Headlines

ಶಿರಾಡಿಘಾಟ್‌ನಲ್ಲಿ ಭೂಕುಸಿತ ತಡೆಗೆ ‘ಸಾಯಿಲ್ ನೈಲಿಂಗ್’! ಹೊಸ ತಾಂತ್ರಿಕ ಕಾಮಗಾರಿ ಶುರು – Kannada News | Soil Nailing Technology Introduced to Prevent Shiradi Ghat Landslides on Bengaluru Mangaluru highway NH 75 in Karnataka

ಬೆಂಗಳೂರು, ಜುಲೈ 13: ಬೆಂಗಳೂರು–ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-75 ರಾಜ್ಯದ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿ, ವಿಶೇಷವಾಗಿ ಹಾಸನ ಜಿಲ್ಲೆಯ ಸಕಲೇಶಪುರದಿಂದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಗುಂಡ್ಯವರೆಗೆ ವ್ಯಾಪಿಸಿರುವ ಶಿರಾಡಿ ಘಾಟ್ (Shiradi Ghat) ಪ್ರದೇಶದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಭೂಕುಸಿತದಿಂದ ತೀವ್ರ ಸಮಸ್ಯೆ ಎದುರಾಗುತ್ತದೆ. ಕಳೆದ ಹಲವು ವರ್ಷಗಳಿಂದ ಮಳೆ ಬಂದಾಗ ರಸ್ತೆ ಸಂಚಾರ ಅಸ್ತವ್ಯಸ್ತವಾಗುವುದು ಸಾಮಾನ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಭೂಕುಸಿತ ನಿಯಂತ್ರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ತಾಂತ್ರಿಕ ವಿಧಾನವನ್ನು ಅಳವಡಿಸಿಕೊಂಡಿದೆ.

ಹೇಗೆ ಮಾಡುತ್ತಾರೆ ಸಾಯಿಲ್ ನೈಲಿಂಗ್?

ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಗುಡ್ಡಗಳ ಇಳಿಜಾರು ಪ್ರದೇಶಗಳಲ್ಲಿ ಸಾಯಿಲ್ ನೈಲಿಂಗ್ ತಂತ್ರಜ್ಞಾನ ಬಳಸಲಾಗುತ್ತದೆ. ಇಂಥ ಪ್ರದೇಶಗಳಲ್ಲಿ ಸುಮಾರು 12 ಮೀಟರ್ (36 ಅಡಿ) ಆಳದ ರಂಧ್ರಗಳನ್ನು ಕೊರೆಯಲಾಗುತ್ತದೆ. ಎರಡು ಅಡಿ ಅಂತರದಲ್ಲಿ ರಂಧ್ರಗಳನ್ನು ನಿರ್ಮಿಸಿ, ಸುಮಾರು 37 ಅಡಿ ಉದ್ದದ ಕಬ್ಬಿಣದ ಸರಳುಗಳನ್ನು ಅಳವಡಿಸಲಾಗುತ್ತದೆ. ಬಳಿಕ ಅವುಗಳನ್ನು ಸಿಮೆಂಟ್ ಮೂಲಕ ಭದ್ರಪಡಿಸಿ, ಕಬ್ಬಿಣದ ಜಾಲರಿಯನ್ನು ಅಳವಡಿಸಲಾಗುತ್ತದೆ. ಅದರ ಮೇಲೆ ಹೈಡ್ರೋ ಮಲ್ಚಿಂಗ್ ತಂತ್ರದ ಮೂಲಕ ಹುಲ್ಲಿನ ಬೀಜಗಳನ್ನು ಬಿತ್ತನೆ ಮಾಡಿ, ಗುಡ್ಡದ ಮೇಲ್ಮೈಯಲ್ಲಿ ಹುಲ್ಲು ಬೆಳೆಯುವಂತೆ ಮಾಡುವ ಮೂಲಕ ಮಣ್ಣಿನ ಸವೆತ ಮತ್ತು ಭೂಕುಸಿತವನ್ನು ತಡೆಯುವ ಯೋಜನೆ ರೂಪಿಸಲಾಗಿದೆ.

ಶಿರಾಡಿ ಘಾಟ್ ಪ್ರದೇಶದ ಭೂಕುಸಿತಕ್ಕೆ ಕಾರಣ ಏನು?

ಸಕಲೇಶಪುರದಿಂದ ಮಾರನಹಳ್ಳಿವರೆಗಿನ ಚತುಷ್ಪಥ ರಸ್ತೆ ನಿರ್ಮಾಣದ ವೇಳೆ ಗುಡ್ಡಗಳನ್ನು ಅಗೆದಿರುವುದೇ ಭೂಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಮಣ್ಣು ಮೆದುವಾಗಿರುವುದರಿಂದ ಮಳೆಗಾಲದಲ್ಲಿ ಮಣ್ಣು ಸಡಿಲಗೊಂಡು ಕುಸಿಯುವ ಅಪಾಯ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಭೂಕುಸಿತದ ಅಪಾಯ ಹೆಚ್ಚಿರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಾಯಿಲ್ ನೈಲಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಎಲ್ಲೆಲ್ಲಿ ಸಾಯಿಲ್ ನೈಲಿಂಗ್?

ಸಕಲೇಶಪುರ–ಮಾರನಹಳ್ಳಿ ಮಾರ್ಗದ ಕಪ್ಪಳ್ಳಿ, ದೊಡ್ಡತಪ್ಲು, ಹೆಗ್ಗದ್ದೆ ಸೇರಿದಂತೆ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಇದು ಯಶಸ್ವಿಯಾದರೆ ಶಿರಾಡಿಘಾಟ್‌ನಲ್ಲಿ ಮಳೆಗಾಲದ ಭೂಕುಸಿತದ ಆತಂಕ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತ ಭೀತಿ: ದೊಡ್ಡತಪ್ಲು ಬಳಿ ಮುಗಿಯದ ಕಾಮಗಾರಿ, ಪ್ರವಾಸಿಗರಿಗೆ ತಾಲೂಕು ಆಡಳಿತದ ಎಚ್ಚರಿಕೆ

ಶಿರಾಡಿಘಾಟ್ ಮಾರ್ಗವು ದಕ್ಷಿಣ ಕನ್ನಡ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವು ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ಆದ್ದರಿಂದ ಈ ಮಾರ್ಗದಲ್ಲಿ ಸುರಕ್ಷಿತ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಹೊಸ ತಂತ್ರಜ್ಞಾನದಿಂದ ಭೂಕುಸಿತ ನಿಯಂತ್ರಣ ಸಾಧ್ಯವಾದರೆ ಸಾವಿರಾರು ವಾಹನ ಸವಾರರಿಗೆ ನಿರಾಳ ಪ್ರಯಾಣ ಸಾಧ್ಯವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *