
ಸಾಮಾನ್ಯವಾಗಿ ಶ್ರೀ ಕೃಷ್ಣ ಪರಮಾತ್ಮನಿಗೆ 16,000 ಗೋಪಿಕಾ ಸ್ತ್ರೀಯರು ಇದ್ದರು ಎಂಬ ಮಾತು ಕೇಳಿಬರುತ್ತದೆ. ಈ ಬಗ್ಗೆ ಟಿವಿ9 ನಿತ್ಯಭಕ್ತ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಕೃಷ್ಣನಿಗೆ 16000 ಪತ್ನಿಯರಿದ್ದರು ಎಂಬ ವಿಚಾರ ನಿಜವೇ ಎಂಬ ಪ್ರಶ್ನೆಗೆ ಧರ್ಮಶಾಸ್ತ್ರಗಳು ಸ್ಪಷ್ಟ ಉತ್ತರ ನೀಡುತ್ತವೆ ಎಂದು ಅವರು ಹೇಳಿದ್ದಾರೆ. ಶ್ರೀಕೃಷ್ಣನು ನರಕಾಸುರನನ್ನು ಸಂಹಾರ ಮಾಡಿದಾಗ, ಆತನ ಸೆರೆಯಲ್ಲಿದ್ದ 16,000 ಸ್ತ್ರೀಯರು ಬಂಧಮುಕ್ತರಾದರು. ಈ ಮಹಿಳೆಯರು ವಿವಿಧ ದೇಶಗಳ ಮೂಲೆಗಳಿಂದ ಸೆರೆಹಿಡಿಯಲ್ಪಟ್ಟವರಾಗಿದ್ದರು. ನರಕಾಸುರನ ಬಂಧನದಿಂದ ಮುಕ್ತರಾದಾಗ, ಸಮಾಜದಲ್ಲಿ ತಮ್ಮ ರಕ್ಷಣೆ ಮತ್ತು ಗೌರವದ ಕುರಿತು ಆತಂಕಗೊಂಡರು. ಶ್ರೀ ಕೃಷ್ಣನು ಅವರ ಜವಾಬ್ದಾರಿಯನ್ನು ಹೊತ್ತುಕೊಂಡನು. ಸಮಾಜದಲ್ಲಿ ಅಪಮಾನದಿಂದ ಅವರನ್ನು ರಕ್ಷಿಸಲು, ಶ್ರೀ ಕೃಷ್ಣನು ‘ನೀವು ನನ್ನ ಹೆಸರು ಹೇಳಿಕೊಳ್ಳಿ’ ಎಂದು ಅವರಿಗೆ ಧೈರ್ಯ ತುಂಬಿದನು. ಇದರರ್ಥ, ಭಗವಾನ್ ಕೃಷ್ಣನು ಅವರಿಗೆ ರಾಜನಂತೆ ಆಶ್ರಯ, ರಕ್ಷಣೆ ಮತ್ತು ಗೌರವ ನೀಡಿದನೇ ಹೊರತು, ಅವರನ್ನು ವಿವಾಹವಾಗಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ. ಕೃಷ್ಣ ಅವರನ್ನು ಪ್ರಜೆಯಂತೆ ನೋಡಿಕೊಂಡನು, ಅವರಿಗೆ ಜೀವನಕ್ಕೆ ಅನುಕೂಲ ಮಾಡಿಕೊಟ್ಟನು ಮತ್ತು ಅನಾಥ ರಕ್ಷಕನಾಗಿ, ದೀನಬಂಧುವಾಗಿ ನಿಂತನು ಎದು ಗುರೂಜಿ ಹೇಳಿದ್ದಾರೆ. ಈ ಮೂಲಕ ಈ ವಿಷಯದಲ್ಲಿರುವ ಗೊಂದಲವನ್ನು ದೂರ ಮಾಡುವುದು ಸೂಕ್ತ ಎಂದು ಅವರು ಹೇಳಿದ್ದಾರೆ.