ಶಸ್ತ್ರಚಿಕಿತ್ಸೆ ಬೆನ್ನಲ್ಲೇ ಕೊಯಮತ್ತೂರು ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ರಾಮ್ ಚರಣ್ ಭೇಟಿ – Kannada News | Peddi Movie actor Ram Charan visits Coimbatore Ayyappa Temple after Wrist Surgery

‘ಪೆದ್ದಿ’ (Peddi) ಸಿನಿಮಾದ ಚಿತ್ರೀಕರಣದ ವೇಳೆ ತೆಲುಗು ಚಿತ್ರರಂಗದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರಿಗೆ ಮಣಿಕಟ್ಟಿನ ಗಾಯ ಆಗಿತ್ತು. ಅದಕ್ಕಾಗಿ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆ (Wrist Surgery) ಮಾಡಿಸಿಕೊಂಡರು. ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಪತ್ನಿ ಉಪಾಸನಾ ಕೊನಿಡೇಲ ಅವರೊಂದಿಗೆ ಕೊಯಮತ್ತೂರಿನ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಕೈಗೆ ಸ್ಲಿಂಗ್ ಧರಿಸಿಕೊಂಡೇ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ರಾಮ್ ಚರಣ್ (Ram Charan) ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಬುಧವಾರ (ಜುಲೈ 29) ವೈರಲ್ ಆದ ಫೋಟೋಗಳಲ್ಲಿ, ರಾಮ್ ಚರಣ್ ಕಪ್ಪು ಶರ್ಟ್, ಪಂಚೆ ಹಾಗೂ ಅಯ್ಯಪ್ಪ ಮಾಲೆಯನ್ನು ಧರಿಸಿ ದೇವರ ದರ್ಶನ ಪಡೆಯುತ್ತಿರುವುದು ಕಂಡುಬಂದಿದೆ. ಅವರ ಪತ್ನಿ ಉಪಾಸನಾ ನೀಲಿ ಬಣ್ಣದ ಕುರ್ತಾ ಧರಿಸಿದ್ದು, ದೇವಾಲಯದ ಗೋಶಾಲೆಯಲ್ಲಿ ಹಸುಗಳಿಗೆ ಮೇವು ನೀಡುತ್ತಿರುವುದು ಕಂಡುಬಂದಿದೆ. ದೇವಾಲಯದ ಪ್ರಾಂಗಣದಲ್ಲಿ ರಾಮ್ ಚರಣ್ ಅವರನ್ನು ಕಂಡ ಅಭಿಮಾನಿಗಳು ಹಾಗೂ ಭಕ್ತರು ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು. ಇದೇ ವೇಳೆ ರಾಮ್ ಚರಣ್ ಅವರು ದೇವಾಲಯದ ಅರ್ಚಕರು ಮತ್ತು ಆಡಳಿತ ಮಂಡಳಿ ಜೊತೆ ಸೌಹಾರ್ದಯುತವಾಗಿ ಸಂವಾದ ನಡೆಸಿದರು.

ಆಸ್ಪತ್ರೆಯಿಂದಲೇ ಗೆಲುವಿನ ನಗೆ:

ಇದಕ್ಕೂ ಮುನ್ನ, ಆಸ್ಪತ್ರೆಯ ಮಂಚದ ಮೇಲೆ ಕೈಗೆ ಬ್ಯಾಂಡೇಜ್ ಹಾಕಿಕೊಂಡು ರಾಮ್ ಚರಣ್ ನಗೆಬೀರುತ್ತಿರುವ ಫೋಟೋವನ್ನು ನಿರ್ಮಾಪಕ ಬನ್ನಿ ವಾಸ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ‘ನಮ್ಮ ಪ್ರೀತಿಯ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರಿಗೆ ಶಸ್ತ್ರಚಿಕಿತ್ಸೆಯ ನಂತರ ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ. ನಮ್ಮ ಪ್ರಾರ್ಥನೆಗಳು ನಿಮ್ಮೊಂದಿಗಿವೆ. ಬೇಗ ಗುಣಮುಖರಾಗಿ ಮತ್ತೆ ಆ್ಯಕ್ಷನ್‌ಗೆ ಮರಳಿ’ ಎಂದು ಬರೆದುಕೊಂಡಿದ್ದರು.

‘ಪೆದ್ದಿ’ ಚಿತ್ರತಂಡದ ಶ್ಲಾಘನೆ:

ರಾಮ್ ಚರಣ್ ಅವರ ಆರೋಗ್ಯದ ಕುರಿತು ‘ಪೆದ್ದಿ’ ಚಿತ್ರದ ನಿರ್ಮಾಣ ಸಂಸ್ಥೆಯಾದ ‘ವೃದ್ಧಿ ಸಿನಿಮಾಸ್’ ಅಧಿಕೃತ ಪ್ರಕಟಣೆ ಹೊರಡಿಸಿದೆ. ‘ಪೆದ್ದಿ ಚಿತ್ರೀಕರಣದ ವೇಳೆ ಮಣಿಕಟ್ಟಿಗೆ ಗಾಯವಾಗಿದ್ದರೂ, ತೀವ್ರ ನೋವಿನ ನಡುವೆಯೂ ರಾಮ್ ಚರಣ್ ಅವರು ಅದ್ಭುತ ಸಮರ್ಪಣಾ ಮನೋಭಾವದಿಂದ ಚಿತ್ರದ ಪ್ರಮುಖ ದೃಶ್ಯಗಳ ಶೂಟಿಂಗ್ ಪೂರ್ಣಗೊಳಿಸಿದ್ದರು. ಅವರ ಈ ವೃತ್ತಿಪರತೆ ಇಡೀ ತಂಡಕ್ಕೆ ಪ್ರೇರಣೆಯಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಶೀಘ್ರದಲ್ಲೇ ಪೂರ್ಣ ಆರೋಗ್ಯದೊಂದಿಗೆ ಮರಳಲಿದ್ದಾರೆ’ ಎಂದು ತಿಳಿಸಿದೆ.

ಇದನ್ನೂ ಓದಿ: ರಾಮ್ ಚರಣ್ ಆಸ್ಪತ್ರೆ ಫೋಟೋ ವೈರಲ್; 8 ವಾರ ವಿಶ್ರಾಂತಿ ಕಡ್ಡಾಯ

ತಜ್ಞ ವೈದ್ಯರಿಂದ ಶಸ್ತ್ರಚಿಕಿತ್ಸೆ:

ಕೊಯಮತ್ತೂರಿನ ಗಂಗಾ ಆಸ್ಪತ್ರೆಯಲ್ಲಿ ರಾಮ್ ಚರಣ್ ಅವರ ಬಲಗೈ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ನಡೆದಿದೆ. ಗಾಯದ ಗಂಭೀರತೆಯನ್ನು ಪರಿಗಣಿಸಿ, ಪ್ರಸಿದ್ಧ ಮೂಳೆ ಶಸ್ತ್ರಚಿಕಿತ್ಸಕ ಡಾ. ಎಸ್. ರಾಜಶೇಖರನ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಯಿತು. ಅಮೆರಿಕದ ಮಿಯಾಮಿಯಿಂದ ಆಗಮಿಸಿದ್ದ ತಜ್ಞ ವೈದ್ಯ ಡಾ. ಅಲೆಜಾಂಡ್ರೊ ಬ್ಯಾಡಿಯಾ ಕೂಡ ಈ ಶಸ್ತ್ರಚಿಕಿತ್ಸಾ ತಂಡದಲ್ಲಿ ಭಾಗವಹಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *