ಬೆಂಗಳೂರು, ಮೇ 07: ಶಸ್ತ್ರಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಸೇರಿದ ಬಂಗಾರವನ್ನು ಅಲ್ಲಿನ ಸಿಬ್ಬಂದಿಯೇ ಕದ್ದಿರುವ ಆಘಾತಕಾರಿ ಘಟನೆ ಬೆಂಗಳೂರಿನ (Bengaluru) ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಒಟ್ಟು 9.7 ಲಕ್ಷ ರೂಪಾಯಿ ಮೌಲ್ಯದ ಆಭರಣವನ್ನು ವಾರ್ಡ್ನ ಕಪಾಟಿನಿಂದ ಎಗರಿಸಿದ್ದ ಮಹಿಳಾ ಸಿಬ್ಬಂದಿಯನ್ನು ಹೆಣ್ಣೂರು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ.
- ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಬಂಗಾರ ಕದ್ದ ಮಹಿಳಾ ಸಿಬ್ಬಂದಿ
- ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ಆಸ್ಪತ್ರೆಯೊಂದರಲ್ಲಿ ಘಟನೆ
- ಒಟ್ಟು 9.7 ಲಕ್ಷ ರೂಪಾಯಿ ಮೌಲ್ಯದ ವಿವಿಧ ಆಭರಣಗಳು ಕಳ್ಳತನ
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲೊಂದು ಅಚ್ಚರಿಯ ಘಟನೆ; ಕಳುವಾಗಿದ್ದ ಮಹಿಳೆಯ ಬಂಗಾರದ ಸರ 2 ದಿನಗಳ ಬಳಿಕ ಮನೆ ಬಳಿಯೇ ಪ್ರತ್ಯಕ್ಷ!
ಯಲಹಂಕ ನಿವಾಸಿಯಾದ 41 ವರ್ಷದ ವ್ಯಕ್ತಿಯೊಬ್ಬರು ನೀಡಿದ ದೂರಿನ ಪ್ರಕಾರ, ಮೇ 1ರಂದು ಶಸ್ತ್ರಚಿಕಿತ್ಸೆಗಾಗಿ ಪತ್ನಿಯನ್ನು ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು. ಮೇ 2ರ ಬೆಳಗ್ಗೆ ಆಪರೇಷನ್ ಥಿಯೇಟರ್ಗೆ ಕರೆದೊಯ್ಯುವ ಮೊದಲು ನರ್ಸಿಂಗ್ ಸಿಬ್ಬಂದಿ ಎಲ್ಲಾ ಆಭರಣಗಳನ್ನು ತೆಗೆಯುವಂತೆ ಸೂಚಿಸಿದ್ದರು. ಅದಾದ ಬಳಿಕ ಮಹಿಳೆ 65 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 9 ಗ್ರಾಂ ತೂಕದ ಕಿವಿಯೋಲೆಗಳು ಹಾಗೂ 10 ಗ್ರಾಂ ತೂಕದ ಬೆಳ್ಳಿ ಕಾಲುಗಜ್ಜೆಗಳನ್ನು ಹ್ಯಾಂಡ್ಬ್ಯಾಗ್ನಲ್ಲಿ ಇಟ್ಟು ವಾರ್ಡ್ನ ಕಪಾಟಿನೊಳಗೆ ಇರಿಸಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಮಧ್ಯಾಹ್ನ ಸುಮಾರು 2.45ಕ್ಕೆ ಕಪಾಟು ಪರಿಶೀಲಿಸಿದಾಗ ಆಭರಣಗಳು ಕಾಣೆಯಾಗಿರುವುದು ಗೊತ್ತಾಗಿ ದಂಪತಿ ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ.
ಇನ್ನು ಕಪಾಟಿನ ಬಾಗಿಲು ಒಡೆದ ಗುರುತುಗಳಿಲ್ಲದ ಹಿನ್ನೆಲೆ ವಾರ್ಡ್ಗೆ ಪ್ರವೇಶವಿದ್ದವರ ಮೇಲೆ ಅನುಮಾನ ವ್ಯಕ್ತವಾಗಿದೆ. ತಕ್ಷಣವೇ ಆಸ್ಪತ್ರೆ ಆಡಳಿತಕ್ಕೆ ಮಾಹಿತಿ ನೀಡಿದ ಬಳಿಕ, ಘಟನೆ ಬಗ್ಗರ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ವೇಳೆ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದ ಮಹಿಳಾ ಸಿಬ್ಬಂದಿಯೇ ಕಳ್ಳತನ ನಡೆಸಿರೋ ವಿಷಯ ಬಹಿರಂಗವಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
