ಶಾಸಕಿ ನಯನಾ ಮೋಟಮ್ಮ ವಿರುದ್ಧ ದೂರುImage Credit source: tv9 kannada
ಚಿಕ್ಕಮಗಳೂರು, ಜುಲೈ 08: ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ನಲ್ಲಿ (Congress) ಆಂತರಿಕ ಭಿನ್ನಮತ ಹಾಗೂ ಅಸಮಾಧಾನ ಸ್ಫೋಟಗೊಂಡಿದೆ. ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ (Nayana Motamma) ಅವರ ಕಾರ್ಯವೈಖರಿ ವಿರುದ್ಧ ಸ್ವತಃ ತಮ್ಮದೇ ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ರನ್ನು ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿದ್ದಾರೆ. ಮಾಜಿ ಸಚಿವ ಬಿ.ಬಿ. ನಿಂಗಯ್ಯ ಹಾಗೂ ಮಾಜಿ ಶಾಸಕ ಕುಮಾರಸ್ವಾಮಿ ಸೇರಿದಂತೆ 45ಕ್ಕೂ ಹೆಚ್ಚು ಪ್ರಮುಖ ಮುಖಂಡರು ಸಹಿ ಹಾಕಿರುವ 16 ಪ್ರಮುಖ ಅಂಶಗಳನ್ನೊಳಗೊಂಡ ದೂರಿನ ಪತ್ರವನ್ನು ಹಸ್ತಾಂತರಿಸಲಾಗಿದೆ.
ದೂರಿನಲ್ಲೇನಿದೆ?
ಶಾಸಕಿ ನಯನಾ ಮೋಟಮ್ಮ ಹಲವು ವರ್ಷಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ ಎಂದು ಮೂಡಿಗೆರೆ ಕಾಂಗ್ರೆಸ್ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ. 2023ರ ಚುನಾವಣೆಯ ನಂತರ ಪಕ್ಷಕ್ಕೆ ಸೇರಿದ ಆರ್ಎಸ್ಎಸ್ ಹಾಗೂ ಬಜರಂಗದಳದ ಹಿನ್ನೆಲೆಯುಳ್ಳವರೊಂದಿಗೆ ಶಾಸಕಿ ತಮ್ಮದೇ ಆದ ಪಟಾಲಂ ಕಟ್ಟಿಕೊಂಡು ಅತ್ಯಾಪ್ತತೆ ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ರನ್ನ ಆರ್ಎಸ್ಎಸ್ ಮತ್ತು ಬಜರಂಗದಳದ ಕಾರ್ಯಕರ್ತರೊಂದಿಗೆ ಸೇರಿ ಶಾಸಕಿ ಸ್ವಾಗತಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಭ್ರಷ್ಟಾಚಾರ ಆರೋಪ: ಲೋಕಾಯುಕ್ತಕ್ಕೆ ಸ್ವಯಂ ಪ್ರೇರಿತವಾಗಿ ದಾಖಲೆ ಸಮೇತ ಉತ್ತರ ಸಲ್ಲಿಸಿದ ಶಾಸಕ ಸುರೇಶ್ ಕುಮಾರ್
ಮೂಲ ಕಾಂಗ್ರೆಸಿಗರಿಗೆ ಕ್ಷೇತ್ರದಲ್ಲಿ ಯಾವುದೇ ಅವಕಾಶ ನೀಡದ ಕಾರಣ, ನಿಷ್ಠಾವಂತ ಕಾರ್ಯಕರ್ತರು ಪಕ್ಷದ ಚಟುವಟಿಕೆಗಳಿಂದ ದೂರ ಉಳಿಯುತ್ತಿದ್ದು, ಇದು ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಭಾರೀ ಹಿನ್ನಡೆಗೆ ಕಾರಣವಾಗಲಿದೆ ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.
ಪಕ್ಷದ ಸಾಂಸ್ಥಿಕ ನಿಯಮಗಳ ಉಲ್ಲಂಘನೆ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಯನಾ ಮೋಟಮ್ಮ ಶಾಸಕರಾದ ದಿನದಿಂದ ಇಂದಿನವರೆಗೂ ಮೂಡಿಗೆರೆಯ ಅಧಿಕೃತ ಕಾಂಗ್ರೆಸ್ ಕಚೇರಿಗೆ ಕಾಲಿಟ್ಟಿಲ್ಲ ಹಾಗೂ ಯಾವುದೇ ಸಮನ್ವಯ ಸಭೆಗಳನ್ನು ನಡೆಸಿಲ್ಲ. ಕೆಪಿಸಿಸಿ ನೀಡುವ ಸೂಚನೆಗಳನ್ನು ಮತ್ತು ಸಭೆಗಳನ್ನು ಅವರು ನಿರ್ಲಕ್ಷಿಸುತ್ತಿದ್ದಾರೆ.
ಶಾಸಕಿ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹ
ಇನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಯಾವುದೇ ಅನುಮೋದನೆ ಪಡೆಯದೆ, ಚುನಾವಣಾ ಆಯೋಗಕ್ಕೆ ನೀಡಬೇಕಾದ BLA2 (ಬೂತ್ ಮಟ್ಟದ ಏಜೆಂಟ್) ನೇಮಕಾತಿ ಪಟ್ಟಿಯನ್ನು ಏಕಪಕ್ಷೀಯವಾಗಿ ಸಿದ್ಧಪಡಿಸಿ ಸಲ್ಲಿಸಿದ್ದಾರೆ. ಅಲ್ಲದೆ, ಸ್ಥಳೀಯ ಸಂಘಟನೆಗಳನ್ನು ಬದಿಗೊತ್ತಿ ತಮ್ಮ ಹಿಂಬಾಲಕರನ್ನೇ ಹೋಬಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ ಎಂದು ಹಿರಿಯ ನಾಯಕರು ದೂರಿನ ಪಟ್ಟಿಯಲ್ಲಿ ವಿವರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಕ್ಷೇತ್ರದಲ್ಲಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದ್ದು, ಕೆಪಿಸಿಸಿ ಅಧ್ಯಕ್ಷರು ತಕ್ಷಣವೇ ಮಧ್ಯಪ್ರವೇಶಿಸಿ ಶಿಸ್ತುಕ್ರಮ ಕೈಗೊಳ್ಳುವಂತೆ ಮೂಡಿಗೆರೆ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
