ಶಿವಮೊಗ್ಗ, ಜೂ.4: ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಇಂದು ಭೀಕರ ದುರಂತವೊಂದು ನಡೆದಿದೆ. ಚಲಿಸುತ್ತಿದ್ದ ಬೈಕ್ ಮೇಲೆ ಒಣಮರದ ರೆಂಬೆಯೊಂದು ಮುರಿದು ಬಿದ್ದ ಪರಿಣಾಮ 26 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಮತ್ತೊಬ್ಬ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ. ಹೊಸನಗರ ತಾಲೂಕಿನ ತಾರಿಗ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮದ ನಿವಾಸಿ ಸಂತೋಷ್ (26) ಮೃತಪಟ್ಟ ದುರ್ದೈವಿ. ಬೈಕ್ನಲ್ಲಿದ್ದ ಮತ್ತೊಬ್ಬ ಯುವಕ ವೀರಭದ್ರ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಮೃತ ಸಂತೋಷ್ ಹಾಗೂ ವೀರಭದ್ರ ಇಬ್ಬರೂ ಮೀನು ಹಿಡಿಯಲು ಬೇಕಾದ ಉಕ್ಕಡವನ್ನು ಬೈಕ್ನಲ್ಲಿ ಹೊತ್ತುಕೊಂಡು ಶಿವಮೊಗ್ಗ ತಾಲೂಕಿನ ಚೋರಡಿಯಿಂದ ರಿಪ್ಪನ್ಪೇಟೆ ಮಾರ್ಗವಾಗಿ ತಾರಿಗ ಗ್ರಾಮಕ್ಕೆ ಹೊರಟಿದ್ದರು. ಇವರು ತಾರಿಗ ರಸ್ತೆಯಲ್ಲಿ ಸಾಗುತ್ತಿದ್ದಾಗ, ರಸ್ತೆ ಬದಿಯಲ್ಲಿದ್ದ ಸುಮಾರು 50 ಅಡಿ ಎತ್ತರದ ಒಣಮರದ ದೊಡ್ಡ ರೆಂಬೆಯೊಂದು ಏಕಾಏಕಿ ಇವರ ಬೈಕ್ ಮೇಲೆ ಮುರಿದು ಬಿದ್ದಿದೆ. ಮರದ ರೆಂಬೆ ಬಿದ್ದ ರಭಸಕ್ಕೆ ಬೈಕ್ ಸಂಪೂರ್ಣ ನಿಯಂತ್ರಣ ತಪ್ಪಿ ರಸ್ತೆಗೆ ಅಪ್ಪಳಿಸಿದೆ.
ಇದನ್ನೂ ಓದಿ: ರಾಜಾಜಿನಗರದಲ್ಲಿ ಅವಘಡ: ಚಲಿಸುತ್ತಿದ್ದ ಬೈಕ್ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಘಟನೆಯಿಂದಾಗಿ ಸಂತೋಷ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಿಪ್ಪನ್ಪೇಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತ ಸಂತೋಷ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಪ್ಪನ್ಪೇಟೆ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಬೆಂಗಳೂರಿನಲ್ಲಿ ಮರದ ಕೊಂಬೆ ಬಿದ್ದು ವ್ಯಕ್ತಿಗೆ ಗಂಭೀರ ಗಾಯ:
ರಾಜಾಜಿನಗರದ ರಾಮಮಂದಿರ ರಸ್ತೆಯಲ್ಲಿ ಭೀಕರ ದುರಂತವೊಂದು ಜೂನ 26ರಂದು ಸಂಭವಿಸಿತ್ತು. ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಬೈಕ್ನಲ್ಲಿ ತೆರಳುತ್ತಿದ್ದ 50 ವರ್ಷದ ಸುರೇಶ್ ಎಂಬ ಸವಾರನ ಮೇಲೆ ಒಣಗಿದ ದೊಡ್ಡ ಮರದ ಕೊಂಬೆಯೊಂದು ಏಕಾಏಕಿ ಮುರಿದು ಬಿದ್ದಿತ್ತು. ಕೊಂಬೆ ಬಿದ್ದ ರಭಸಕ್ಕೆ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ರಸ್ತೆಗೆ ಉರುಳಿದ ಸುರೇಶ್ ಅವರು ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದರು. ಯಶವಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ