ಸಂಸತ್ ಅಧಿವೇಶನ (ಸಂಗ್ರಹ ಚಿತ್ರ)Image Credit source: PTI
ಬೆಂಗಳೂರು, ಜುಲೈ 19: ಸೋಮವಾರದಿಂದ ಸಂಸತ್ತಿನ ಮುಂಗಾರು ಅಧಿವೇಶನ (Parliment Monsoon Session) ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಬಜೆಟ್ ಅಧಿವೇಶನದ ಸಂಸದರ ಹಾಜರಾತಿ ವಿವರಗಳು ಈಗ ಚರ್ಚೆಗೆ ಗ್ರಾಸವಾಗಿವೆ. ಕರ್ನಾಟಕದ (Karnataka) ಇಬ್ಬರು ಲೋಕಸಭಾ ಸದಸ್ಯರು ಕಳಪೆ ಹಾಜರಾತಿಯಿಂದ ಗಮನ ಸೆಳೆದಿದ್ದು, ಮತ್ತೊಂದೆಡೆ ಕೆಲ ಸಂಸದರು 90 ಪ್ರತಿಶತಕ್ಕೂ ಹೆಚ್ಚು ಹಾಜರಾತಿ ದಾಖಲಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಲಭ್ಯ ಅಂಕಿಅಂಶಗಳ ಪ್ರಕಾರ, ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಧಾಕೃಷ್ಣ ದೊಡ್ಡಮನಿ ಬಜೆಟ್ ಅಧಿವೇಶನದ 31 ಕಲಾಪಗಳಲ್ಲಿ ಒಂದಕ್ಕೂ ಹಾಜರಾಗದೆ ಶೇ 0 ಹಾಜರಾತಿ ದಾಖಲಿಸಿದ್ದಾರೆ. ಈ ಕುರಿತು ಅವರ ಆಪ್ತರು ಪ್ರತಿಕ್ರಿಯಿಸಿ, ಕುಟುಂಬದ ಸದಸ್ಯರೊಬ್ಬರ ಗಂಭೀರ ಅನಾರೋಗ್ಯ ಹಾಗೂ ಸಂಸದರ ಆರೋಗ್ಯ ಸಮಸ್ಯೆಯಿಂದ ಅವರು ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಬೆಳಗಾವಿ ಸಂಸದೆ ಪ್ರಿಯಾಂಕಾ ಸತೀಶ್ ಜಾರಕಿಹೊಳಿ 31 ಕಲಾಪಗಳಲ್ಲಿ 13 ದಿನ ಮಾತ್ರ ಹಾಜರಾಗಿದ್ದು, ಅವರ ಹಾಜರಾತಿ ಶೇ 41.9 ಆಗಿದೆ. ಇದು ಕರ್ನಾಟಕದ ಸಂಸದರ ಪೈಕಿ ಅತ್ಯಂತ ಕಡಿಮೆ ಹಾಜರಾತಿಗಳಲ್ಲಿ ಒಂದಾಗಿದೆ.
ಅತಿಹೆಚ್ಚು ಹಾಜರಾತಿ ಹೊಂದಿರುವ ಸಂಸದರು
ಡಾ. ಸಿ.ಎನ್. ಮಂಜುನಾಥ್ (ಬೆಂಗಳೂರು ಗ್ರಾಮಾಂತರ), ಡಾ. ಕೆ. ಸುಧಾಕರ್ (ಚಿಕ್ಕಬಳ್ಳಾಪುರ) ಮತ್ತು ಶ್ರೇಯಸ್ ಎಂ. ಪಟೇಲ್ (ಹಾಸನ) ಅವರು ಶೇ 90ಕ್ಕಿಂತ ಹೆಚ್ಚು ಹಾಜರಾತಿ ದಾಖಲಿಸಿ ಕರ್ನಾಟಕದ ಅತ್ಯುತ್ತಮ ಹಾಜರಾತಿ ಹೊಂದಿರುವ ಸಂಸದರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ), ರಮೇಶ್ ಜಿಗಜಿಣಗಿ (ವಿಜಯಪುರ) ಮತ್ತು ಕೋಟ ಶ್ರೀನಿವಾಸ ಪೂಜಾರಿ (ಉಡುಪಿ-ಚಿಕ್ಕಮಗಳೂರು) ತಲಾ ಶೇ 87 ಹಾಜರಾತಿ ದಾಖಲಿಸಿದ್ದಾರೆ.
ಪಿ.ಸಿ. ಮೋಹನ್ (ಬೆಂಗಳೂರು ಕೇಂದ್ರ) ಹಾಗೂ ಮಲ್ಲೇಶ್ ಬಾಬು (ಕೋಲಾರ) ಶೇ 83.8 ಹಾಜರಾತಿ ದಾಖಲಿಸಿದ್ದು, ಜಗದೀಶ್ ಶೆಟ್ಟರ್ (ಬೆಳಗಾವಿ) ಮತ್ತು ಕುಮಾರ್ ನಾಯಕ್ (ರಾಯಚೂರು) ಶೇ 80.6 ಹಾಜರಾತಿಯೊಂದಿಗೆ ಮುಂದಿದ್ದಾರೆ.
ಇನ್ನು ಯದುವೀರ್ ಕೃಷ್ಣದತ್ತ ಒಡೆಯರ್ (ಮೈಸೂರು-ಕೊಡಗು) ಮತ್ತು ಸಾಗರ್ ಖಂಡ್ರೆ (ಬೀದರ್) ಶೇ 74 ಹಾಜರಾತಿ ದಾಖಲಿಸಿದ್ದಾರೆ. ಬಸವರಾಜ ಬೊಮ್ಮಾಯಿ (ಹಾವೇರಿ) ಹಾಗೂ ಡಾ. ಪ್ರಭಾ ಮಲ್ಲಿಕಾರ್ಜುನ್ (ದಾವಣಗೆರೆ) ಶೇ 67.7, ಸುನೀಲ್ ಬೋಸ್ (ಚಾಮರಾಜನಗರ) ಶೇ 64.5, ಬಿ.ವೈ. ರಾಘವೇಂದ್ರ (ಶಿವಮೊಗ್ಗ) ಮತ್ತು ಗೋವಿಂದ ಕಾರಜೋಳ (ಚಿತ್ರದುರ್ಗ) ಶೇ 61, ಇ. ತುಕಾರಾಂ (ಬಳ್ಳಾರಿ) ಹಾಗೂ ರಾಜಶೇಖರ್ ಹಿಟ್ನಾಳ್ (ಕೊಪ್ಪಳ) ಶೇ 58 ಹಾಜರಾತಿ ದಾಖಲಿಸಿದ್ದಾರೆ.
ಶೇ 90ರ ಮೇಲ್ಪಟ್ಟು ಹಾಜರಾತಿಯುಳ್ಳ ಸಂಸದರ ಸಂಖ್ಯೆ ಶೇ 50ಕ್ಕೂ ಕಡಿಮೆ!
ದೇಶವ್ಯಾಪಿ ಅಂಕಿಅಂಶಗಳ ಪ್ರಕಾರ, ಲೋಕಸಭೆಯ ಶೇ 45.76 ಸದಸ್ಯರು ಮಾತ್ರ ಶೇ 90ರಿಂದ 100ರಷ್ಟು ಹಾಜರಾತಿ ದಾಖಲಿಸಿದ್ದು, ಶೇ 75ಕ್ಕಿಂತ ಹೆಚ್ಚು ಹಾಜರಾತಿ ಹೊಂದಿರುವ ಸದಸ್ಯರ ಪ್ರಮಾಣ ಶೇ 63.98 ಆಗಿದೆ. ಮುಂಗಾರು ಅಧಿವೇಶನದಲ್ಲಿ ಪ್ರಮುಖ ಮಸೂದೆಗಳು ಮತ್ತು ಆರ್ಥಿಕ ವಿಷಯಗಳ ಚರ್ಚೆ ನಡೆಯಲಿರುವ ಹಿನ್ನೆಲೆಯಲ್ಲಿ ಸಂಸದರ ಹಾಜರಾತಿ ಮತ್ತೊಮ್ಮೆ ಚರ್ಚೆಯ ವಿಷಯವಾಗುವ ಸಾಧ್ಯತೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
