Headlines

ಸಂಶೋಧಕರ ಹೆಜ್ಜೆಸದ್ದು ಕೇಳ್ಬೇಕಿದ್ದ ಜಾಗದಲ್ಲಿ ಅನೈತಿಕ ಚಟುವಟಿಕೆ: ಬೆಳಪು ಗ್ರಾಮೀಣ ವಿದ್ಯಾರ್ಥಿಗಳ ಕನಸು ಭಗ್ನ – Kannada News | Kaup Belapu Project: 10 Years, Crores Wasted on Unfinished Research Centre

ಕಾಪು, ಜು.21: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಹೊಸ ದಾರಿ ತೋರಿಸಬೇಕಿದ್ದ ಮತ್ತು ವಿಶ್ವಮಟ್ಟದ ವಿಜ್ಞಾನ ಸಂಶೋಧನೆ ನಡೆಸುವ ಉದ್ದೇಶದಿಂದ ಆರಂಭಗೊಂಡ ಮಹತ್ವಾಕಾಂಕ್ಷಿ ಯೋಜನೆಯೊಂದು ಇಂದು ಆಡಳಿತಗಾರರ ನಿರ್ಲಕ್ಷ್ಯಕ್ಕೆ ಸಿಲುಕಿ ಅನಾಥವಾಗಿ ನಿಂತಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಹಾಗೂ ವಿಜ್ಞಾನ ಸಂಶೋಧನಾ ಕೇಂದ್ರದ ಕಾಮಗಾರಿ ಆರಂಭವಾಗಿ 10 ವರ್ಷಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ.

ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ತಲೆಎತ್ತಿರುವ ಬೃಹತ್ ಕಟ್ಟಡಗಳು ಇಂದು ನಿರ್ವಹಣೆಯಿಲ್ಲದೆ ಪಾಳುಬೀಳುತ್ತಿದ್ದು, ಸಾರ್ವಜನಿಕರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಗ್ರಾಮೀಣ ಭಾಗದ ಯುವಜನತೆಗೆ ಅತ್ಯಾಧುನಿಕ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ 2015ರ ಮೇ 4ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಒಟ್ಟು ಈ ಜಾಗ 24.26 ಎಕರೆ ಸರ್ಕಾರಿ ಜಮೀನಲ್ಲಿದೆ. ಈ ಯೋಜನೆ 141.08 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೊದಲ ಹಂತದಲ್ಲಿ ರೂಸಾ ಯೋಜನೆಯಡಿ 44.92 ಕೋಟಿ ರೂ. ವೆಚ್ಚದಲ್ಲಿ 9 ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.

ಕೆಲಸ ಶೇ.85ರಷ್ಟು ಮುಗಿದಿದ್ದರೂ ಬಳಕೆಗೆ ಬಾರದ ಕ್ಯಾಂಪಸ್:

ಕ್ಯಾಂಪಸ್‌ನಲ್ಲಿ ಆಡಳಿತ ಸೌಧ, ವಿಜ್ಞಾನ ಬ್ಲಾಕ್, ಸಂಶೋಧನಾ ಕೇಂದ್ರ, ಅತಿಥಿಗೃಹ, ವಸತಿ ಗೃಹಗಳು, ರಸ್ತೆ, ಚರಂಡಿ ಹಾಗೂ ಬೃಹತ್ ನೀರಿನ ಟ್ಯಾಂಕ್‌ಗಳ ನಿರ್ಮಾಣ ಕಾಮಗಾರಿ ಶೇ. 80 ರಿಂದ 85ರಷ್ಟು ಪೂರ್ಣಗೊಂಡಿದೆ. ಆದರೆ, ವೈರಿಂಗ್, ಪ್ಲಂಬಿಂಗ್, ಪೇಂಟಿಂಗ್, ವಿದ್ಯುತ್ ಸಂಪರ್ಕ ಹಾಗೂ ಕಾಂಪೌಂಡ್ ನಿರ್ಮಾಣದಂತಹ ಅಂತಿಮ ಹಂತದ ಕೆಲಸಗಳು ಆಮೆ ವೇಗದಲ್ಲಿ ಸಾಗುತ್ತಿರುವುದರಿಂದ ಕಟ್ಟಡಗಳನ್ನು ಸಾರ್ವಜನಿಕ ಸೇವೆಗೆ ಹಸ್ತಾಂತರಿಸಲು ಸಾಧ್ಯವಾಗಿಲ್ಲ.

ಕಿಡಿಗೇಡಿಗಳ ಅಡ್ಡ, ಬೀದಿ ನಾಯಿಗಳ ಆಶ್ರಯ ತಾಣ:

ಸಂಶೋಧಕರು ಹಾಗೂ ಸಾವಿರಾರು ವಿದ್ಯಾರ್ಥಿಗಳ ಹೆಜ್ಜೆಸದ್ದಿನಿಂದ ಕಂಗೊಳಿಸಬೇಕಿದ್ದ ಈ ಬೃಹತ್ ಕ್ಯಾಂಪಸ್ ಇಂದು ಸಂಪೂರ್ಣ ನಿರ್ಜನವಾಗಿದೆ. ಸರಿಯಾದ ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ದುಷ್ಕರ್ಮಿಗಳು ಕಟ್ಟಡದ ಕಿಟಕಿ ಗಾಜುಗಳನ್ನು ಕಲ್ಲಿನಿಂದ ಹೊಡೆದು ಪುಡಿಪುಡಿ ಮಾಡಿದ್ದಾರೆ. ಕಟ್ಟಡದ ಜಗಲಿ ಹಾಗೂ ಆವರಣಗಳು ಬೀದಿ ನಾಯಿಗಳ ವಾಸಸ್ಥಾನವಾಗಿ ಬದಲಾಗಿವೆ. ರಾತ್ರಿ ವೇಳೆಯಲ್ಲಿ ಕೆಲ ಕಿಡಿಗೇಡಿಗಳು ಈ ಅರೆಬರೆ ಕಟ್ಟಡಗಳನ್ನು ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳಿಗೆ ಅಡ್ಡೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕಾರವಾರ: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಆರೋಗ್ಯ ಇಲಾಖೆ ವಸತಿಗೃಹಗಳು; ಮಜಾ ಮಾಡಲು ಹುಡುಗ-ಹುಡುಗಿಯರು ಬರ್ತಾರೆ

ಅನುದಾನ ದುರ್ಬಳಕೆ ಆರೋಪ?

ಸರಕಾರದಿಂದ ಮಂಜೂರಾಗಿದ್ದ 38.30 ಕೋಟಿ ರೂ. ಹಣದ ಪೈಕಿ 30.50 ಕೋಟಿ ರೂ. ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ ಎನ್ನಲಾಗಿದೆ. ಆದರೆ, ಉಳಿದ ಸುಮಾರು 8 ಕೋಟಿ ರೂ. ಅನುದಾನವನ್ನು ವಿಶ್ವವಿದ್ಯಾನಿಲಯವು ಇತರ ಯೋಜನೆಗಳಿಗೆ ಬೇರೆಡೆಗೆ ವರ್ಗಾಯಿಸಿ ಬಳಸಿಕೊಂಡಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಕುರಿತು ವಿಶ್ವವಿದ್ಯಾಲಯ ಸ್ಪಷ್ಟನೆ ನೀಡಬೇಕು ಎಂದು ಸ್ಥಳೀಯರು ಪಟ್ಟುಹಿಡಿದಿದ್ದಾರೆ.

“ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕಾಗಿ ರೂಪಿತಗೊಂಡಿದ್ದ ಈ ಕನಸಿನ ಯೋಜನೆ ಹೀಗೆ ಅನಾಥವಾಗಿ ಪಾಳುಬೀಳುತ್ತಿರುವುದು ತೀವ್ರ ನೋವಿನ ಸಂಗತಿ. ವಿಧಾನಸೌಧದಲ್ಲೂ ಹಲವು ಬಾರಿ ಭರವಸೆ ಸಿಕ್ಕರೂ ಫಲಿತಾಂಶ ಶೂನ್ಯ. ಈಗಿನ ಹೊಸ ಸರ್ಕಾರವು ಈ ಯೋಜನೆಗೆ ಆದ್ಯತೆ ನೀಡಿ, ಬಾಕಿ ಉಳಿದ ಸಣ್ಣಪುಟ್ಟ ಕೆಲಸಗಳನ್ನು ತಕ್ಷಣ ಪೂರ್ಣಗೊಳಿಸಿ ಮುಂಬರುವ ಶೈಕ್ಷಣಿಕ ವರ್ಷದಿಂದಲೇ ತರಗತಿಗಳನ್ನು ಆರಂಭಿಸಬೇಕು.” ಎಂದು ಬೆಳಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *