ಸಕಲ ಸರ್ಕಾರಿ ಗೌರವದೊಂದಿಗೆ ನಾಳೆ ಚೆನ್ನಮ್ಮ ಅಂತ್ಯಕ್ರಿಯೆImage Credit source: Tv9 Kannada
ಬೆಂಗಳೂರು, ಜುಲೈ 19: ಅನಾರೋಗ್ಯದಿಂದ ನಿನ್ನೆ (ಜುಲೈ 18) ವಿಧಿವಶರಾಗಿರುವ ಮಾಜಿ ಪ್ರಧಾನಮಂತ್ರಿ ಹೆಚ್. ಡಿ. ದೇವೇಗೌಡರ ಪತ್ನಿ ಚೆನ್ನಮ್ಮನವರ ಅಂತ್ಯಕ್ರಿಯೆ ನಾಳೆ ಹಾಸನದ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆಯಲಿದೆ. ದೇವೇಗೌಡರ ಪದ್ಮನಾಭನಗರದ ನಿವಾಸ ಸಮೀಪದ ಮೈದಾನದಲ್ಲಿ ಇಂದು ಬೆಳಿಗ್ಗೆ 7 ರಿಂದ 11 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 11.05ಕ್ಕೆ ಬೆಂಗಳೂರಿನಿಂದ ಹಾಸನ ಜಿಲ್ಲೆಯ ಹೊಳೆನರಸೀಪುರವರೆಗೆ ಚೆನ್ನಮ್ಮ ಅಂತಿಮ ಯಾತ್ರೆ ನಡೆಯಲಿದೆ. ಹೊಳೆನರಸೀಪುರದ ರೇವಣ್ಣ ನಿವಾಸದಲ್ಲಿ ನಾಳೆ ಬೆಳಗ್ಗೆ 7 ರಿಂದ 9.30ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 10 ಗಂಟೆಗೆ ಹೊಳೆನರಸೀಪುರದಿಂದ ಪಾರ್ಥಿವ ಶರೀರ ರವಾನೆಯಾಗಲಿದೆ. ಬೆಳಗ್ಗೆ 11.30ಕ್ಕೆ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಅಂತಿಮಯಾತ್ರೆ ಸಾಗುವ ಮಾರ್ಗ
ಬೆಂಗಳೂರಿನಿಂದ ನೆಲಮಂಗಲ ಕ್ರಾಸ್, ಸೋಲೂರು ಕ್ರಾಸ್, ಮರೂರು ಹ್ಯಾಂಡ್ ಪೋಸ್ಟ್, ಕುಣಿಗಲ್ ಕ್ರಾಸ್, ಬೆಳ್ಳೂರು ಕ್ರಾಸ್, ಕದಬಳ್ಳಿ ಕ್ರಾಸ್, ಹಿರಿಸಾವೆ, ಚನ್ನರಾಯಪಟ್ಟಣ, ಎಲೆಯೂರು, ಹಾಸನ ಡೈರಿ ಸರ್ಕಲ್, ಭೂನಳ್ಳಿ ಕ್ರಾಸ್, ಶಾಂತಿ ಗ್ರಾಮ, N.R.ಸರ್ಕಲ್ ಮೂಲಕ ಮೊಸಳೆ ಹೊಸಳ್ಳಿಗೆ ತಲುಪಲಿದೆ.
ಇದನ್ನೂ ಓದಿ: ಆ್ಯಸಿಡ್ ದಾಳಿಗೂ ಮುನ್ನ ಮಾಜಿ ಪ್ರಧಾನಿ ಪತ್ನಿ ಚೆನ್ನಮ್ಮ ಹೇಗಿದ್ರು ಗೊತ್ತಾ? ಇಲ್ಲಿವೆ ಅಪರೂಪದ ಚಿತ್ರಗಳು
ಶೈತ್ಯಾಗಾರ ಪೆಟ್ಟಿಗೆ ಮೇಲೆರಗಿ ದೇವೇಗೌಡರು ಕಣ್ಣೀರು
ಇನ್ನು ಪತ್ನಿಯ ಅಗಲುವಿಕೆಯ ನೋವಲ್ಲಿರುವ ದೇವೇಗೌಡರು, ದುಃಖ ತಾಳಲಾರದೆ ಚೆನ್ನಮ್ಮ ಅವರ ಪಾರ್ಥಿವ ಶರೀರ ಇರಿಸಿದ್ದ ಶೈತ್ಯಾಗಾರ ಪೆಟ್ಟಿಗೆ ಮೇಲೆರಗಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ಮಾಜಿ ಪ್ರಧಾನಿಗಳನ್ನು ಮಗಳು ಶೈಲಜಾ ಸಂತೈಸಿದ್ದಾರೆ.
ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
ಚೆನ್ನಮ್ಮನ್ನವರ ಅಂತಿಮ ದರ್ಶನ ಪಡೆದ ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆಗೆ ತೀರ್ಮಾನಿಸಿರೋದಾಗಿ ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ದೇಶದ ಮಾಜಿ ಪ್ರಧಾನಿಯ ಧರ್ಮಪತ್ನಿ, ಕೇಂದ್ರ ಸಚಿವರ ತಾಯಿ ಎಂಬುದನ್ನು ಗಮನದಲ್ಲಿರಿಸಿ ಈ ತೀರ್ಮಾನ ಮಾಡಿರೋದಾಗಿ ಹೇಳಿದ್ದಾರೆ. ಇಂದು ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿಯೂ ಚೆನ್ನಮ್ಮನವರಿಗೆ ಗೌರವ ನಮನ ಸಲ್ಲಿಸಲಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 6:41 am, Sun, 19 July 26
