ವೈಭವ್ ಮಾತ್ರ ಅಲ್ಲ, ನಮ್ ಹುಡುಗ್ರು ಆಡ್ತಾರೆ; ಯೂನಿವರ್ಸಲ್ ಬೇಬಿ ಬಾಸ್ ಬಗ್ಗೆ ದ್ರಾವಿಡ್ ಮಾತು – Kannada News | Maharaja T20 Trophy: Rahul Dravid Praises Vaibhav Sooryavanshi as Unique Talent

ಐದನೇ ಆವೃತ್ತಿಯ ಮಹಾರಾಜ ಟಿ20 ಟ್ರೋಫಿ (Maharaja T20 Trophy) ಇದೇ ಜೂನ್ 20 ರಿಂದ ಆರಂಭವಾಗಲಿದ್ದು, ಜುಲೈ 12 ರವರೆಗೆ ನಡೆಯಲಿದೆ. ಈ ಟೂರ್ನಿಗೆ ಈಗಾಗಲೇ ಹರಾಜು ಕೂಡ ನಡೆದಿದೆ. ಈ ಲೀಗ್​ನಲ್ಲಿ ಭಾಗವಹಿಸುತ್ತಿರುವ ಐದು ಫ್ರಾಂಚೈಸಿಗಳು ಕೂಡ ಬಲಿಷ್ಠ ತಂಡಗಳನ್ನು ಕಟ್ಟಿಕೊಂಡು ಅಖಾಡಕ್ಕಿಳಿಯಲು ಸಜ್ಜಾಗಿವೆ. ಅದರ ಭಾಗವಾಗಿ ಈ ಟೂರ್ನಿಗೆ ಆತಿಥ್ಯವಹಿಸುತ್ತಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಟೂರ್ನಿಯ ಟ್ರೋಫಿ ಅನಾವರಣ ಕಾರ್ಯಕ್ರಮವನ್ನು ಜೂನ್ 11 ರಂದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ (Rahul Dravid) ಕೂಡ ಭಾಗವಹಿಸಿದ್ದರು. ಈ ವೇಳೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ದ್ರಾವಿಡ್, ತಮ್ಮ ಶಿಷ್ಯ ವೈಭವ್ ಸೂರ್ಯವಂಶಿಯನ್ನು (Vaibhav Sooryavanshi) ಹೊಗಳಿ ಮಾತನಾಡಿದ್ದಾರೆ.

ಹೋಲಿಕೆ ಮಾಡುವುದು ಸರಿಯಲ್ಲ

ಮೊದಲಿಗೆ ಮಹಾರಾಜ ಟ್ರೋಫಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ರಾಹುಲ್ ಉತ್ತರಿಸಿದರು. ಇದೇ ವೇಳೆ ಪತ್ರಕರ್ತರೊಬ್ಬರು, ‘ವೈಭವ್ ಸೂಯವಂಶಿಯಂತಹ ಆಟಗಾರರು ಕರ್ನಾಟಕದಲ್ಲೂ ಹುಟ್ಟಿಕೊಳ್ತಾರಾ ಎಂಬ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ದ್ರಾವಿಡ್, ಎಲ್ಲಾ ಆಟಗಾರರನ್ನು ವೈಭವ್ ಸೂರ್ಯವಂಶಿಗೆ ಹೋಲಿಕೆ ಮಾಡುವುದು ಸರಿಯಲ್ಲ. ವೈಭವ್ ಒಬ್ಬ ಅಪರೂಪದ ಆಟಗಾರ. ಸಚಿನ್ ತೆಂಡೂಲ್ಕರ್ ಬಳಿಕ 15 ವರ್ಷಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಆಟಗಾರ ವೈಭವ್. ಸಚಿನ್​ ರೀತಿ ಮತ್ತೊಬ್ಬ ಆಟಗಾರ 15 ವರ್ಷಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಲು 40 ವರ್ಷಗಳು ಬೇಕಾಯ್ತು.

ಆತ ವಿಶೇಷ ಪ್ರತಿಭೆ

ಹೀಗಾಗಿ 40 ಆದ ಬಳಿಕ ಮತ್ತೊಬ್ಬ ವೈಭವ್ ಸೂರ್ಯವಂಶಿ ಹುಟ್ಟಿಕೊಳ್ತಾನೆ. ಹಾಗಂತ ಯಾರನ್ನು ಹೋಲಿಕೆ ಮಾಡಲು ಹೋಗಬಾರದು. ನಮ್ಮ ಹುಡುಗರು ಕೂಡ ಚೆನ್ನಾಗಿ ಆಡ್ತಾರೆ. ಆದ್ರೆ ವೈಭವ್ ಒಬ್ಬ ಯೂನಿಕ್ ಪ್ಲೇಯರ್ ನಾವು ಅದನ್ನು ಒಪ್ಪಿಕೊಳ್ಳಬೇಕು. ಆತ ಅದ್ಭುತವಾಗಿ ಆಡುತ್ತಿದ್ದಾನೆ. ಆತ ವಿಶೇಷ ಪ್ರತಿಭೆ. ಆತ ಮುಂದೆಯೂ ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸುತ್ತಾನೆ ಅಂತ ಭಾವಿಸಿದ್ದೇನೆ. ಆತ ಚೆನ್ನಾಗಿ ಆಡಿ ತಂಡವನ್ನು ಗೆಲ್ಲಿಸಲಿ’ ಎಂದು ದ್ರಾವಿಡ್ ಹೇಳಿದ್ದಾರೆ.

ಸಚಿನ್​ರಂತೆಯೇ ವೈಭವ್ ಸೂರ್ಯವಂಶಿಗೂ ವಿಶೇಷ ವಿನಾಯಿತಿ ನೀಡಿದ ಬಿಸಿಸಿಐ

ತ್ರಿಕೋನ ಸರಣಿಯಲ್ಲಿ ವೈಭವ್ ಪ್ರದರ್ಶನ

ದ್ರಾವಿಡ್ ಹೇಳಿಕೆಯಂತೆ ವೈಭವ್ ಸೂರ್ಯವಂಶಿ ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಈಗಷ್ಟೇ ಮುಗಿದ ಐಪಿಎಲ್‌ನಲ್ಲಿ 776 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ಕೂಡ ಗೆದ್ದಿದ್ದರು. ಇದರ ಫಲವಾಗಿ ವೈಭವ್​ಗೆ ಭಾರತ ಎ ತಂಡ, ಐರ್ಲೆಂಡ್ ಹಾಗೂ ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತ ಟಿ20 ತಂಡದಲ್ಲೂ ಅವಕಾಶ ನೀಡಲಾಗಿದೆ. ಪ್ರಸ್ತುತ ಭಾರತ ಎ ತಂಡದೊಂದಿಗೆ ಶ್ರೀಲಂಕಾ ಪ್ರವಾಸ ಮಾಡಿರುವ ವೈಭವ್, ಶ್ರೀಲಂಕಾ ಎ ವಿರುದ್ಧದ ಮೊದಲ ಪಂದ್ಯದಲ್ಲಿ 12 ಎಸೆತಗಳಲ್ಲಿ 14 ರನ್ ಬಾರಿಸಿದರೆ, ಅಫ್ಘಾನಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ 22 ಎಸೆತಗಳಲ್ಲಿ 44 ರನ್ ಬಾರಿಸಿದರು.

Published On – 4:06 pm, Fri, 12 June 26

Source link

Leave a Reply

Your email address will not be published. Required fields are marked *