ನೆಲಮಂಗಲ, ಜುಲೈ 08: ಶಾಲಾ ವಾಹನಕ್ಕೆ ಸಿಲುಕಿ 4 ವರ್ಷದ ಬಾಲಕಿ ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಸನಪುರ ಬಳಿ ನಡೆದಿದೆ. ತನುಶಾ ಮೃತ ದುರ್ದೈವಿ. ವಾಹನ ರಿವರ್ಸ್ ತೆಗೆದುಕೊಳ್ಳುವಾಗ ಅವಘಡ ನಡೆದಿದ್ದು, ಬಾಲಕಿ ಬಸ್ನ ಮುಂಭಾಗದ ಚಕ್ರಕ್ಕೆ ಸಿಲುಕಿ ದುರ್ಮರಣ ಹೊಂದಿದ್ದಾಳೆ. ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ತಾಯಿಯ ಕಣ್ಣೆದುರೇ ಪ್ರಾಣಬಿಟ್ಟ ಬಾಲಕಿ
ತನುಶಾ, ತುಮಕೂರಿನ ಹೆಬ್ಬೂರು ನಿವಾಸಿಗಳಾಗಿರುವ ಕಿಶೋರ್ ಮತ್ತು ಮಧುಸ್ಮಿತಾ ದಂಪತಿಯ ಎರಡನೇ ಮಗು ಎನ್ನಲಾಗಿದೆ. ಶಾಂತಿನಗರದ ಆರ್ಟಿಒದಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್, ಮಧ್ಯಾಹ್ನ ಈಕೆಯನ್ನು ಶಾಲೆಯಿಂದ ಕರೆತಂದಿದ್ದರು. ಆ ಬಳಿಕ ಸಂಜೆ ಮೊದಲ ಮಗಳು ಹನಿಕಾ ಕೂಡ ಶಾಲೆಯಿಂದ ಬರಲಿರುವ ಕಾರಣ ಆಕೆಯನ್ನು ಕರೆತರಲೆಂದು ತಾಯಿ ಮಧುಸ್ಮಿತಾ ತೆರಳಿದ್ದರು. ಈ ವೇಳೆ ತನುಶಾಳನ್ನು ಸಹ ಅವರು ಕರೆದೊಯ್ದಿದ್ದರು. ಆದರೆ ದುರ್ದೈವ ಎಂಬಂತೆ ಹನಿಕಾಳನ್ನ ಕರೆತರುವಷ್ಟರಲ್ಲಿ ಅಲ್ಲೇ ಆಡಲು ಶುರುಮಾಡಿದ್ದ ಬಾಲಕಿಯ ಮೇಲೆ ಶಾಲಾ ಬಸ್ ಹರಿದಿದೆ. ಪರಿಣಾಮ ತಾಯಿಯ ಕಣ್ಣೆದುರೇ ತನುಶಾ ಉಸಿರು ಚೆಲ್ಲಿದ್ದಾಳೆ.
ಇದನ್ನೂ ಓದಿ: ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು; ಸಿಡಿದೆದ್ದ ಪೋಷಕರು, ಪರಿಸ್ಥಿತಿ ಉದ್ವಿಗ್ನ
ಶಾಲಾ ಬಸ್ ಚಾಲಕ ಎಸ್ಕೇಪ್!
ಇನ್ನು ಅಪಘಾತದ ಬೆನ್ನಲ್ಲೇ ಶಾಲಾ ಬಸ್ನ ಚಾಲಕ ಸ್ಥಳದಿಂದ ಎಸ್ಕೇಪ್ ಆಗಿದ್ದು, ಮೃತ ಬಾಲಕಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಾಣಾವರ ಸಂಚಾರಿ ಪೊಲೀಸರೂ ಸ್ಥಳಕ್ಕೆ ಭೇಟಿ ಕೊಟ್ಟಿದ್ದು, ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಕಾಗಿ ನೆಲಮಂಗಲದ ಶವಾಗಾರಕ್ಕೆ ರವಾನಿಸಲಾಗಿದೆ. ಬಾಲಕಿ ಬಲಿ ಪಡೆದ ವಾಹನ ಕಿಡ್ಸ್ ಇಂಟರ್ನ್ಯಾಷನಲ್ ಶಾಲೆಗೆ ಸೇರಿದ್ದು ಎಂಬುದು ಗೊತ್ತಾಗಿದೆ.
ವರದಿ: ಮಂಜುನಾಥ್, ಟಿವಿ9 ನೆಲಮಂಗಲ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 7:29 pm, Wed, 8 July 26
