ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜು (Shreyas Manju) ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ‘ಪಡ್ಡೆಹುಲಿ’ ಸಿನಿಮಾ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಅವರು ಪ್ರತಿ ಸಿನಿಮಾದಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ. ಈಗ ಶ್ರೇಯಸ್ ಮಂಜು ಅವರು ‘ದಿಲ್ದಾರ್’ (Dildar) ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡುತ್ತಿದ್ದಾರೆ.
ಇದು ಪಕ್ಕಾ ಮಾಸ್ ಸಿನಿಮಾ:
ಮಧು ಗೌಡ ಗಂಗೂರ್ ಅವರು ‘ದಿಲ್ದಾರ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಡಿ ಬೀಟ್ಸ್ ಮ್ಯೂಸಿಕ್ ವರ್ಲ್ಡ್’ ಮೂಲಕ ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದೆ. ‘ದಿಲ್ದಾರ್’ ಎಂಬ ಶೀರ್ಷಿಕೆಗೆ ‘ಒನ್ ಮ್ಯಾನ್ ಆರ್ಮಿ’ ಎಂಬ ಟ್ಯಾಗ್ ಲೈನ್ ಇದೆ. ಆ ಮೂಲಕ ಇದು ಪಕ್ಕಾ ಮಾಸ್ ಸಿನಿಮಾ ಎಂಬುದನ್ನು ಸೂಚಿಸಲಾಗಿದೆ. ಇದನ್ನು ನೋಡಿದರೆ ಕಥಾವಸ್ತು ಬಗ್ಗೆ ಕೌತುಕ ಮೂಡುತ್ತದೆ.
ಪ್ರೇಕ್ಷಕರಿಂದ ಪಾಸಿಟಿವ್ ಕಮೆಂಟ್ಸ್:
ಈ ಮೊದಲಿನ ಸಿನಿಮಾಗಳಲ್ಲಿ ಕೂಡ ಶ್ರೇಯಸ್ ಮಂಜು ಅವರು ಮಾಸ್ ಪಾತ್ರಗಳನ್ನು ಮಾಡಿದ್ದರು. ಆದರೆ ಈಗ ‘ದಿಲ್ದಾರ್’ ಸಿನಿಮಾದಲ್ಲಿ ಮತ್ತೊಂದು ಹಂತಕ್ಕೆ ಅವರು ಏರಿದಂತಿದೆ. ಮಾಸ್ ಗೆಟಪ್ ಮಾತ್ರವಲ್ಲದೇ ಮಾಸ್ ಡೈಲಾಗ್ ಕೂಡ ಈ ಟೀಸರ್ನಲ್ಲಿದೆ. ಟೀಸರ್ ನೋಡಿದ ಪ್ರೇಕ್ಷಕರಿಂದ ಪಾಸಿಟಿವ್ ಕಮೆಂಟ್ಗಳು ಬರುತ್ತಿವೆ. ಸದ್ಯಕ್ಕೆ ಕಥೆಯ ಬಗ್ಗೆ ಚಿತ್ರತಂಡ ಸುಳಿವು ನೀಡಿಲ್ಲ.
‘ದಿಲ್ದಾರ್’ ಸಿನಿಮಾ ಮೇಲೆ ಕೌತುಕ ಹೆಚ್ಚಿಸುವಲ್ಲಿ ಈ ಫಸ್ಟ್ ಲುಕ್ ಟೀಸರ್ ಯಶಸ್ವಿ ಆಗಿದೆ. ‘ಏನ್ಸಿಯಂಟ್ ಮೂವೀಸ್’ ಬ್ಯಾನರ್ ಮೂಲಕ ಆರ್. ಸಂತೋಷ್ ಕುಮಾರ್ (ಎಸ್ವಿಟಿ) ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ ಈ ಸಿನಿಮಾದ ಚಿತ್ರೀಕರಣ ಮುಕ್ತಾಯ ಆಗಿದೆ. ಸಿನಿಮಾ ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಶ್ರೇಯಸ್ ಮಂಜು ನಟನೆಯ ‘ದಿಲ್ ದಾರ್’ ಚಿತ್ರಕ್ಕೆ ಶರಣ್ ಸೊಸೆ ಕೀರ್ತಿ ಕೃಷ್ಣ ನಾಯಕಿ
ಪಾತ್ರವರ್ಗದಲ್ಲಿ ಯಾರೆಲ್ಲ ಇದ್ದಾರೆ?
ಖ್ಯಾತ ನಟ ಶರಣ್ ಅವರ ತಂಗಿ ಮಗಳಾದ ಕೀರ್ತಿ ಕೃಷ್ಣ ಅವರು ‘ದಿಲ್ದಾರ್’ ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಸಾಧು ಕೋಕಿಲ, ಚಂದ್ರಪ್ರಭ, ಚಿಲ್ಲರ್ ಮಂಜು, ಕಾರ್ತಿಕ್, ಆಂಡ್ರೋ ಅವಿನಾಶ್, ಭಜರಂಗಿ ಲೋಕಿ, ಅರ್ಪಿತ್ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಹರೇಕೃಷ್ಣ ರೆಡ್ಡಿ ಎಸ್. ಅವರು ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.