
ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಅವರನ್ನು ಡ್ರಗ್ಸ್ ಪ್ರಕರಣದಿಂದ ಪಾರು ಮಾಡಲು 25 ಕೋಟಿ ರೂಪಾಯಿ ಲಂಚ ಕೇಳಿದ ಆರೋಪ ಎದುರಿಸುತ್ತಿರುವ ಐಆರ್ಎಸ್ ಅಧಿಕಾರಿ ಸಮೀರ್ ವಾಂಖೆಡೆ (Sameer Wankhede), ಸೋಮವಾರ (ಮಾರ್ಚ್ 23) ಬಾಂಬೆ ಹೈಕೋರ್ಟ್ನಲ್ಲಿ ತಮ್ಮ ವಾದ ಮಂಡಿಸಿದ್ದಾರೆ. ‘ನಾನು ಶಾರುಖ್ ಖಾನ್ (Shah Rukh Khan) ಅವರಿಂದ ಯಾವುದೇ ಲಂಚ ಕೇಳಿಲ್ಲ ಅಥವಾ ಸ್ವೀಕರಿಸಿಲ್ಲ’ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸಿಬಿಐ ಬಳಿ ಯಾವುದೇ ಪುರಾವೆಯಿಲ್ಲ ಎಂದು ಸಮೀರ್ ಪರ ವಕೀಲರು ವಾದ ಮಾಡಿದ್ದಾರೆ.
ಸಮೀರ್ ವಾಂಖೆಡೆ ಪರ ವಾದ ಮಂಡಿಸಿದ ಹಿರಿಯ ವಕೀಲ ಅಬಾದ್ ಪೋಂಡಾ ಅವರು ಸಿಬಿಐ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಮನವಿ ಮಾಡಿದರು. ‘ವಾಂಖೆಡೆ ಅವರು ಲಂಚ ಕೇಳಿದ್ದಾರೆ ಅಥವಾ ಪಡೆದಿದ್ದಾರೆ ಎನ್ನುವುದಕ್ಕೆ ಸಿಬಿಐ ಬಳಿ ಯಾವುದೇ ಬಲವಾದ ಪುರಾವೆಗಳಿಲ್ಲ. ಅಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಾರ್ಡೆಲಿಯಾ ಕ್ರೂಸ್ ಹಡಗಿನ ಮೇಲೆ ಕಾನೂನುಬದ್ಧವಾಗಿ ದಾಳಿ ನಡೆಸಲಾಗಿತ್ತು. ಆರ್ಯನ್ ಖಾನ್ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು’ ಎಂದು ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಏನಿದು 25 ಕೋಟಿ ರೂ. ಲಂಚದ ಹಗರಣ?
2023ರ ಮೇ 11ರಂದು ಸಿಬಿಐ ದಾಖಲಿಸಿದ ಎಫ್ಐಆರ್ ಪ್ರಕಾರ, ಅಕ್ಟೋಬರ್ 2021ರ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಸಿಲುಕಿಸದಿರಲು ಶಾರುಖ್ ಖಾನ್ ಅವರಿಗೆ 25 ಕೋಟಿ ರೂಪಾಯಿ ಬೇಡಿಕೆ ಇಡಲಾಗಿತ್ತು. ನಂತರ ಈ ಲಂಚದ ಮೊತ್ತವನ್ನು 18 ಕೋಟಿ ರೂಪಾಯಿಗೆ ಇಳಿಕೆ ಮಾಡಲಾಗಿತ್ತು ಎಂಬ ಗಂಭೀರ ಆರೋಪವಿದೆ. ಇದರಲ್ಲಿ ವಾಂಖೆಡೆ ಮಾತ್ರವಲ್ಲದೆ, ಆಗಿನ ಎನ್ಸಿಬಿ ಎಸ್ಪಿ ವಿಶ್ವ ವಿಜಯ್ ಸಿಂಗ್, ಕಿರಣ್ ಗೋಸಾವಿ ಸೇರಿದಂತೆ ಹಲವರ ಹೆಸರಿದೆ.
ಆರ್ಯನ್ ಖಾನ್ಗೆ ಸಿಕ್ಕ ‘ಕ್ಲೀನ್ ಚಿಟ್’
2021ರ ಅಕ್ಟೋಬರ್ 3ರಂದು ಆರ್ಯನ್ ಖಾನ್ ಬಂಧನವಾಗಿತ್ತು. ಆದರೆ, ಎನ್ಸಿಬಿಯ ವಿಶೇಷ ತನಿಖಾ ತಂಡ ನಡೆಸಿದ ಆಂತರಿಕ ತನಿಖೆಯಲ್ಲಿ ಆರ್ಯನ್ ಖಾನ್ ಯಾವುದೇ ದೊಡ್ಡ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿಲ್ಲ ಎಂದು ತಿಳಿದುಬಂದಿತ್ತು. ವಾಂಖೆಡೆ ತಂಡವು ತನಿಖೆಯ ಸಮಯದಲ್ಲಿ ಫೋನ್ ವಶಪಡಿಸಿಕೊಳ್ಳುವಿಕೆ ಮತ್ತು ಹೇಳಿಕೆ ದಾಖಲಿಸುವಲ್ಲಿ ಸರಿಯಾದ ಪ್ರಕ್ರಿಯೆ ಅನುಸರಿಸಿಲ್ಲ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಆರ್ಯನ್ ಖಾನ್ಗೆ ಕ್ಲೀನ್ ಚಿಟ್ ನೀಡಲಾಗಿತ್ತು.
ಇದನ್ನೂ ಓದಿ: ಮಧ್ಯ ಬೆರಳು ತೋರಿಸಿದ ಆರ್ಯನ್ ಖಾನ್ ಮೇಲೆ ದೂರು; ಅಲ್ಲೇನಾಯಿತು ವಿವರಿಸಿದ ಝೈದ್ ಖಾನ್
ಸದ್ಯ ಸಮೀರ್ ವಾಂಖೆಡೆ ವಿರುದ್ಧ ಜಾರಿ ನಿರ್ದೇಶನಾಲಯ (ED) ಕೂಡ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯದ ಮುಂದಿನ ತೀರ್ಪಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸದ್ಯ ಆರ್ಯನ್ ಖಾನ್ ಅವರು ಬಾಲಿವುಡ್ನಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.