IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 48ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 155 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಸ್ಯಾಮ್ಸನ್ 52 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 7 ಫೋರ್ಗಳೊಂದಿಗೆ ಅಜೇಯ 87 ರನ್ ಬಾರಿಸಿದರು. ಈ ಮೂಲಕ ಸಿಎಸ್ಕೆ ತಂಡವನ್ನು 17.3 ಓವರ್ಗಳಲ್ಲಿ ಗೆಲುವಿ ಗುರಿ ಮುಟ್ಟಿಸಿದರು. ಈ ಭರ್ಜರಿ ಬ್ಯಾಟಿಂಗ್ಗೆ ಸಂಜು ಸ್ಯಾಮ್ಸನ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಒಲಿಯಿತು.
ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, ಉತ್ತಮ ವಾಗಿ ಬ್ಯಾಟಿಂಗ್ ಮಾಡಿರುವುದು ಖುಷಿ ನೀಡಿದೆ. ಅದರಲ್ಲೂ ಸಿಎಸ್ಕೆ ತಂಡ ಗೆದ್ದಿರುವುದು ಸಂತಸ ತಂದಿದೆ ಎಂದರು. ಇತ್ತ ಸಂಜು ಮಾತನಾಡುತ್ತಿದ್ದಂತೆ ಅತ್ತ ಸ್ಟೇಡಿಯಂನಲ್ಲಿ ಚೇಟ್ಟಾ ಘೋಷವಾಕ್ಯ ಮೊಳಗಲಾರಂಭಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಸಂಜು ಸ್ಯಾಮ್ಸನ್, ಜನರು ನನ್ನನ್ನು ಪ್ರೀತಿಯಿಂದ ಚೇಟ್ಟಾ ಎಂದು ಕರೆಯುತ್ತಿದ್ದಾರೆ. ಆದರೆ ವೈಯಕ್ತಿಕವಾಗಿ ನನಗೆ ‘ಸಂಜು’ ಎಂದು ಕರೆಸಿಕೊಳ್ಳುವುದೇ ಹೆಚ್ಚು ಇಷ್ಟ ಎಂದರು.
ಇನ್ನು ಮೈದಾನದಲ್ಲಿ ಸಂಜು ಸ್ಯಾಮ್ಸನ್ ಅವರ ಶಾಂತ ಸ್ವಭಾವದ ಬಗ್ಗೆ ಕೇಳಿದಾಗ, “ನಾನು ಯಾವಾಗಲೂ ಹೀಗೆಯೇ ಇರುತ್ತೇನೆ. ಈಗ ನಾನು ಹೆಚ್ಚು ಸಮಯ ಕ್ರೀಸ್ನಲ್ಲಿ ಇರುವುದರಿಂದ ಜನರಿಗೆ ನಾನು ತುಂಬಾ ಶಾಂತವಾಗಿ ಕಾಣಿಸುತ್ತಿದ್ದೇನೆ. ಪಂದ್ಯ ಆಡದೆ ಹೊರಗಿದ್ದಾಗಲೂ ನಾನು ಅಷ್ಟೇ ಶಾಂತವಾಗಿರುತ್ತೇನೆ” ಎಂದು ನಗೆ ಬೀರಿದರು.
ಅಲ್ಲದೆ, ಕಳೆದ 3-5 ವರ್ಷಗಳಿಂದ ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ಸಣ್ಣ ತಾಂತ್ರಿಕ ಬದಲಾವಣೆಗಳನ್ನು ಮಾಡಿಕೊಂಡಿರುವುದು ರನ್ ಗಳಿಸಲು ಸಹಕಾರಿಯಾಗಿದೆ ಎಂದು ಇದೇ ವೇಳೆ ಸಂಜು ಸ್ಯಾಮ್ಸನ್ ತಿಳಿಸಿದ್ದಾರೆ.
ಸಂಜು ಸ್ಯಾಮ್ಸನ್ ಸ್ವಾರ್ಥಿನಾ?
ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ಗೆ ಶತಕ ಬಾರಿಸುವ ಎಲ್ಲಾ ಅವಕಾಶಗಳಿದ್ದವು. ಆದರೆ ಅವರು ವೈಯಕ್ತಿಕ ಮೈಲಿಗಲ್ಲಿಗೆ ಆಸೆ ಪಡಲಿಲ್ಲ. “ಶತಕಗಳು ಯಾವಾಗಲೂ ವಿಶೇಷವೇ. ಆದರೆ ಅದನ್ನು ಪಡೆಯಲು ನಾನು ನಿಸ್ವಾರ್ಥ ಆಟವನ್ನು ಬಿಟ್ಟು ಸ್ವಾರ್ಥಿಯಾಗಬೇಕಿತ್ತು. ನನ್ನ ಜೊತೆಗಾರ ಕಾರ್ತಿಕ್ ಶರ್ಮಾ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು.
‘ನನಗೆ ಒಂದು ಸಿಂಗಲ್ ಕೊಡು, ನಾನು ಶತಕ ಪೂರೈಸುತ್ತೇನೆ’ ಎಂದು ಅವರಿಗೆ ಹೇಳಲು ನನ್ನ ಮನಸ್ಸು ಒಪ್ಪಲಿಲ್ಲ. ಪಂದ್ಯವನ್ನು ಗೆಲ್ಲಿಸುವುದು ಮತ್ತು ಅಜೇಯನಾಗಿ ಉಳಿಯುವುದು ಶತಕಕ್ಕಿಂತ ಹೆಚ್ಚಿನ ತೃಪ್ತಿ ನೀಡುತ್ತದೆ” ಎಂದು ಹೇಳುವ ಮೂಲಕ ಸಂಜು ಸ್ಯಾಮ್ಸನ್ ತಾನೆಂತಹ ನಿಸ್ವಾರ್ಥಿ ಎಂಬುದನ್ನು ತೆರೆದಿಟ್ಟಿದ್ದಾರೆ.
ಈ ಪಂದ್ಯದಲ್ಲಿ ಅಜೇಯ 87 ರನ್ ಬಾರಿಸಿದ್ದ ಸಂಜು ಸ್ಯಾಮ್ಸನ್ ಮನಸ್ಸು ಮಾಡಿದ್ದರೆ ಶತಕ ಪೂರೈಸಬಹುದಿತ್ತು. ಆದರೆ ಶತಕದತ್ತ ಮುಖ ಮಾಡದೇ ಸಂಜು ಕೊನೆಯ ಹಂತದಲ್ಲಿ ಕಾರ್ತಿಕ್ ಶರ್ಮಾಗೆ ಹೆಚ್ಚಿನ ಸ್ಟ್ರೈಕ್ ನೀಡಿದ್ದರು. ಅವರ ಈ ನಡೆಗೆ ಇದೀಗ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಸಂಜು, “ಪವರ್ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳದೆ ನಿಧಾನವಾಗಿ ಆಡಿದರೂ ಪರವಾಗಿಲ್ಲ, ಮಧ್ಯಮ ಓವರ್ಗಳಲ್ಲಿ ಸ್ಪಿನ್ನರ್ಗಳ ವಿರುದ್ಧ ಅಬ್ಬರಿಸಿ ಪಂದ್ಯವನ್ನು ನಮ್ಮತ್ತ ತಿರುಗಿಸಬಹುದು ಎಂಬ ನಂಬಿಕೆ ನನಗಿತ್ತು. ನನ್ನ ಆಟದ ಯೋಜನೆ ಸ್ಪಷ್ಟವಾಗಿತ್ತು ಮತ್ತು ಅದು ಇಂದು ಕೈಹಿಡಿಯಿತು” ಎಂದರು.
ಇದನ್ನೂ ಓದಿ: IPL 2026: ಪ್ಲೇಆಫ್ಗೇರಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು? ಇಲ್ಲಿದೆ ಮಾಹಿತಿ
ಸಂಜು ಸ್ಯಾಮ್ಸನ್ ಅವರ ಈ ಯೋಜಿತ ಬ್ಯಾಟಿಂಗ್ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಸಿಎಸ್ಕೆ ತಂಡದ ಪ್ಲೇಆಫ್ ಆಸೆ ಕೂಡ ಜೀವಂತವಾಗಿದೆ. ಅಂದರೆ ಮುಂದಿನ 4 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇಆಫ್ ಆಡುವುದು ಬಹುತೇಕ ಖಚಿತ.
