ಕಚ್ಚಿ ಕೊಂದಿತು. ಹಾವು ಕಚ್ಚಿದರೂ ಹೆದರದ ಕಾಳಿ ಹಿಂಜರಿಕೆಯಿಲ್ಲದೆ ಆ ಹಾವಿನೊಂದಿಗೆ ಹೋರಾಡಿತು.
ಇದನ್ನೂ ಓದಿ: ಬೀದಿ ನಾಯಿ ಪರಚಿದ್ದಕ್ಕೆ ಲಸಿಕೆ ಪಡೆಯಲು ಭಯಪಟ್ಟ ಬಾಲಕಿ, ರೇಬಿಸ್ನಿಂದ ಸಾವು
ಹಾವು ಮತ್ತು ನಾಯಿಯ ಜಗಳವನ್ನು ನೋಡುತ್ತಾ ಭಯಗೊಂಡಿದ್ದ ಆ 30 ಮಕ್ಕಳ ಬಳಿ ಹಾವಿಗೆ ಹೋಗಲು ಅವಕಾಶ ನೀಡದ ಆ ನಾಯಿ ತನ್ನ ಪ್ರಾಣವನ್ನೇ ಒತ್ತೆಯಿಟ್ಟು ಮಕ್ಕಳನ್ನು ಕಾಪಾಡಿತು. ಈ ಜಗಳದ ವೇಳೆ ವಿಷಕಾರಿ ಹಾವು ಕಾಳಿಯ ಬಾಯಿಗೆ ಕಚ್ಚಿತು. ಈ ವಿಷದಿಂದ ನಾಯಿ ಸಾವನ್ನಪ್ಪಿತು. ಕಾಳಿಯ ಸಾವಿನ ಸುದ್ದಿ ಹಳ್ಳಿಯಾದ್ಯಂತ ಹರಡಿದಾಗ ಊರಿನ ನಿವಾಸಿಗಳು ದುಃಖಿತರಾದರು. ಆ ನಾಯಿಗೆ ಗೌರವ ಸಲ್ಲಿಸಲು ನಾಯಿಯ ಅಂತ್ಯಕ್ರಿಯೆಯ ಮೆರವಣಿಗೆಯನ್ನು ಆಯೋಜಿಸಿದರು. ನಾಯಿಯ ದೇಹವನ್ನು ಟ್ರಾಲಿಯ ಮೇಲೆ ಇರಿಸಿ, ಹೂವುಗಳಿಂದ ಅಲಂಕರಿಸಿ, ಬಿಳಿ ಬಟ್ಟೆಯಲ್ಲಿ ಸುತ್ತಿ, ಪೂರ್ಣ ವಿಧಿವಿಧಾನಗಳೊಂದಿಗೆ ಸಮಾಧಿ ಮಾಡಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
