ಶಿರಸಿಯ 3ನೇ ಕ್ಲಾಸ್​ ವಿದ್ಯಾರ್ಥಿಯಿಂದ ವಿಶ್ವದಾಖಲೆ: ಶೀರ್ಷಾಸನದಲ್ಲಿ ಶಿವತಾಂಡವ ಪಠಿಸಿದ ಬಾಲ ಪ್ರತಿಭೆ – Kannada News | Sirsi Boy Om Sets World Record by Reciting Shiv Tandav Stotra in Sirsasana

ಬಾಲಕ ಓಂ, ತಂದೆ ಶ್ರೀನಿವಾಸ ನಾಯ್ಕImage Credit source: tv9 kannada

ಕಾರವಾರ, ಮೇ 14: ಸಾಧಿಸುವ ಛಲ ಒಂದಿದ್ದರೆ ಯಾರು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಶಿರಸಿಯ 3ನೇ ತರಗತಿಯ ವಿದ್ಯಾರ್ಥಿ (student) ಓಂ ಮಾದರಿಯಾಗಿದ್ದಾನೆ. ಶೀರ್ಷಾಸನದಲ್ಲಿ ಅಂದರೆ ತಲೆಕೆಳಗಾಗಿ ನಿಂತು ಕೇವಲ 3 ನಿಮಿಷ 47 ಸೆಕೆಂಡುಗಳಲ್ಲಿ ಸಂಪೂರ್ಣ ಶಿವತಾಂಡವ ಸ್ತೋತ್ರವನ್ನು (Shiv Tandav Stotra) ಪಠಿಸುವ ಮೂಲಕ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾನೆ.

ಮುಖ್ಯಾಂಶಗಳು

  • ವಿಶಿಷ್ಟ ವಿಶ್ವದಾಖಲೆ ಬರೆದ ಮೂರನೇ ತರಗತಿಯ ಬಾಲಕ
  • ಶೀರ್ಷಾಸನದಲ್ಲಿ ಶಿವತಾಂಡವ ಸ್ತೋತ್ರ ಪಠಣ
  • ಮತ್ತೊಮ್ಮೆ ವಿಶ್ವದಾಖಲೆ ಬರೆದ ಓಂ

ಕೆ.ಎಚ್.ಬಿ. ಕಾಲೋನಿಯ ನಿವಾಸಿಯಾಗಿರುವ ಓಂ, ಶ್ರೀನಿಕೇತನ ಶಾಲೆಯ ವಿದ್ಯಾರ್ಥಿ. ಮಾಜಿ ಸೈನಿಕರಾಗಿರುವ ತಂದೆ ಶ್ರೀನಿವಾಸ ನಾಯ್ಕ ಅವರು ಧಾರ್ಮಿಕ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ಚಿಕ್ಕಂದಿನಿಂದಲೇ ಮಗನಿಗೆ ಯೋಗ, ಧ್ಯಾನ, ಸಂಗೀತ ಹಾಗೂ ಹಿಂದೂ ಧರ್ಮದ ಮೌಲ್ಯಗಳನ್ನು ಕಲಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: 10.45 ಗಂಟೆಯಲ್ಲಿ ಶ್ರೀಲಂಕಾದಿಂದ ಭಾರತಕ್ಕೆ ಈಜಿದ ಜೋಡಿ: ಐತಿಹಾಸಿಕ ಸಾಧನೆ ಮಾಡಿದ ಬೆಂಗಳೂರಿನ ದಂಪತಿ

ಶೀರ್ಷಾಸನ ಹಾಕುವ ಅಭ್ಯಾಸದ ಜೊತೆಗೆ ಶಿವತಾಂಡವ ಸ್ತೋತ್ರವನ್ನು ಯಾವುದೇ ತೊಡಕಿಲ್ಲದೆ ಹೇಳುವುದನ್ನು ಓಂ ಕರಗತ ಮಾಡಿಕೊಂಡಿದ್ದಾನೆ. ಒಂದು ವರ್ಷದ ನಿರಂತರ ಅಭ್ಯಾಸದ ಫಲವಾಗಿ, ತಲೆಯ ಮೇಲೆ ಇಡೀ ದೇಹದ ಭಾರ ಹೊತ್ತು ಶ್ಲೋಕ ಪಠಿಸುವುದರಲ್ಲಿ ಪಕ್ವತೆ ಸಾಧಿಸಿದ್ದಾನೆ. ಈ ವಿಶಿಷ್ಟ ಸಾಧನೆಯನ್ನು ಗುರುತಿಸಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಓಂಗೆ ವಿಶ್ವದಾಖಲೆ ಪ್ರಶಸ್ತಿ ನೀಡಿ ಗೌರವಿಸಿದೆ.

ಓಂನ ಸಾಧನೆ ಇದೇ ಮೊದಲಲ್ಲ

ಇದು ಓಂನ ಮೊದಲ ಸಾಧನೆ ಅಲ್ಲ. ಕೇವಲ 6ನೇ ವಯಸ್ಸಿನಲ್ಲಿ, 1 ನಿಮಿಷ 42 ಸೆಕೆಂಡುಗಳಲ್ಲಿ ಏಷ್ಯಾ ಖಂಡದ 48 ದೇಶಗಳ ಹೆಸರು, ರಾಜಧಾನಿ ಹಾಗೂ ಕರೆನ್ಸಿಗಳನ್ನು ನೋಡದೆ ಸರಾಗವಾಗಿ ಹೇಳುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದ. ತಂದೆ ಹಾಗೂ ಶಾಲೆಯಲ್ಲಿ ಹೇಳಿಕೊಟ್ಟ ಪಾಠ ಇದೀಗ ಈ ಪುಟ್ಟ ಬಾಲಕ ದೊಡ್ಡ ಸಾಧನೆ ಮಾಡಿದ್ದಾನೆ. ತಾನು ಇನ್ನೂ ಸಾಧನೆ ಮಾಡಬೇಕು ಎಂಬ ಹಂಬಲದಲ್ಲಿರುವ ಈತ ಇದೀಗ ಎರಡು ಸಾಧನೆಗಳನ್ನ ಮಾಡುವ ಜೊತೆ ಇನ್ನೂ ದೊಡ್ಡ ಸಾಧನೆ ಗುರಿ ಇಟ್ಟುಕೊಂಡು ತನ್ನ ಕಾರ್ಯ ಮುಂದುವರೆಸಿದ್ದಾನೆ.

ಇದನ್ನೂ ಓದಿ: ಇಂಡಿಯಾ ಬುಕ್ ಆಫ್ ರೆಕಾರ್ಡ್​ ಸೇರಿದ 2 ವರ್ಷದ ಬಾಲಕ ಆದಿತ್ಯ: ಈತ ಮಾಡಿದ ಸಾಧನೆ ಬಗ್ಗೆ ಕೇಳಿದ್ರೆ ಅಚ್ಚರಿಯಾಗ್ತೀರಿ!

ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಗೀಳಿಗೆ ಬಿದ್ದು ಬಾಲ್ಯವನ್ನು ಹಾಳುಮಾಡಿಕೊಳ್ಳುತ್ತಿರುವಾಗ, ಬಾಲಕ ಓಂನ ಶ್ರದ್ಧೆ, ಶ್ರಮ ಮತ್ತು ಸಾಧನೆ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *